ತುಮಕೂರಿನ ಕರ್ಣಾಟಕ ಬ್ಯಾಂಕ್ ಎಟಿಎಂ ನಲ್ಲಿ ಹಣ ಕಳವು
ತುಮಕೂರು, ಜನವರಿ 24: ತುಮಕೂರು ನಗರದ ಕರ್ಣಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಣ ಕಳವು ಮಾಡಲಾಗಿದೆ. ಮುಖ ಮರೆ ಮಾಡಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸಿರುವ ಮೂವರು ಹಣವನ್ನು ದೋಚಿದ್ದಾರೆ. ಅದಕ್ಕೂ ಮೊದಲು ರಕ್ಷಣಾ ಸಿಬ್ಬಂದಿಯನ್ನು ದೊಣ್ಣೆಯಿಂದ ಹೊಡೆದು, ಹೆದರಿಸಿ, ಕಟ್ಟಿಹಾಕಿದ್ದಾರೆ.
ಇನ್ನು ಎಟಿಎಂನಲ್ಲಿ ಹಣವಿರುವ ಐದು ಬಾಕ್ಸ್ ಗಳಿದ್ದವು. ಅವುಗಳಲ್ಲಿ ನಾಲ್ಕನ್ನು ಹೊತ್ತೊಯ್ಯಲಾಗಿದೆ. ಸೋಮವಾರವಷ್ಟೇ ಎಟಿಎಂ ಯಂತ್ರದೊಳಗೆ ಹಣ ತುಂಬಲಾಗಿತ್ತು. ಆ ಮೊತ್ತ ಇಪ್ಪತ್ತಾರು ಲಕ್ಷ ರುಪಾಯಿ ಎಂದು ಪೊಲೀಸರಿಗೆ ಬ್ಯಾಂಕ್ ನವರು ಮಾಹಿತಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ತಿಲಕ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.[ಕೋಲಾರ: 2 ಕೃಷ್ಣ ಮೃಗಗಳನ್ನು ಕೊಂದು ಸೆರೆ ಸಿಕ್ಕ ಮೂವರು]
ರಾಷ್ಟ್ರೀಯ ಹೆದ್ದಾರಿ 206ರ ಕುಂಟಮ್ಮನ ತೋಟದ ಹತ್ತಿರ ಇರುವ ಕರ್ಣಾಟಕ ಬ್ಯಾಂಕ್ ಎಟಿಎಂನಿಂದ ಹಣವನ್ನು ದೋಚಲಾಗಿದೆ. ಈ ಸ್ಥಳವು ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರುತ್ತದೆ. ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಹಣ ದೋಚಿದವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ.