ಕೊರಟಗೆರೆ : ಚೀಟಿ ವ್ಯವಹಾರದಲ್ಲಿ 5 ಕೋಟಿ ವಂಚಿಸಿ, ದಂಪತಿ ಆತ್ಮಹತ್ಯೆ
ಕೊರಟಗೆರೆ, ಅಕ್ಟೋಬರ್ 17: ಚೀಟಿ ಅವ್ಯವಹಾರ ನಡೆಸಿ, ಜನರಿಗೆ ಐದು ಕೋಟಿ ರುಪಾಯಿಯಷ್ಟು ವಂಚಿಸಿದ್ದ ದಂಪತಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ರವಿಕುಮಾರ್ ಹಾಗೂ ಅವರ ಪತ್ನಿ ಪ್ರಭಾ ಆತ್ಮಹತ್ಯೆ ಮಾಡಿಕೊಂಡವರು. ತುಮಕೂರು ಅಲ್ಲದೆ ದೊಡ್ಡಬಳ್ಳಾಪುರ, ಬೆಂಗಳೂರು ಸೇರಿದಂತೆ ವಿವಿಧೆಡೆ ಚೀಟಿ ವ್ಯವಹಾರದಲ್ಲಿ ವಂಚನೆ ಮಾಡಿದ್ದರು.
ಹೈದರಾಬಾದ್: ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರ ಶವ ಪತ್ತೆ
ರವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪ್ರಭಾವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರವಿ ಬೆಸ್ಕಾಂನ ನೌಕರರಾಗಿದ್ದರು.ಚೀತಿ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪದ ಮೇಲೆ ಬಂಧಿತರಾದ ನಂತರ ಅಮಾನತುಗೊಂಡಿದ್ದರು. ಚೀಟಿ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ ಎಂಬ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಬಂದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ದಂಪತಿಯ ಮನೆಯ ಮುಂದೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಚೀಟಿಯಲ್ಲಿ ಹಣ ಕಳೆದುಕೊಂಡವರು ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಿದ್ದರು.