ಗೌರಿಶಂಕರ ಸ್ವಾಮೀಜಿ ನಿಧನ: ಸಿದ್ದಗಂಗಾ ಮಠದಲ್ಲಿ ಬಿಗಿಭದ್ರತೆ
ತುಮಕೂರು, ಜನವರಿ 11: ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ತಾಲೂಕಿನ ಜಂಗಮ ಮಠದ ಪೀಠಾಧ್ಯಕ್ಷರಾದ ಗೌರಿಶಂಕರ ಸ್ವಾಮೀಜಿ ಮಂಗಳವಾರ ರಾತ್ರಿ 2 ಗಂಟೆಗೆ ನಿಧನರಾಗಿದ್ದಾರೆ. ಈ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ನಾಲ್ಕು ತಿಂಗಳ ಹಿಂದೆ ಪಾರ್ಶವಾಯುವಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಗೌರಿಶಂಕರ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 2 ಗಂಟೆಗೆ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿಶಂಕರ ಶ್ರೀಗಳ ಪಾರ್ಥೀವ ಶರೀರವನ್ನು ಮಠಕ್ಕೆ ತರದಂತೆ ಸಿದ್ದಗಂಗಾ ಆಡಳಿತಾಧಿಕಾರಿ ವಿಶ್ವನಾಥ್ ತುಮಕೂರು ಜಿಲ್ಲಾ ಆರಕ್ಷಕರಿಗೆ ಪತ್ರ ಬರೆದಿದ್ದು, ಸಿದ್ದಗಂಗಾ ಮಠಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ [ಸಿದ್ದಗಂಗಾ ಮಠಕ್ಕೆ ಗೌರಿ ಶಂಕರ ಸ್ವಾಮೀಜಿ ಭೇಟಿ ಇಲ್ಲ]
ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಯಾಗಿದ್ದ ಗೌರಿಶಂಕರ ಸ್ವಾಮೀಜಿ ಹಲವು ವಿವಾದಗಳಿಂದ ಸಿದ್ಧಗಂಗಾ ಮಠದಿಂದ ಹೊರ ನಡೆದಿದ್ದರು. ಸಿದ್ದಗಂಗಾ ಮಠದ ಉತ್ತರಾದಿಕಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಗೌರಿಶಂಕರ ಸ್ವಾಮೀಜಿಗಳು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಗೊಲ್ಲಹಳ್ಳಿ ಜಂಗಮ ಮಠವನ್ನು ಸ್ಥಾಪಿಸಿ ಪೀಠಾಧ್ಯಕ್ಷರಾಗಿದ್ದರು.[ಅಧಿಕಾರ ಹಸ್ತಾಂತರಕ್ಕೆ ಗೌರಿಶಂಕರ ಸ್ವಾಮೀಜಿ ಆಕ್ಷೇಪ]
ಇನ್ನು ಕಿಮ್ಸ್ ಆಸ್ಪತ್ರೆಯ ವೈದ್ಯರು ಶ್ರೀಗಳ ಪಾರ್ಥೀವ ಶರೀರನ್ನು ಭಕ್ತರಿಗೆ ಒಪ್ಪಿಸಿದ್ದು ಭಕ್ತರು ಶ್ರೀಗಳ ಜನ್ಮಸ್ಥಳವಾದ ಸೀತಕಲ್ಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದಾರೆ.
ಗೌರಿಶಂಕರ ಸ್ವಾಮೀಜಿ ಹಿನ್ನೆಲೆ
* ಹೆಸರು ಜಗದೀಶ್ ( ಗೌರಿಶಂಕರ್ ಸ್ವಾಮೀಜಿ) ,
* ತಂದೆ ಮುದ್ದಪ್ಪ, ತಾಯಿ ಗೌರಮ್ಮ.
* ಜನನ 08-09-1946 ಸಿತಕಲ್ಲು ಗ್ರಾಮದಲ್ಲಿ ಜನನ.
* 1975 ಮೆ 26 ಸಿದ್ದಗಂಗಾ ಮಠದ ಉತ್ತರಾಧಿಕಾರಿ.
* 1987 ಸಲಿಂಗಕಾಮ ಆರೋಪ. ಮಠದಿಂದ ಹೊರಕ್ಕೆ.
* 1988 ಮಠಕ್ಕೆ ಹೊಸ ಉತ್ತರಾಧಿಕಾರಿ ನೇಮಕ. ಕೋರ್ಟ್ ಮೊರೆ ಹೋದ ಗೌರಿ ಶಂಕರ ಶ್ರೀಗಳು.
* 1999 ರಿಂದ ಇಲ್ಲಿಯವರೆಗೂ ಉತ್ತರಾಧಿಕಾರಿ ವಿಚಾರವಾಗಿ ಕೋರ್ಟ್ ನಲ್ಲಿ ವಾದ-ವಿವಾದ.
*2004 ರಲ್ಲಿ ಸಲಿಂಗಕಾಮ ಆರೋಪದಲ್ಲಿ ಹೈಕೊರ್ಟ್ ಜೈಲು ಶಿಕ್ಷೆ, 25 ಲಕ್ಷ ದಂಡ .
* 2008 ಸುಪ್ರೀಂ ಕೋರ್ಟ್ ನಿಂದ ದೋಷಮುಕ್ತಿ ಹೊಂದಿದ ಗೌರಿಶಂಕರ ಸ್ವಾಮೀಜಿ