ಎಚ್.ಡಿ.ದೇವೇಗೌಡರು ಜಗ್ಗೇಶ್ ಮಿಮಿಕ್ರಿ ಬಗ್ಗೆ ಹೇಳಿದ್ದೇನು?
ತುಮಕೂರು, ನವೆಂಬರ್ 4 : ಜೆಡಿಎಸ್ ಪಕ್ಷಕ್ಕೆ ಮತಹಾಕಿ ಎಂದು ಎಚ್.ಡಿ.ದೇವೇಗೌಡರು ಕೇಳಿಕೊಂಡರೂ ಹಾಕಬೇಡಿ ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಮಿಮಿಕ್ರಿ ಮಾಡಿದ್ದಾರೆ. 'ಜಗ್ಗೇಶ್ ದೊಡ್ಡವರು ಜೊತೆಗೆ ಚಿತ್ರನಟರು, ಅವರ ಬಗ್ಗೆ ನಾನು ಮಾತನಾಡಲು ಸಾಧ್ಯನಾ?' ಎಂದು ದೇವೇಗೌಡರು ತಿರುಗೇಟು ಕೊಟ್ಟಿದ್ದಾರೆ.
ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ಶುಕ್ರವಾರ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್ ದೇವೇಗೌಡರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿದ್ದರು.
ಶುಕ್ರವಾರ ಸಂಜೆ ನೆಲಮಂಗಲದಲ್ಲಿ ಮಾಧ್ಯಮಗಳು ಜಗ್ಗೇಶ್ ಮಿಮಿಕ್ರಿ ಮಾಡಿದ ಬಗ್ಗೆ ಪ್ರಶ್ನಿಸಿದಾಗ ದೇವೇಗೌಡರು, 'ಜಗ್ಗೇಶ್ ದೊಡ್ಡವರು ಜೊತೆಗೆ ಚಿತ್ರ ನಟರು. ಅವರ ಬಗ್ಗೆ ನಾನು ಮಾತನಾಡಲು ಸಾಧ್ಯನಾ?' ಎಂದು ಕೇಳಿದರು.
ಬಿಜೆಪಿ 2018ರ ಚುನಾವಣಾ ಪ್ರಚಾರಕ್ಕಾಗಿ ಆರಂಭಿಸಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆ ಶುಕ್ರವಾರ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಚಾರ ನಡೆಸಿದೆ. ಇಂದು ತುಮಕೂರು ನಗರದಲ್ಲಿ ಯಾತ್ರೆಯ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಜಗ್ಗೇಶ್ ಹೇಳಿದ್ದೇನು?
'ಮುಖ್ಯಮಂತ್ರಿ ಸಿದ್ದರಾಮಯ್ಯ ಏನೋ ಮಾಡ್ತಾರೆ ಎಂದು ಜನರು ಅಧಿಕಾರ ಕೊಟ್ಟರು. ಆದರೆ, ಇದೀಗ ಆಡೋ ಮಕ್ಕಳು ಕೂಡ ಹೇಳ್ತಾರೆ ಅತ್ಯಂತ ಭ್ರಷ್ಟ ಸರ್ಕಾರವೆಂದು' ಎಂದು ಜಗ್ಗೇಶ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
'ತುರುವೇಕೆರೆ ಕ್ಷೇತ್ರ ಅಭಿವೃದ್ಧಿಯಾಗಿದೆ'
'ಯಡಿಯೂರಪ್ಪ ಅವರು ನೀಡಿದ ಅನುದಾನದಿಂದ ಇಂದು ತುರುವೇಕೆರೆ ಕ್ಷೇತ್ರ ಅಭಿವೃದ್ಧಿಯಾಗಿದೆ. ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೃಷ್ಣಪ್ಪರ ಟಪ್ಪಾಂಗುಚ್ಚಿ ನೋಡೋಕೆ ಚಂದ. ಅವರು ಹುಡುಗೀರ ಜೊತೆ ಕುಣಿತಾನೇ ಇರಲಿ. ಜನರು ಒಕ್ಕಲಿಗರಾದ ಮಸಾಲೆ ಜಯರಾಮ್ ಅವರನ್ನು ಗೆಲ್ಲಿಸಬೇಕು ಅಂದ್ರು' ಎಂದು ಜಗ್ಗೇಶ್ ಹೇಳಿದರು.
ಯಾತ್ರೆ ಬಗ್ಗೆ ದೇವೇಗೌಡರು ಹೇಳುವುದೇನು?
ಬಿಜೆಪಿಯ ಪರಿವರ್ತನಾ ಯಾತ್ರೆ ಕುರಿತು ದೇವೇಗೌಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, 'ಜಗತ್ತಿನಲ್ಲಿ ಏನೇನೊ ನಡೆಯತ್ತೆ. ಅದರಲ್ಲಿ ಒಳ್ಳೆಯದು ಇರುತ್ತೆ, ಕೆಟ್ಟದ್ದೂ ಇರತ್ತೆ. ಸೃಷ್ಟಿಕರ್ತನೇ ಒಳ್ಳೆಯದು, ಕೆಟ್ಟದ್ದನ್ನು ಮಾಡಿದ್ದಾನೆ. ಸುಖ-ದುಖಃ ಎಲ್ಲವನ್ನು ಅವನೇ ತೀರ್ಮಾನ ಮಾಡುತ್ತೇನೆ' ಎಂದರು.
ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ
ಸಮಾವೇಶ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಭ್ರಷ್ಟಾಚಾರ ನಿಗ್ರಹ ದಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬ, ಸಚಿವರು ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಡಿಸುತ್ತಿದ್ದಾರೆ' ಎಂದು ಆರೋಪಿಸಿದರು.