ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಜನಾರ್ದನ ರೆಡ್ಡಿ
ತುಮಕೂರು, ಏಪ್ರಿಲ್ 18: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಸವ ಜಯಂತಿ ಪ್ರಯುಕ್ತ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದರು.
ಈ ಸಮಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಬಾರಿ ಮಠಕ್ಕೆ ಬಂದಿದ್ದು ಈ ಬಾರಿ ಬಸವ ಜಯಂತಿ ಹಿನ್ನೆಲೆ ಮಠಕ್ಕೆ ಆಗಮಿಸಿದ್ದೇನೆ, ಶ್ರೀಗಳ ದರ್ಶನ ಪಡೆಯುವುದು ಭಾಗ್ಯ ಎಂದರು.
ಬಳ್ಳಾರಿಗೆ ನನಗೆ ಪ್ರವೇಶ ಇರದ ಕಾರಣ ಗಡಿ ಗ್ರಾಮವಾಗಿರೋ ರಾಂಪುರದಲ್ಲೇ ಇದ್ದುಕೊಂಡು ಚಿತ್ರದುರ್ಗ, ಬಳ್ಳಾರಿ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತೇನೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಾಗಿ ಹೇಳಿದ ಅವರು, ಸ್ನೇಹಿತ ಶ್ರೀರಾಮುಲು ಪರ ಮೊಳಕಾಲ್ಮೂರಿನಲ್ಲಿ ಇಂದಿನಿಂದಲೇ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವೆ ಎಂದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಯ ಎಂದ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿಗೂ ಪಕ್ಷ ಕ್ಕೂ ಯಾವುದೇ ಸಂಬಂಧ ಇಲ್ಲ ಎಂಬ ಅಮಿತ್ ಷಾ ಹೇಳಿಕೆಗೆ ಜನಾರ್ಧನ ರೆಡ್ಡಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.