ತುಮಕೂರಿನಲ್ಲಿ 'ಆಪರೇಷನ್ ಚಿರತೆ', ಅಸಹಾಯಕ ಅರಣ್ಯ ಇಲಾಖೆ
ತುಮಕೂರು, ಜನವರಿ 20 : ನಗರಕ್ಕೆ ಸ್ವಲ್ಪ ಈಚೆ ಎನಿಸುವ ಜಯನಗರದ ಮನೆಯೊಂದರಲ್ಲಿ ಏಕಾಏಕಿ ನುಗ್ಗಿದ ಚಿರತೆ ಶನಿವಾರ ಅಡುಗೆ ಮನೆಯ ಅಟ್ಟ ಸೇರಿ ಎಬ್ಬಿಸಿದ ದಾಂಧಲೆ ಒಂದೆರಡಲ್ಲ. ಇಡೀ ದಿನ ಮಾಧ್ಯಮಗಳಿಗೆ ಸುದ್ದಿಯ ಆಹಾರವಾದ ಚಿರತೆಗೆ ಅರಿವಳಿಕೆ ನೀಡಿ, ಸೆರೆ ಹಿಡಿಯುವಲ್ಲಿ ಅಂತೂ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಆದರೆ, ಈ ಇಡೀ ಘಟನೆಯಿಂದ ಪಾಠವೊಂದಿದೆ. ತುಮಕೂರು ನಗರ ಇರುವುದೇ ಅಂಗೈ ಅಗಲ. ಈ ಹಿಂದೆ ತುಮಕೂರು ವಿಶ್ವವಿದ್ಯಾಲಯದ ಎದುರಿಗೆ ಅಂದರೆ ಬಿ.ಎಚ್.ರಸ್ತೆಯಲ್ಲಿ ಕಾಡಾನೆಗಳು ಓಡಾಡಿದ್ದವು. ಅಷ್ಟೇ ಏಕೆ, ಹೆಬ್ಬೂರಿಗೆ ಹೋಗುವ ರಸ್ತೆಗೆ ಮುಂಚೆ ಕುಣಿಗಲ್ ರಸ್ತೆಯ ಎಡಕ್ಕೆ ಹೋಗುವ ಜನವಸತಿ ಪ್ರದೇಶ ದಿಬ್ಬೂರು ಬಳಿಯೂ ಕಾಡಾನೆ ಹಿಂಡು ಕಾಣಿಸಿಕೊಂಡಿತ್ತು.
ಉಡುಪಿ : ಗ್ರಾಪಂ ಉಪಾಧ್ಯಕ್ಷೆ ಮನೆಗೆ ಅತಿಥಿಯಾಗಿ ಬಂದ ಚಿರತೆ
ಅಷ್ಟೇ ಏಕೆ, ಕರಡಿಯೊಂದು ನಗರದೊಳಗೆ ಕಾಣಿಸಿಕೊಂಡು, ಜನರು ಗಾಬರಿ ಬಿದ್ದು ಹೋಗಿದ್ದರು. ಇನ್ನೂ ಸ್ವಲ್ಪ ಹಿಂದಿನ ಘಟನೆ ಅಂತ ನೆನಪಿಸಿಕೊಳ್ಳುವುದಾದರೆ ಪರಮೇಶ್ವರ್ ಅವರ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಿರತೆ ಕಾಣಿಸಿಕೊಂಡು, ಭಾರೀ ಸುದ್ದಿಯಾಗಿತ್ತು. ಇವೆಲ್ಲ ತುಮಕೂರು ನಗರಕ್ಕೂ ವನ್ಯಪ್ರಾಣಿಗಳಿಗೂ ಇರುವ ನಂಟನ್ನು ಸೂಚಿಸುತ್ತವೆ.
ಅರಣ್ಯ ಇಲಾಖೆ ಬಗ್ಗೆ ಸರಕಾರಕ್ಕೆ ಪ್ರೀತಿ ಇಲ್ಲ
ಆದರೆ, ಶನಿವಾರದ ದಿನ ಜಯನಗರದಂಥ ಬಡಾವಣೆಗೆ ಚಿರತೆ ಬಂದು, ಅಡುಗೆ ಮನೆಯೊಳಗೆ ಸಿಕ್ಕಿಬಿದ್ದಿದ್ದು ಮಾತ್ರ ಆತಂಕವನ್ನು ಮತ್ತೂ ಹೆಚ್ಚಿಸಿದೆ. ಅರಣ್ಯ ಇಲಾಖೆ ಬಗ್ಗೆ ಸರಕಾರಕ್ಕೂ ಯಾವುದೇ ಮಮಕಾರ ಇಲ್ಲ. ಏಕೆಂದರೆ, ಅದು ಆದಾಯ ತರುವಂಥ ಇಲಾಖೆ ಅಲ್ಲವೇ ಅಲ್ಲ. ಬರೀ ಖರ್ಚು ಮಾಡುವ ಸಲುವಾಗಿ ಇರುವ ಇಲಾಖೆ ಬಗ್ಗೆ ಪ್ರೀತಿಯೂ ಇಲ್ಲ.
ಕೊಲ್ಲುವ ಪ್ರಯತ್ನದಂತಿತ್ತು
ಜಯನಗರದಲ್ಲಿ ಕಾಣಿಸಿಕೊಂಡ ಚಿರತೆಗೆ ಎಂಟು ವರ್ಷ ಇರಬಹುದು ಎಂಬ ಅಂದಾಜು ಮಾಡಲಾಗಿದೆ. ದೇವರಾಯನ ದುರ್ಗದ ಕಡೆಯಿಂದ ಅದು ಬಂದಿರಬಹುದು ಎಂಬ ಗುಮಾನಿ ಕೂಡ ಇದೆ. ಚಿರತೆಗಳು ಜನವಸತಿ ಪ್ರದೇಶಗಳ ಬಳಿ ಕಾಣಿಸಿಕೊಳ್ಳುವುದು ಖಂಡಿತಾ ಹೊಸದಲ್ಲ. ಆದರೆ ಅವುಗಳನ್ನು ಹಿಡಿಯಲು ಮಾಡುವ ಪ್ರಯತ್ನಗಳಂತೂ ಅಕ್ಷರಶಃ ಕೊಲ್ಲುವ ಪ್ರಯತ್ನದಂತೆಯೇ ಇರುತ್ತವೆ.
ಅಷ್ಟು ಜನರನ್ನು ಗುಡ್ಡೆ ಹಾಕಿಕೊಳ್ತಾರಾ?
ಸಂಜಯ್ ಗುಬ್ಬಿಯಂಥ ತಜ್ಞರ ಸಹಾಯ ಇರುವಾಗಲೂ ಅರಣ್ಯ ಇಲಾಖೆಯವರು ಹೀಗೆ ನಡೆದುಕೊಳ್ತಾರಲ್ಲಾ ಅನ್ನೋದು ಬೇಸರ. ಹಗಲು ಹೊತ್ತಿನಲ್ಲಿ, ಅಷ್ಟೊಂದು ಜನರನ್ನು ಗುಡ್ಡೆ ಹಾಕಿಕೊಂಡು, ಜೋರು ಶಬ್ದ ಮಾಡಿಸಿ...ಚಿರತೆಯನ್ನು ಇವರೆಲ್ಲರಿಂದ ಯಾರು ರಕ್ಷಿಸುತ್ತಾರೆ ಎಂಬ ಪ್ರಶ್ನೆ ಬರುವ ಹಾಗಿತ್ತು ರಕ್ಷಣಾ ಕಾರ್ಯಾಚರಣೆ.
ವನ್ಯಪ್ರಾಣಿಗಳ ವೈದ್ಯರು ಎಷ್ಟು ಜನ ಇದ್ದಾರೆ?
ಇನ್ನು ಪಶುವೈದ್ಯರು ಅಂತ ಇರುತ್ತಾರಲ್ಲಾ ಅಂಥವರಿಗೆ ಇಂಥ ವನ್ಯಪ್ರಾಣಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಸಂಪೂರ್ಣ ಅರಿವು ಇರುವುದಿಲ್ಲ. ಕೆಲವರು ಆಸಕ್ತಿಯಿಂದ ಓದಿಕೊಂಡಿರಬಹುದು. ಆದರೆ ಸಾಲಲ್ಲ. ಆನೆ, ಕರಡಿ, ಚಿರತೆ, ಹುಲಿ ಇಂಥ ಪ್ರಾಣಿಗಳ ವೈದ್ಯರೇ ಬೇರೆ. ಇಂಥ ವೈದ್ಯರು ಎಷ್ಟು ಮಂದಿ ಇದ್ದಾರೆ? ರಾಜ್ಯ ಸರಕಾರ ಇಂಥ ಎಷ್ಟು ಮಂದಿ ಜತೆಗೆ ಸಂಪರ್ಕದಲ್ಲಿದೆ ಅನ್ನೋದೇ ಪ್ರಶ್ನೆ. ಇನ್ನು ಬೋನು, ಬಲೆ, ಅರಿವಳಿಕೆ ಮದ್ದು ಇವೆಲ್ಲವೂ ವೈಜ್ಞಾನಿಕವಾಗಿದ್ದವೆ ಬಳಕೆ ಆಗುತ್ತಿವೆಯೇ ಎಂಬುದು ಕೂಡ ಪ್ರಶ್ನೆಯೇ.
ಬನ್ನೇರುಘಟ್ಟದಲ್ಲಿ ಎಷ್ಟು ಪ್ರಾಣಿಗಳಿವೆ?
ಪ್ರತಿ ಸಲ ವನ್ಯಪ್ರಾಣಿಗಳು ಸಿಕ್ಕಾಗ ಬನ್ನೇರುಘಟ್ಟಕ್ಕೆ ಬಿಡ್ತೀವಿ ಅನ್ನೋದು ತುಂಬ ಸಾಮಾನ್ಯ ಹೇಳಿಕೆ. ಇದುವರೆಗೆ ಬನ್ನೇರುಘಟ್ಟಕ್ಕೆ ಬಿಟ್ಟ ಪ್ರಾಣಿಗಳೆಷ್ಟು? ಅವುಗಳಲ್ಲಿ ಎಷ್ಟು ಜೀವಂತ ಇವೆ ಎಂಬುದನ್ನು ಕೂಡ ಜನರಿಗೆ ಅಧಿಕಾರಿಗಳು ತಿಳಿಸಬೇಕು. ಇನ್ನು ಯಾವುದೇ ಪ್ರಾಣಿಗೆ ಅದರ ಆವಾಸಸ್ಥಾನ ಬಹಳ ಮುಖ್ಯ. ಅಲ್ಲಿಂದ ಹೊರಬಿದ್ದರೆ ಅವು ಬಹಳ ಕಾಲ ಬದುಕುವುದು ಸಹ ಕಷ್ಟ. ಅಂಥದ್ದರಲ್ಲಿ ಅವುಗಳನ್ನು ಮತ್ತೆ ಅವಾಸ ಸ್ಥಾನಕ್ಕೆ ಬಿಡಬೇಕೋ ಅಥವಾ ಬನ್ನೇರುಘಟ್ಟಕ್ಕೆ ಸಾಗಹಾಕಬೇಕೋ?