ಕೊರಟಗೆರೆಯಿಂದಲೇ ಅಸೆಂಬ್ಲಿಗೆ ಸ್ಪರ್ಧೆ: ಜಿ ಪರಮೇಶ್ವರ
ತುಮಕೂರು, ಸೆ. 26: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ, ಕೊರಟಗೆರೆ ಕ್ಷೇತ್ರವನ್ನು ತಮ್ಮ ಆಪ್ತರೊಬ್ಬರಿಗೆ ಬಿಟ್ಟುಕೊಡುತ್ತಾರೆ ಎಂಬ ಸುದ್ದಿಗೆ ಜಿ ಪರಮೇಶ್ವರ ಅವರು ಸ್ಪಷ್ಟನೆ ನೀಡಿದ್ದಾರೆ.
ಮುಂದಿನ ಚುನಾವಣೆಗೆ ಪರಂ ತಂತ್ರಗಾರಿಕೆ ಏನು?
ಕೊರಟಗೆರೆ ಕ್ಷೇತ್ರದ ಜನತೆ ಬಯಸಿದಂತೆ ನಾನು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಜಿ ಪರಮೇಶ್ವರ ಅವರು ಹೇಳಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. 2013ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಸೋಲು ಕಂಡಿದ್ದ ಪರಮೇಶ್ವರ ಅವರು ಈಗ ಅದೇ ಕ್ಷೇತ್ರದಿಂದ ಮತ್ತೊಮ್ಮೆ ಅಸೆಂಬ್ಲಿಗೆ ಪ್ರವೇಶ ಬಯಸಿದ್ದಾರೆ.
ದಲಿತ ಸಿಎಂ ಆಗುವ ಕನಸು ಭಗ್ನಗೊಂಡ ನಂತರ ಎರಡೂವರೆ ನಂತರ ಎಂಎಲ್ಸಿಯಾಗಿ ನಂತರ ಗೃಹ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿದ್ದು, ಮುಂದಿನ ತಿಂಗಳಿಗೆ ಅಧ್ಯಕ್ಷರಾಗಿ ಏಳು ವರ್ಷ ಪೂರೈಸಲಿದ್ದಾರೆ.
2013ರಲ್ಲಿ ಪರಂಗೆ ಅಚ್ಚರಿಯ ಸೋಲು
ಜೆಡಿಎಸ್ ನ ಸುಧಾಕರ್ ಅವರ ಎದುರು 2013ರಲ್ಲಿ ಜಿ ಪರಮೇಶ್ವರ ಅವರು ಸೋಲು ಕಂಡಿದ್ದರಿಂದ ಅವರಿಗೆ ಮುಖ್ಯಮಂತ್ರಿ ಸ್ಥಾನವೂ ಕೈತಪ್ಪಿತು ಎಂಬ ಮಾತಿದೆ. 2013ರಲ್ಲಿ 54, 074 ಮತಗಳನ್ನು ಪರಮೇಶ್ವರು ಗಳಿಸಿದರೆ, ಸುಧಾಕರ್ ಗೆ 72,229 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು.
ಪ್ರಚಾರ ಅಗತ್ಯವಿದೆ
ಪರಮೇಶ್ವರ ಅವರು ಸಮುದಾಯದ ಕೆಲಸಗಳನ್ನು ಮಾಡುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಪ್ರಚಾರ ತೆಗೆದುಕೊಳ್ಳುವುದರಲ್ಲಿ ಹಿಂದೆ ಉಳಿಯುತ್ತಾರೆ. ಕಾರ್ಯಕರ್ತರ ಮೂಲಕ ಆ ಕೆಲಸಗಳನ್ನೂ ಪ್ರಚಾರ ಮಾಡುವುದಿಲ್ಲ ಎಂಬ ದೂರಿದೆ. ದಲಿತ ಮತಗಳನ್ನು ಸೆಳೆಯಲು ಈ ಕ್ಷೇತ್ರದಲ್ಲಿ ಪರಂ ಅವರು ಕೆಲ ಕಾಲ ನೆಲೆಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಮತ್ತೆ ಸೋಲು ಕಟ್ಟಿಟ್ಟಬುತ್ತಿ
ಈ ಕ್ಷೇತ್ರ ಬಿಟ್ಟು ಕೊಡುವುದಿಲ್ಲ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪರಮ ಶಿಷ್ಯ ಸಿ ಚೆನ್ನಿಗಪ್ಪ ಅವರು ಕೊರಟಗೆರೆ ಕ್ಷೇತ್ರದಿಂದ 1994, 1999 ಹಾಗೂ 2004ರಲ್ಲಿ ಜಯಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬಾರಿ ಜಿ ಪರಮೇಶ್ವರ ಅವರಿಗೆ ಜೆಡಿಎಸ್ ನಿಂದ ಸುಧಾಕರ್ ಲಾಲ್, ಬಿಜೆಪಿಯಿಂದ ವೈ ಹುಚ್ಚಯ್ಯ ಅವರು ಸ್ಪರ್ಧೆ ನೀಡಲಿದ್ದಾರೆ. ಹುಚ್ಚಯ್ಯ ಕೂಡಾ ಜೆಡಿಎಸ್ ನಿಂದ ಜಿಲ್ಲಾ ಪಂಚಾಯಿತಿಗೆ ಈ ಮುಂಚೆ ಆಯ್ಕೆಯಾಗಿದ್ದವರು. ಹೀಗಾಗಿ ಜೆಡಿಎಸ್ ಸುಲಭವಾಗಿ ಈ ಕ್ಷೇತ್ರ ಬಿಟ್ಟು ಕೊಡುವುದಿಲ್ಲ
ಜನತೆಯನ್ನು ಆಕರ್ಷಿಸಲು ಪರಂ ಸಜ್ಜು
ಬೂತ್ ಮಟ್ಟದಿಂದ ಪ್ರದೇಶ ಕಾಂಗ್ರೆಸ್ ಸಮಿತಿಯ ತನಕ, ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಬೇಕು ಎಂದು ಪರಮೇಶ್ವರ ಸೂಚಿಸಿದ್ದರು. ಜತೆಗೆ ಎರಡೂವರೆ ವರ್ಷಗಳ ನಂತರ ತಾವು ಕೂಡಾ ಟ್ವಿಟ್ಟರ್ ಗೆ ರೀ ಎಂಟ್ರಿ ಕೊಟ್ಟರು. ಈ ಮೂಲಕ ಯುವ ಜನತೆಯನ್ನು ಆಕರ್ಷಿಸಲು ಪರಂ ಸಜ್ಜಾಗುತ್ತಿದ್ದಾರೆ.