ಸೊಗಡು ಶಿವಣ್ಣರ ಮಾರ್ಗದರ್ಶನದಲ್ಲಿ ಚುನಾವಣೆ ಮಾಡ್ತಾರಂತೆ ಜ್ಯೋತಿಗಣೇಶ್
ತುಮಕೂರು, ಏಪ್ರಿಲ್ 18 : ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸುವುದಾಗಿ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.
ತುಮಕೂರಿನ ಗಾಂಧಿನಗರದಲ್ಲಿರುವ ನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 20ರಂದು ಬೆಳಗ್ಗೆ 9.30ಕ್ಕೆ ಕಾಲ್ಟೆಕ್ಸ್ ಬಳಿ ಇರುವ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಆ ಬಳಿಕ ಬಿಜಿಎಸ್ ಸರ್ಕಲ್, ಎಂ.ಜಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ, ಮಧ್ಯಾಹ್ನ 12ರಿಂದ 12.30ರ ಮಧ್ಯೆ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು
ತುಮಕೂರು ನಗರ ಬಿಜೆಪಿ ಟಿಕೆಟ್ ಜ್ಯೋತಿಗಣೇಶ್ ಗೆ, ಭಿನ್ನಮತ ಭುಗಿಲು
ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಪಕ್ಷದ ಹಿರಿಯ ಮುಖಂಡ ಸಿ.ವಿ.ಮಹದೇವಯ್ಯ ಅವರ ಮಾರ್ಗದರ್ಶನದಂತೆ ಚುನಾವಣೆ ನಡೆಯಲಿದೆ. ಪಕ್ಷದಲ್ಲಿರುವ ಸಣ್ಣ- ಪುಟ್ಟ ಗೊಂದಲವನ್ನು ವರಿಷ್ಠರು ಬಗೆಹರಿಸುತ್ತಾರೆ. ಮಾಜಿ ಸಚಿವ ಸೊಗಡು ಶಿವಣ್ಣ ಅವರ ಜೊತೆ ಪಕ್ಷದ ಹಿರಿಯ ಮುಖಂಡರು ನಿರಂತರ ಸಂಪರ್ಕದಲ್ಲಿದ್ದಾರೆ. ಗೊಂದಲ ಬಗೆಹರಿಯಲಿದೆ. ನಾನು ಸಹ ಅವರನ್ನು ಭೇಟಿ ಮಾಡಿ, ಬೆಂಬಲ ಯಾಚಿಸುತ್ತೇನೆ ಎಂದು ತಿಳಿಸಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ತುಮಕೂರು ನಗರಕ್ಕೆ ಕೋಟಿಗಟ್ಟಲೆ ಅನುದಾನ ಹರಿದು ಬಂದಿದೆ. ಆದರೆ ನಗರದ ಯಾವ ಭಾಗಕ್ಕೆ ತೆರಳಿದರೂ ಸಾಲು ಸಾಲು ಸಮಸ್ಯೆ ಕಾಣುತ್ತಿವೆ. ಮೂಲಸೌಲಭ್ಯಗಳ ಕೊರತೆಯಿಂದ ಜನ ಕಂಗೆಟ್ಟಿದ್ದಾರೆ. ತುಮಕೂರು ನಗರ ಶಾಸಕರು ಅಭಿವೃದ್ಧಿ ವಿರೋಧಿ ನೀತಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಬಿಜೆಪಿ ನಗರಾಧ್ಯಕ್ಷ ಸಿ.ಎನ್.ರಮೇಶ್, ಬಿಜೆಪಿ ಮುಖಂಡರಾದ ಸಕ್ಕರೆ ಕುಮಾರಸ್ವಾಮಿ, ಎಚ್.ಎಂ. ರವೀಶ್, ವಿನಯ್ ಜೈನ್, ಆರ್.ಜೆ.ಸುರೇಶ್, ಗಿರಿಯಪ್ಪ, ಧನಿಯಾ ಕುಮಾರ್, ಬಿ.ಡಿ.ಗೋಪಾಲಗೌಡ, ಬಿ.ಸಿ. ನಾಗೇಶ್, ವೆಂಕಟಪ್ಪ, ವೆಂಕಟೇಶ್, ಹನುಮಂತರಾಯಪ್ಪ, ಶಂಭುಲಿಂಗಸ್ವಾಮಿ ಇತರರಿದ್ದರು.