ಪರಿವರ್ತನಾ ಯಾತ್ರೆ ಬಳಿಕ ತುಮಕೂರು ಬಿಜೆಪಿ ಅಸಮಾಧಾನ ಸ್ಫೋಟ!
ತುಮಕೂರು, ನವೆಂಬರ್ 5 : ಕರ್ನಾಟಕ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಗೆ ಪಕ್ಷದ ನಾಯಕರಿಂದಲೇ ಅಪಸ್ವರ ಕೇಳಿಬಂದಿದೆ. ತುಮಕೂರಿನಲ್ಲಿ ನಡೆದ ಯಾತ್ರೆಯಿಂದ ದೂರವುಳಿದಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರು: ಬಿಜೆಪಿ ಪರಿವರ್ತನಾ ರಥಯಾತ್ರೆ ಮೇಲೆ ಕಲ್ಲೆಸೆತ
ಭಾನುವಾರ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೊಗಡು ಶಿವಣ್ಣ, 'ತುಮಕೂರು ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದೆ. ವಲಸಿಗರಿಗೆ ಇಲ್ಲಿ ಮಣೆ ಹಾಕಲಾಗುತ್ತಿದೆ. ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ತುಮಕೂರಿನಲ್ಲಿ ನಡೆದದ್ದು ಬಿಜೆಪಿ ಯಾತ್ರೆಯಲ್ಲ. ಅದು ಕೆಜೆಪಿಯ ಯಾತ್ರೆ' ಎಂದು ಅಸಮಧಾನ ವ್ಯಕ್ತಪಡಿಸಿದರು.
ಪರಿವರ್ತನಾ ಯಾತ್ರೆಯಲ್ಲಿ ಕಾಂಗ್ರೆಸ್ ವೈಫಲ್ಯ ಬಿಚ್ಚಿಟ್ಟ ಶೋಭಾ ಕರಂದ್ಲಾಜೆ
'ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಮಾವೇಶ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಯಾತ್ರೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಇರಲಿಲ್ಲ. 500, 1000 ರೂ.ಕೊಟ್ಟು ಕರೆದುಕೊಂಡು ಬಂದ ಜನರಿದ್ದರು' ಎಂದು ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದರು.
ಎಚ್.ಡಿ.ದೇವೇಗೌಡರು ಜಗ್ಗೇಶ್ ಮಿಮಿಕ್ರಿ ಬಗ್ಗೆ ಹೇಳಿದ್ದೇನು?
'ಕಾಂಗ್ರೆಸ್ ಪಕ್ಷದಿಂದ ಬಂದವರಿಗೆ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತಿದೆ. ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಅವರು ಅಪ್ಪನ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿರುವ ಅಪ್ಪ-ಮಕ್ಕಳು ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ' ಎಂದು ಸೊಗಡು ಶಿವಣ್ಣ ದೂರಿದರು...
ಆಹ್ವಾನವನ್ನು ನೀಡಿರಲಿಲ್ಲ
'ತುಮಕೂರು ನಗರದಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ನಾನು ಸೇರಿದಂತೆ ಹಲವು ಮೂಲ ಬಿಜೆಪಿಯವರಿಗೆ ಆಹ್ವಾನ ನೀಡಿರಲಿಲ್ಲ. ಬೆಳಗ್ಗೆ 9ಗಂಟೆಗೆ ಯಡಿಯೂರಪ್ಪ ಅವರು ನನಗೆ ಕರೆ ಮಾಡಿ ಆಹ್ವಾನ ನೀಡಿದರು. ಆಗ ಅವರಿಗೆ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ ಬಗ್ಗೆ ತಿಳಿಸಿದೆ. ಯಡಿಯೂರಪ್ಪ ಕರೆದರು ಎಂದು ನಾನು ಹೋಗಿದ್ದರೆ ನನ್ನ ಜೊತೆ ಇರುವ ಮೂಲ ಕಾರ್ಯಕರ್ತರಿಗೆ ಅವಮಾನ ಮಾಡಿದಂತೆ ಆಗುತ್ತಿತ್ತು. ಆದ್ದರಿಂದ, ಸಮಾವೇಶದಿಂದ ದೂರವುಳಿದೆ' ಎಂದು ಸೊಗಡು ಶಿವಣ್ಣ ಹೇಳಿದರು.
ಜನಸಂಘದಿಂದ ಬಿಜೆಪಿ ನೋಡಿದ್ದೇನೆ
'ನಾನು ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿದ್ದೇನೆ. ಆದರೆ, ತುಮಕೂರಿನಲ್ಲಿ ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದೆ. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಅಪ್ಪ-ಮಕ್ಕಳು ಎಲ್ಲರನ್ನೂ ಕಡೆಗಣಿಸಿದ್ದಾರೆ. ಅವರಿಬ್ಬರು ಕಾಂಗ್ರೆಸ್ ಬಿಟ್ಟಾಗ ಕಾರ್ಯಕರ್ತರು ಹಾಲು ಕುಡಿದಿದ್ದರು. ಅಂತಹವರು ಬಿಜೆಪಿ ಸೇರಿಕೊಂಡು ಎಲ್ಲರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ' ಎಂದು ಶಿವಣ್ಣ ಆರೋಪ ಮಾಡಿದರು.
ನಾವು ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ
'ತುಮಕೂರು ಜಿಲ್ಲೆಯ ಬಿಜೆಪಿ ಅಪ್ಪ-ಮಕ್ಕಳಿಂದ ಬೆಳೆದಿಲ್ಲ. ನಾವು ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಕೆಲಸ ಮಾಡು ಎಂದರೆ ನಾವು ಮಾಡುವುದಿಲ್ಲ. ಅಪ್ಪ-ಮಕ್ಕಳಿಂದಾಗಿ ಕಾಂಗ್ರೆಸ್ ಪಕ್ಷದಿಂದ ಬಂದವರಿಗೆ ಆದ್ಯತೆ ಹೆಚ್ಚಾಗುತ್ತಿದೆ' ಎಂದು ಶಿವಣ್ಣ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಂದವರು ಕಾರ್ಯಕರ್ತರಲ್ಲ
'ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿರಲಿಲ್ಲ. 500, 1000 ರೂ.ನೀಡಿ ಜರನ್ನು ಕರೆತರಲಾಗಿತ್ತು. ಎಲ್ಲಾ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿತ್ತು ಸಮಾವೇಶ ಸಂಪೂರ್ಣವಾಗಿ ವಿಫಲವಾಗಿದೆ' ಎಂದು ಆರೋಪಿಸಿದರು.
ನಗರ, ಗ್ರಾಮೀಣ ಭಾಗದಲ್ಲಿ ಸಂಚಾರ
ಬಿಜೆಪಿಯ ಪರಿವರ್ತನಾ ಯಾತ್ರೆ ಶನಿವಾರ ತುಮಕೂರು ನಗರ, ಗ್ರಾಮಾಂತರ ಕ್ಷೇತ್ರಗಳಲ್ಲಿ ಸಂಚಾರ ನಡೆಸಿದೆ. ತಿಪಟೂರಿನಲ್ಲಿ ಶನಿವಾರ ಯಾತ್ರೆ ಅಂತ್ಯಗೊಂಡಿದ್ದು, ನ.6ರ ಸೋಮವಾರ ಅರಸೀಕೆರೆಯಿಂದ ಯಾತ್ರೆ ಆರಂಭವಾಗಲಿದೆ.