ಸೊಗಡು ಶಿವಣ್ಣ ಮನೆಯಲ್ಲಿ ಈಶ್ವರಪ್ಪ, ಅತೃಪ್ತರು ಬುಸುಬುಸು!
ಯಡಿಯೂರಪ್ಪನವರು ದೆಹಲಿಯಲ್ಲಿ ನಡೆದ ಸಂಧಾನದಂತೆ ನಡೆದುಕೊಂಡಿಲ್ಲ ಎಂಬುದು ಬಿಜೆಪಿ ಅತೃಪ್ತರ ಆಕ್ರೋಶ. ಬುಧವಾರ ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮನೆಗೆ ಈಶ್ವರಪ್ಪ ಭೇಟಿ ನೀಡಿದ್ದಾರೆ. ಏನಿದು ಬೆಳವಣಿಗೆ ತಿಳಿಯಲು ಈ ವರದಿ ಓದಿ
ತುಮಕೂರು, ಏಪ್ರಿಲ್ 19: ಹತ್ತಿದ ಜಗಳ ಹರಿಯಲ್ಲ ಅನ್ನೋ ಮಾತು ಬಿಜೆಪಿಯವರಿಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಬುಧವಾರ ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಭೇಟಿ ಮಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾಧ್ಯಮದವರ ಜತೆಗೆ ಮಾತನಾಡದೆ ತೆರಳಿದ್ದಾರೆ.
ದೆಹಲಿಗೆ ಹೋಗಿ ಸಂಧಾನ ಸೂತ್ರ ಮಾಡಿಕೊಂಡು ಬಂದಿದ್ದ ಯಡಿಯೂರಪ್ಪನವರು ಆ ನಂತರ ಆಗ-ಈಗ ಅಂತ ಕಾಗೆ ಹರಿಸಿದ್ದೇ ಬಂತು ವಿನಾ ಪಕ್ಷದ ಅತೃಪ್ತ ನಾಯಕರ ಸಮಸ್ಯೆಗಳನ್ನು ಪರಿಹರಿಸಲ್ಲ ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಉಪಚುನಾವಣೆ ಮುಗಿದು ಹೋಗಲಿ ಎಂದು ಗಡುವು ಹೇಳಿದ್ದ ಬಿಎಸ್ ವೈ, ಕಳೆದ ತಿಂಗಳು ಅಂದರೆ ಮಾರ್ಚ್ ನಲ್ಲಿ ನಡೆಸಿದ ಸಭೆಯಲ್ಲೂ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ.[ಮಾತು ಮುರಿದರು ಬಿಎಸ್ ವೈ ಎಂದು ಮೌನ ಮುರಿದ ಈಶ್ವರಪ್ಪ]
ಈ ರೀತಿ ದಿನ ಕಳೆಯುತ್ತಿರುವ ಯಡಿಯೂರಪ್ಪನವರ ಧೋರಣೆಯಿಂದ ಬೇಸತ್ತಿರುವ ಅತೃಪ್ತ ಮುಖಂಡರು ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಆ ನಂತರ ತಮ್ಮ ದೂರುಗಳನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಹೇಳಿಕೊಳ್ಳಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ ಮಾಜಿ ಸಚಿವ ಶಿವಣ್ಣ, ದೆಹಲಿಯಲ್ಲಿ ಆದ ಮಾತುಕತೆಯಂತೆ ಸಮಿತಿ ಮಾಡಲಾಗಿತ್ತು. ನಮ್ಮ ಸಮಸ್ಯೆಗಳನ್ನು ಕೇಳಿ ಪರಿಹರಿಸಬೇಕಿತ್ತು. ಆಗ-ಈಗ ಅಂತ ಹೇಳಿದ್ದು ಬಿಟ್ಟರೆ ಈ ವಿಚಾರದಲ್ಲಿ ಯಾವುದೇ ಬೆಲವಣಿಗೆ ಆಗಿಲ್ಲ. ಆದ್ದರಿಂದ ನಮ್ಮ ನಾಯಕರಾದ ಈಶ್ವರಪ್ಪನವರು ನಮ್ಮನೆಗೆ ಬಂದಿದ್ದರು.['ಹೈಕಮಾಂಡ್ ಸಲಹೆ ಪಾಲಿಸದ ಬಿಎಸ್ ವೈ, ಮೂಲ ಕಾರ್ಯಕರ್ತರಿಗೆ ಅನ್ಯಾಯ']
ಬೆಂಗಳೂರಿನಲ್ಲಿ ಏಪ್ರಿಲ್ 27ರಂದು ರಾಜ್ಯದ ವಿವಿಧ ಜಿಲ್ಲೆಯ ಮುಖಂಡರ ಸಭೆ ನಡೆಸಿ, ಅಲ್ಲಿ ಕೈಗೊಳ್ಳುವ ತೀರ್ಮಾನವನ್ನು ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರಿಗೆ ತಿಳಿಸ್ತೀವಿ. ನಮ್ಮ ಜಿಲ್ಲೆಯಲ್ಲೇ ತಗೊಳ್ಳಿ. ಒಂದು ವರ್ಷ ಆಯಿತು ಈ ಜಿಲ್ಲಾಧ್ಯಕ್ಷರನ್ನು ತಂದು ಕೂರಿಸಿ. ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಒಳ್ಳೆ ಕೆಲಸಗಲ ಪ್ರಚಾರ ಮಾಡಲಾಗುತ್ತಿದೆ. ನಮಗೆ ಆ ಅವಕಾಶವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.[ನಿಮಗೆ ಗುರಾಣಿಯಂತೆ ಬಳಕೆಯಾದ ಮುಖಂಡರ ಗತಿಯೇನು ಈಶ್ವರಪ್ಪನವರೆ?]
ಯಾವ ಪ್ರಮುಖ ಮುಖಂಡರನ್ನು ಸಭೆಗೆ ಕರೆಯಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಮಾಧ್ಯಮದವರನ್ನೂ ಕರೆದು ಸಭೆಯ ಬಗ್ಗೆ ಮಾಹಿತಿ ಕೊಡ್ತೀವಿ. ಎಲ್ಲ ಪ್ರಮುಖ ನಾಯಕರನ್ನೂ ಸಭೆಗೆ ಆಹ್ವಾನಿಸುತ್ತೇವೆ. ನಮಗೆ ಹೇಳಿದ್ದ ಮಾತಿನಂತೆ ನಡೆದುಕೊಳ್ಳಬೇಕು ಅನ್ನೋದು ಬೇಡಿಕೆ ಎಂದು ಶಿವಣ್ಣ ಹೇಳಿದರು.