ಡಿಕೆಶಿ, ಸುರೇಶ್ ವಿರುದ್ಧ ರಾಮಸ್ವಾಮಿ ಗೌಡ ಫುಲ್ ಗರಂ
ತುಮಕೂರು: ಕುಣಿಗಲ್ ತಾಲೂಕಿನಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಸುರೇಶ್ ವಿರುದ್ಧ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರಿಬ್ಬರನ್ನು ಬಿಟ್ಟು ಉಳಿದವರೆಲ್ಲರಿಗೂ ನನ್ನ ಮೇಲೆ ವಿಶ್ವಾಸವಿದೆ. ತಮ್ಮ ಸಂಬಂಧಿ ಡಾ.ರಂಗನಾಥ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಅಂತ ಬಿಂಬಿಸುವ ಪ್ರಯತ್ನದಲ್ಲಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಮಸ್ವಾಮಿ ಗೌಡ ಅಸಮಾಧಾನ ತೋಡಿಕೊಂಡಿದ್ದಾರೆ.
ಕುಣಿಗಲ್ ತಾಲ್ಲೂಕು ಕಾಂಗ್ರೆಸ್ ನಲ್ಲಿ ಈ ಸೋದರರಿಂದಲೇ ಗೊಂದಲಗಳು ಸೃಷ್ಟಿಯಾಗುತ್ತಿವೆ. ಅಧಿಕಾರ ಹಿಡಿಯಲೇ ಬೇಕು ಎಂಬ ಕಾರಣಕ್ಕೆ ಅಡ್ಡದಾರಿಯಲ್ಲಿ ನಡೆಯುತ್ತಿದ್ದಾರೆ. ಬಿಜೆಪಿಯವರು ನನಗೆ 5 ಕೋಟಿ ರುಪಾಯಿ ಆಮಿಷ ತೋರಿಸಿದ್ದರು. ಅದನ್ನು ಧಿಕ್ಕರಿಸಿ ಕಾಂಗ್ರೆಸ್ ನಲ್ಲೇ ಉಳಿದುಕೊಂಡ ನನ್ನ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ ಎಂದು ರಾಮಸ್ವಾಮಿ ಗೌಡ ಕಿಡಿಕಿಡಿ ಆದರು.[ದೇಶದ ಟಾಪ್ 10 ಶ್ರೀಮಂತ ಸಚಿವರಲ್ಲಿ ರಾಜ್ಯದ ಐವರು!]
ಶಿವಕುಮಾರ್-ಸುರೇಶ್ ಗೆ ಹೆದರಿಕೊಂಡು ಓಡಿಹೋಗುವ ಪೈಕಿ ನಾನಲ್ಲ. ನನ್ನ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಮತ ನೀಡಿದ ಜನರಿದ್ದಾರೆ. ಪಕ್ಷಕ್ಕೆ ಕೆಟ್ಟ ಹೆಸರು ಬರಕೂಡದು ಅಂತ ಎಲ್ಲ ಸಹಿಸಿಕೊಂಡು ಹೋಗ್ತಿದ್ದೀನಿ. ಇನ್ನು ಮುಂದೆಯೂ ಹೀಗೇ ಇರುವುದಕ್ಕೆ ಆಗುವುದಿಲ್ಲ. ನನ್ನ ವಿರುದ್ಧವೇ ಹೈ ಕಮಾಂಡ್ ಗೆ ದೂರುಗಳು ಹೋಗುತ್ತಿವೆ. ಆದ್ದರಿಂದ ಇವರಿಬ್ಬರ ಬಣ್ಣವನ್ನು ಜನರ ಮುಂದೆ ಬಯಲು ಮಾಡುತ್ತೇನೆ ಎಂದು ಹೇಳಿದ್ದಾರೆ.[ದೇವೇಗೌಡ್ರ 'ಕ್ರಾಸ್ ವೋಟಿಂಗ್' ರಾಜಕೀಯ ದಾಳಕ್ಕೆ ಕಾಂಗ್ರೆಸ್ ಸುಸ್ತು?]
ಕುಣಿಗಲ್ ತಾಲೂಕಿನಲ್ಲಿ ಗುಂಪುಗಾರಿಕೆಯೇ ಕಾಂಗ್ರೆಸ್ ಗೆ ಹೊಡೆತವಾಗಿದೆ. ಇದರಿಂದ ಪಕ್ಷಕ್ಕೆ, ಕಾರ್ಯಕರ್ತರಿಗೆ ತೊಂದರೆ ಆಗುತ್ತಿದೆ. ನಾಯಕತ್ವದ ಗೊಂದಲಗಳೇನಿದ್ದರೂ ಕೂತು, ಮಾತಾಡಿ ಬಗೆಹರಿಸಿಕೊಳ್ಳಲಿ. ಹೊರಗಿನಿಂದ ಬಂದವರಿಗೆ ಪ್ರಾಶಸ್ತ್ಯ ನೀಡಿ, ಪಕ್ಷವನ್ನು ಹಾಳು ಮಾಡುವುದು ಬೇಡ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.