ಪರಿವರ್ತನಾ ಯಾತ್ರೆಯಲ್ಲಿ ಕಾಂಗ್ರೆಸ್ ವೈಫಲ್ಯ ಬಿಚ್ಚಿಟ್ಟ ಶೋಭಾ ಕರಂದ್ಲಾಜೆ
ತುಮಕೂರು, ನವೆಂಬರ್ 04: ಇಂದು ತುಮಕೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ತುಮಕೂರು, ಗುಬ್ಬಿ, ತಿಪಟೂರಿನಲ್ಲಿ 3 ನೇ ದಿನದ ಪರಿವರ್ತನಾ ಯಾತ್ರೆ
"ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಹೆಚ್ಚು ಕಡಿಮೆ 50 ವರ್ಷ ಆಳಿದೆ. ಆದರೆ, ಬಿಜೆಪಿ ಆಡಳಿತ ನಡೆಸಿದ್ದು ಕೇವಲ 5 ವರ್ಷ, ಈ 5 ವರ್ಷ ನಮ್ಮಲ್ಲಿ ಗೊಂದಲಗಳಿದ್ದರೂ ಅಭಿವೃದ್ಧಿಗೆ ಯಾವುದೇ ತಡೆ ಉಂಟಾಗಿರಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಕೇವಲ 45 ಸಾವಿರ ಕೋಟಿಯಿದ್ದ ರಾಜ್ಯ ಬಜೆಟನ್ನು ಕೇವಲ ಒಂದು ವರ್ಷದಲ್ಲೇ 1 ಲಕ್ಷ ಕೋಟಿಗೆ ಏರಸಿದರು. ಜನರ ತೆರಿಗೆಯನ್ನು ಜನರಿಗೆ ಕೊಡುವಂತ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದರು" ಎಂದರು.
"ಸಿದ್ದರಾಮಯ್ಯನವರ ಸರ್ಕಾರ ಎಲ್ಲ ಹಂತಗಳಲ್ಲೂ ವಿಫಲವಾಗಿದೆ, ಕೇಂದ್ರ ಸರ್ಕಾರ 27 ರೂಪಾಯಿಗೆ ಅಕ್ಕಿ ಖರೀದಿ ಮಾಡಿ ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಕೇವಲ 4 ರೂಪಾಯಿ ಖರ್ಚು ಮಾಡಿ ತನ್ನದೇ ಯೋಜನೆಯೆಂಬಂತೆ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಯಡಿಯೂರಪ್ಪನವರ ಸರ್ಕಾರ ಹಿಂದೆ ಜಾರಿಗೆ ತಂದಿದ್ದ ಭಾಗ್ಯಲಕ್ಷಿ ಯೋಜನೆಯ ಮೊತ್ತವನ್ನು ಕಡಿತಗೊಳಿಸುವ ಮೂಲಕ ಬಡವರಿಗೆ ಮೋಸ ಮಾಡಿದೆ. ಕಾಂಗ್ರೆಸ್ ಸರ್ಕಾರ ಹಿಂದೆ ಯಡಿಯೂರಪ್ಪನವರು ಜಾರಿಗೆ ತಂದಿದ್ದ ಅನೇಕ ಬಡವರ ಹಾಗೂ ಜನಪರ ಯೋಜನೆಗಳನ್ನು ಇಂದು ಕುಂಠಿತಗೊಳಿಸಿದೆ." ಎಂದರು.
"ಸೀಮೆಎಣ್ಣೆ ಒಲೆಯಲ್ಲಿ ಅಡಿಗೆ ಮಾಡುತ್ತಿದ್ದ ಮಹಿಳೆಯರಿಗೆ ಇಂದು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಉಚಿತವಾಗಿ ಗ್ಯಾಸ್ ವಿತರಣೆ ಮಾಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳ ಜನಪರ ಕಾರ್ಯಕ್ರಮಗಳನ್ನು ತುಲನೆ ಮಾಡಿದರೆ ನಿಮಗೆ ವ್ಯತ್ಯಾಸ ಗೊತ್ತಾಗಲಿದೆ"ಯೆಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕರ್ನಾಟಕ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಇಂದು(ನ.4) ಮೂರನೇ ದಿನಕ್ಕೆ ಕಾಲಿಟ್ಟಿದೆ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ ಆರಂಭಿಸಿರುವ 75 ದಿನಗಳ ಪರಿವರ್ತನಾ ಯಾತ್ರೆ ಇಂದು ತುಮಕೂರು ನಗರ, ಗುಬ್ಬಿ ಮತ್ತು ತಿಪಟೂರುಗಳಲ್ಲಿ ಸಾಗಲಿದೆ.