ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಸಂಸದ ಡಿ.ಕೆ.ಸುರೇಶ್ ಅಸಮಾಧಾನ
ತುಮಕೂರು, ಜುಲೈ 6: ಬಜೆಟ್ನಲ್ಲಿ ರೈತರ ಸಾಲಮನ್ನಾ ಮಾಡಿರುವುದು ಸಂತಸಕರ ಆದರೆ ಅನ್ನಭಾಗ್ಯದ ಅಕ್ಕಿಯ ಪ್ರಮಾಣಕ್ಕೆ ಕಡಿವಾಣ ಹಾಕಿರುವುದರಿಂದ ಜನರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯದ ಅಕ್ಕಿ ಪ್ರಮಾಣದಲ್ಲಿ ಕಡಿಮೆ ಮಾಡಿರುವುದು ಉತ್ತಮ ನಡೆಯಲ್ಲ, ಈ ನಿರ್ಣಯ ವಪಾಸ್ಸು ತೆಗೆದುಕೊಳ್ಳುವಂತೆ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights
ರೈತರ ಹಾಗೂ ರಾಜ್ಯದ ಜನರ ಹಿತ ಕಾಪಾಡಲು ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿತ್ತು, ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಬೆಲೆ ಏರಿಕೆಯನ್ನು ಸುರೇಶ್ ಅವರು ಸಮರ್ಥಿಸಿಕೊಂಡರು.
ರಾಜ್ಯದ ಜನರು ಮೈತ್ರಿ ಸರ್ಕಾರದ ಮೇಲೆ ವಿಶ್ವಾ ಇಟ್ಟಿದ್ದಾರೆ ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರ ಇದೆ ಎಂದ ಅವರು, ಬಜೆಟ್ ಕಡತಕ್ಕೆ ಅನುಮೋದನೆ ಸಿಗುವ ಮೊದಲು ಅನ್ನಭಾಗ್ಯ ಅಕ್ಕಿ ಕಡಿತದ ಬಗ್ಗೆ ಕುಮಾರಸ್ವಾಮಿ ಅವರು ಪುನರ್ ಪರಿಶೀಲನೆ ಮಾಡಬೇಕು ಎಂದರು.