ವಿಶ್ವೇಶ ತೀರ್ಥರ ಟೂರ್, ಮುಸ್ಲಿಮರ ನಿರಾಸಕ್ತಿ: ಉಡುಪಿ ಇಫ್ತಾರ್ ರದ್ದು
ತುಮಕೂರು, ಜೂನ್ 9 : ಈ ವರ್ಷ ನಾವು ಪ್ರವಾಸದಲ್ಲಿ ಇರುವುದರಿಂದ ರಂಜಾನ್ ಮಾಸದ ಇಫ್ತಾರ್ ಕೂಟ ಆಯೋಜಿಸುತ್ತಿಲ್ಲ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ತುಮಕೂರಿನಲ್ಲಿ ಶನಿವಾರ ಹೇಳಿದ್ದಾರೆ. ಇಲ್ಲಿ ಆ ಬಗ್ಗೆ ಮಾತನಾಡಿ, ಕಳೆದ ಬಾರಿ ಇಫ್ತಾರ್ ಆಯೋಜನೆ ಮಾಡಲಾಗಿತ್ತು. ಈ ಬಾರಿ ನಾನು ಪ್ರವಾಸದಲ್ಲಿ ಇರುವುದರಿಂದ ಅದು ಸಾಧ್ಯವಾಗಲಿಲ್ಲ ಎಂದರು.
ಇನ್ನು ಮಠದಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಮುಸ್ಲಿಂ ಬಾಂಧವರಲ್ಲಿ ಆಸಕ್ತಿ ಇಲ್ಲ. ಕಳೆದ ಬಾರಿ ದೇವರ ಮೂರ್ತಿ ಇರುವ ಕೊಠಡಿಯಲ್ಲಿ ಇಫ್ತಾರ್ ಆಯೋಜನೆ ಮಾಡಿದ್ದಾರೆ ಎಂದ ಅಪನಂಬಿಕೆ ಅವರಲ್ಲಿ ಇದೆ. ಆದರೆ ಆ ಕೊಠಡಿಯಲ್ಲಿ ಮೂರ್ತಿ ಇರಲಿಲ್ಲ. ಪಕ್ಕದ ಕೊಠಡಿಯಲ್ಲಿ ಮೂರ್ತಿ ಇತ್ತು. ಹಾಗಾಗಿ ಅವರೇ ಇಫ್ತಾರ್ ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ: ಪೇಜಾವರ ಶ್ರೀ
ಇನ್ನು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ನಾನು ಟೀಕೆ ಮಾಡಿರಲಿಲ್ಲ, ಸಲಹೆ ನೀಡಿದ್ದೆ ಅಷ್ಟೆ. ಮಾಧ್ಯಮಗಳು ಅಪಾರ್ಥ ಮಾಡಿಕೊಂಡಿವೆ. ಗಂಗಾ ಶುದ್ಧೀಕರಣ ಕೆಲಸ ಇನ್ನಷ್ಟು ಚುರುಕುಗೊಳಿಸುವಂತೆ ಸಲಹೆ ನೀಡಿದ್ದೆ. ವಿದೇಶದಿಂದ ಕಪ್ಪು ಹಣ ಶೀಘ್ರ ತರುವಂತೆ ಹೇಳಿದ್ದೆ. ಹಗರಣ ಮುಕ್ತ, ಆರ್ಥಿಕ ಸುಭದ್ರತೆ ಇರುವ ಸರಕಾರ ನೀಡುವಂತೆ ಸಲಹೆ ಮಾಡಿದ್ದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಸಮಿಶ್ರ ಸರಕಾರ ಅಸ್ತಿತ್ವದಲ್ಲಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ತಿಳಿಸಿದ ಅವರು, ಎರಡು ಪಕ್ಷಕ್ಕಿಂತ ಸರ್ವ ಪಕ್ಷ ಅಧಿಕಾರಕ್ಕೆ ಬಂದರೆ ಒಳಿತು. ಆಗ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ನಿಲ್ಲುತ್ತದೆ. ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಬೈದಾಡಿಕೊಂಡಿದ್ದರು. ಈಗ ಜೊತೆಯಾಗಿದ್ದಾರೆ. ಅಷ್ಟು ಬೈದಾಡಿಕೊಂಡಿದ್ದವರಿಂದ ಸ್ಥಿರ ಸರಕಾರ ಕೊಡಲು ಸಾಧ್ಯವಿಲ್ಲ ಎಂದರು.
ವಿರೋಧ ಪಕ್ಷ ಇಲ್ಲದಿದ್ದರೂ ಪರವಾಗಿಲ್ಲ, ಸರ್ವ ಪಕ್ಷದ ಸರಕಾರ ಬರಲಿ. ಯುರೋಪ್ ಮತ್ತು ಇಂಗ್ಲೆಂಡ್ ನ ಲ್ಲಿ ಸರ್ವಪಕ್ಷ ಸರಕಾರ ರಚನೆಯಾದ ಮಾದರಿ ಇದೆ. ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ದಾಗ ಸರ್ವಪಕ್ಷ ಆಡಳಿತ ಬರಲಿ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟರು.