ತುಮಕೂರು ಮಾಜಿ ಮೇಯರ್ ರವಿ ಕುಮಾರ್ ಹತ್ಯೆ ನಡೆದಿದ್ದು ಹೇಗೆ?
ತುಮಕೂರು, ಸೆಪ್ಟೆಂಬರ್ 30 : ಜೆಡಿಎಸ್ ನಾಯಕ, ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಕಾರ್ಪೊರೇಟರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿಯನ್ನು ಭಾನುವಾರ ಬೆಳಗ್ಗೆ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಟೆಂಪೋನಲ್ಲಿ ಬಂದ 7 ದುಷ್ಕರ್ಮಿಗಳ ತಂಡ ರವಿ ಕುಮಾರ್ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಶವವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ತುಮಕೂರು : ರೌಡಿ ಶೀಟರ್, ಮಾಜಿ ಮೇಯರ್ ಬೆಳ್ಳಂಬೆಳಗ್ಗೆ ಹತ್ಯೆ
ರವಿ ಕುಮಾರ ಹತ್ಯೆ ಬಳಿಕ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಮೃತದೇಹ ಇರಿಸಿರುವ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಗುಬ್ಬಿ ಶಾಸಕ ಹಾಗೂ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಅವರ ಆಪ್ತರಾಗಿದ್ದ ರವಿಕುಮಾರ್ ಮೇಲೆ ಹಲವು ಬಾರಿ ದಾಳಿ ನಡೆದಿದ್ದವು. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.
ಜಯನಗರ ಸಹನಾ ಹತ್ಯೆ, ಸಕಲೇಶಪುರ ಎಸ್ಟೇಟ್, ಆಪರೇಷನ್ ಕಮಲ!
ಗುಬ್ಬಿ ಶಾಸಕ ಹಾಗೂ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಅವರ ಆಪ್ತ ಶಿಷ್ಯನಾಗಿದ್ದ ರವಿಕುಮಾರ್ ಮೇಲೆ ಹಲವು ಬಾರಿ ದಾಳಿಗಳು ನಡೆದಿದ್ದವು. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನ ರೌಡಿಗಳ ತಂಡ ರವಿಕುಮಾರ್ ಕೊಲೆಗೆ ಸುಪಾರಿ ಪಡೆದಿದೆ ಎಂದು ಪೊಲೀಸರು ಶಂಕಿಸಿ, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾ ಪೊಲೀಸರು ಕೌನ್ಸಿಲರ್ಗೆ ಮಾಹಿತಿ ನೀಡಿದ್ದರು.
ಮನೆ ಕಡೆ ಹೊರಟಿದ್ದರು
ರವಿಕುಮಾರ್ ಅವರು ಭಾನುವಾರ ಬೆಳಗ್ಗೆ ವಾಯುವಿಹಾರ ಮುಗಿಸಿ ತಮ್ಮ ವಾರ್ಡ್ನ ಜನರ ಸಮಸ್ಯೆ ಆಲಿಸಿದ್ದರು. ಬಳಿಕ ರಾಷ್ಟ್ರೀಯ ಹೆದ್ದಾರಿ 48ರ ಬಟವಾಡಿ ಸೇತುವೆ ಬಳಿಯ ಸರ್ವೀಸ್ ರಸ್ತೆಯಲ್ಲಿ ಇರುವ ತಮ್ಮ ಚಿಕ್ಕಪ್ಪ ಮೂರ್ತಿ ಅವರ ಹೋಟೆಲ್ಗೆ ಹೋಗಿ ಟೀ ಕುಡಿದಿದ್ದರು.
ಅಲ್ಲಿ ಸ್ವಲ್ಪ ಹೊತ್ತು ಚಿಕ್ಕಪ್ಪ ಜೊತೆ ಮಾತನಾಡಿ ಮನೆ ಕಡೆಗೆ ನಡೆದುಕೊಂಡು ಹೋಗಲು ಸಿದ್ಧರಾಗುತ್ತಿದ್ದರು. ಆಗ ಟೆಂಪೋದಿಂದ ಬಂದಿಳಿದ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಏಕಾಏಕಿ ರವಿ ಅವರ ಮೇಲೆ ಮುಗಿಬಿದ್ದು, ಕೊಚ್ಚಿ ಕೊಲೆ ಮಾಡಿದ್ದಾರೆ. ತಕ್ಷಣ ಅದೇ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು.
ಸ್ಥಳದಲ್ಲಿಯೇ ಮೃತಪಟ್ಟರು
ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ರವಿ ಕುಮಾರ್ ಅವರ ತಲೆ ಬುರುಡೆ ಕತ್ತರಿಸ್ಪಟ್ಟಿದ್ದು, ಮೆದುಳು ರಸ್ತೆಯಲ್ಲಿ ಬಿದ್ದಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಕ್ಯಾತ್ಸಂದ್ರ ಪೊಲೀಸರು ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ರವಿ ಅವರ ಚಿಕ್ಕಪ್ಪ ಮೂರ್ತಿ ಅವರ ಕಣ್ಣೆದುರೇ ಈ ಘಟನೆ ನಡೆದಿದ್ದು, ಅವರು ತೀವ್ರವಾಗಿ ಆಘಾತಕ್ಕೆ ಒಳಗಾಗಿದ್ದಾರೆ. 'ರವಿಗೆ ನಾನೇ ಎರಡು ಕಪ್ ಟೀ ಬಲವಂತವಾಗಿ ನೀಡಿದೆ. ಸ್ವಲ್ಪ ಹೊತ್ತು ಅಂಗಡಿಯಲ್ಲೇ ನಿಂತು ಮಾತನಾಡಿ, ಮನೆಗೆ ಕಡೆಗೆ ಹೊರಡುವಷ್ಟರದಲ್ಲಿ ಈ ಕೃತ್ಯ ನಡೆದಿದೆ' ಎಂದರು.
ಮಾಜಿ ಮೇಯರ್, ಹಾಲಿ ಕಾರ್ಪೊರೇಟರ್
ಕೆಲವು ದಿನಗಳ ಹಿಂದೆ ನಡೆದ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 22ನೇ ವಾರ್ಡ್ನಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ, ರವಿ ಕುಮಾರ್ ಗೆಲುವು ಸಾಧಿಸಿದ್ದರು. ಈ ಹಿಂದೆ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಗಿಯೂ ಕೆಲಸ ಮಾಡಿದ್ದರು.
ಮೂಲತಃ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಕಡಿಯಾಲದ ನಿವಾಸಿಯಾಗಿದ್ದ ರವಿಕುಮಾರ್ 20 ವರ್ಷಗಳ ಹಿಂದೆ ತುಮಕೂರು ನಗರಕ್ಕೆ ಬಂದು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನಗರಸಭೆ ಸದಸ್ಯ ಆಂಜಿನಪ್ಪ ಅವರ ಒಡನಾಡ ಬೆಳೆಸಿಕೊಂಡ ರವಿ ಅವರು ರಾಜಕೀಯದಲ್ಲೂ ಕಾಣಿಸಿ ಕೊಳ್ಳತೊಡಗಿದರು. ರೌಡಿ ಶೀಟರ್ ಆಗಿದ್ದ ಆಂಜಿನಪ್ಪ ಅವರನ್ನು ಬಾಲಾಜಿ ಮತ್ತು ತಂಡ, ಅಗ್ನಿಶಾಮಕ ಠಾಣೆಯ ರೈಲ್ವೆ ಗೇಟ್ ಬಳಿ ಬರ್ಬರವಾಗಿ ಕೊಲೆ ಮಾಡಿತ್ತು.
ಬಳಿಕ ರವಿ ಕುಮಾರ್ ಟೋಪಿ ಸತೀಶ್ ಜೊತೆ ಸೇರಿ ರಿಯಲ್ ಎಸ್ಟೇಟ್ ಮತ್ತಿತರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದರು. ಕ್ಯಾತ್ಸಂದ್ರ ಮತ್ತು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ರವಿ ಕುಮಾರ್ಗೂ ಟೋಪಿ ಸತೀಶ್ ನಡುವೆ ರಾಜಕೀಯ ಕಾರಣಕ್ಕಾಗಿ ವೈಷಮ್ಯ ಉಂಟಾಗಿತ್ತು.
15 ದಿನಗಳಿಂದ ಸ್ಕೇಚ್
ಕಳೆದ 15 ದಿನಗಳಿಂದ ದುಷ್ಕರ್ಮಿಗಳ ತಂಡ ರವಿಕುಮಾರ್ ಹತ್ಯೆಗೆ ಸಂಚು ರೂಪಿಸಿ ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಎಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ಕಾದು ಕುಳಿತು ಹತ್ಯೆ ಮಾಡಿದೆ.
ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಡಿವೈಎಸ್ಪಿ ನಾಗರಾಜ್, ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ರಾಮಕೃಷ್ಣ, ಸಬ್ ಇನ್ಸ್ಪೆಕ್ಟರ್ ನವೀನ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.