ತಿಪಟೂರು ಸಬ್ ಜೈಲಿನಲ್ಲಿ ಎಣ್ಣೆ ಏಟಿನಲ್ಲಿ ಕೈದಿಗಳ ದಾಂಧಲೆ, ಕಿತ್ತಾಟ
ತಿಪಟೂರು, (ತುಮಕೂರು ಜಿಲ್ಲೆ), ಫೆಬ್ರವರಿ 15: ಇಲ್ಲಿನ ಉಪಬಂದೀಖಾನೆಯಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಬುಧವಾರ ರಾತ್ರಿ ಹೊಡೆದಾಟ ನಡೆದು, ಪೀಠೋಪಕರಣಗಳಿಗೆ ಬೆಂಕಿ ಹೊತ್ತಿಸಿ, ಧ್ವಂಸ ಮಾಡಿದ ಘಟನೆ ನಡೆದಿದೆ.
ಸಬ್ ಜೈಲಿನ ಕೈದಿಗಳು ಪಾನಮತ್ತರಾಗಿ ಜೈಲಿನ ಟೇಬಲ್, ಟಿವಿ ಒಡೆದು ಗಲಾಟೆ ಮಾಡಿದ್ದಾರೆ. ಪೊಲೀಸ್ ಹಾಗೂ ಜೈಲು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೋಲ್ ಮೇಲೆ ಬಿಡುಗಡೆಯಾಗಿ ವಾಪಸ್ ಬಂದ ಹರೀಶ್ ಎಂಬಾತ ಜೈಲಿಗೆ ಮದ್ಯ ತಂದಿದ್ದು, ಮದ್ಯದ ಮತ್ತಿನಲ್ಲಿ ಕೈದಿಗಳು ರಂಪಾಟ ನಡೆಸಿದ್ದಾರೆ.
ಮಂಗಳೂರು: ಜೈಲಿನಲ್ಲೇ ಹಫ್ತಾ ವಸೂಲಿ, 8 ಜನರ ಮೇಲೆ ಕೇಸು
ರಾತ್ರಿ 2.30 ಸುಮಾರಿಗೆ ಘಟನೆ ನಡೆದಿದ್ದು, ಇದೇ ವೇಳೆ ಕಾಗದಗಳಿಗೆ ಬೆಂಕಿ ಹೊತ್ತಿಸಿ, ಪೊಲೀಸ್ ಹಾಗೂ ಜೈಲು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ನಂತರ ಸ್ಥಳಕ್ಕೆ ನ್ಯಾಯಾಧೀಶರು ಹಾಗೂ ಎಸ್ಪಿ ದಿವ್ಯಾ ಗೋಪಿನಾಥ್ ಭೇಟಿ ನೀಡಿದ್ದು, ಸನ್ನಿವೇಶ ಹತೋಟಿಗೆ ಬಂದಿದೆ.
ವಿಚಾರಾಣಾಧೀನ ಕೈದಿಗಳಾದ ನಾಗೇಶ ಅಲಿಯಾಸ್ ನಾಗೇಂದ್ರ, ಚೇತನ್, ಹರೀಶ್, ಬೂತರಾಜ, ನರಸಿಂಹಮೂರ್ತಿ, ಗುರುಮೂರ್ತಿ, ಯೊಗೇಶ್ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು, ಆ ನಂತರ ಜೈಲಿನ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ದಾಂಧಲೆ ನಡೆಸಿದವರ ವಿರುದ್ಧ ದೂರು ದಾಖಲಾಗಿದೆ.