ಸೊಗಡು ಶಿವಣ್ಣ ಮನೆಗೆ ಈಶ್ವರಪ್ಪ ಹೋಗಿದ್ದು ಏಕೆ?
ತುಮಕೂರು, ನವೆಂಬರ್,01: ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಗೆ ಈಶ್ವರಪ್ಪ ಇಂದು ಭೇಟಿ ನೀಡಿರುವುದು ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿಸಿದೆ.
ತಮ್ಮ ಪಕ್ಷದ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿ, ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸೊಗಡು ಶಿವಣ್ಣ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಕೂಡ ಜಾರಿ ಮಾಡಿತ್ತು. ಅಲ್ಲದೆ ಯಾರೇ ಪಕ್ಷದ ವಿರುದ್ಧವಾಗಿ ನಡೆಯುವವರ ವಿರುದ್ಧ ನಿಗಾ ವಹಿಸಲೂ ಸೂಚಿಸಿತ್ತು.
ಅದರೆ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡರೂ ಆಗಿರುವ ಕೆ.ಎಸ್.ಈಶ್ವರಪ್ಪ ತುಮಕೂರಿನ ರಂಗಾಪುರ ಬಳಿ ಇರುವ ಸೊಗಡು ಶಿವಣ್ಣ ಅವರ ಮೆನೆಗೆ ಭೇಟಿ ನೀಡಿರುವುದು ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈಶ್ವರಪ್ಪ ಅವರು ತುಮಕೂರಿನ ಬಿಜೆಪಿ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿ ನೋಟಿಸ್ ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೆ ಶಿವಣ್ಣರಿಗೆ ಪಕ್ಷ ನೋಟಿಸ್ ನೀಡಬಾರದಿತ್ತು ಎಂದಿದ್ದಾರೆ.
ನಂತರ ಶಿವಣ್ಣ ಅವರ ಮನೆಯ ಬಳಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ನಡೆಸಿ ಮುಂದಿನ ಆಗುಹೋಗುಗಳ ಬಗ್ಗೆ ಮಾತುಕತೆ ನಡೆಸಿರುವ ಅವರು ನೋಟಿಸ್ ನೀಡುರುವ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಪಕ್ಷವನ್ನು ಸಂಘಟಿಸುವ ಬಗ್ಗೆ ತಿಳಿವಳಿಕೆ ನೀಡಿದ್ದು, ಚುನಾವಣೆಗೆ ಸಿದ್ದರಾಗಲು ಸೂಚನೆ ನೀಡಿದ್ದಾರೆ.