ಮೇಟಿ ಪ್ರಕರಣದಲ್ಲಿ ಮಹಿಳೆಯ ಡ್ರಾಮಾ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ತುಮಕೂರು, ಡಿಸೆಂಬರ್ 20: ಅತ್ಯಾಚಾರ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಲು ತೆರಳಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಸೋಮವಾರ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಚಿಕ್ಕನಾಯಕನಹಳ್ಳಿಯ ಮಹಿಳೆಯ ಮೇಲೆ ಈಚೆಗೆ ಗೂಳೂರಿನಲ್ಲಿ ಅತ್ಯಾಚಾರ ಮಾಡಲಾಗಿತ್ತು. ಆ ನಂತರ ಆಕೆಗೆ ಚಿಕಿತ್ಸೆ ನೀಡಿ, ಸಾಂತ್ವನ ಕೇಂದ್ರದಲ್ಲಿ ಸೇರಿಸಲಾಗಿತ್ತು.
ಆಕೆಯನ್ನು ಭೇಟಿ ಮಾಡಿದ ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಮೇಟಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾದ ಮಹಿಳೆ ಡ್ರಾಮಾ ಮಾಡಿದ್ದಾಳೆ. ವರ್ಷಗಟ್ಟಲೆ ರಾಸಲೀಲೆಯಲ್ಲಿ ತೊಡಗಿ ಕೊನೆಯಲ್ಲಿ ಅತ್ಯಾಚಾರ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನನ್ನನ್ನು ಭೇಟಿ ಮಾಡಿಲ್ಲ, ನನ್ನ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಹೇಳಿದರು.[ಗೂಳೂರಿನ ತೋಪಿನಲ್ಲಿ ವಿಧವೆ ಮೇಲೆ ಗ್ಯಾಂಗ್ ರೇಪ್]
ಆಕೆ ಪರವಾಗಿ ಆಯೋಗಕ್ಕೆ ಇದುವರೆಗೂ ಯಾರೂ ದೂರು ನೀಡಿಲ್ಲ. ರಾಸಲೀಲೆಗಳನ್ನು ಕೆಲವರು ಅತ್ಯಾಚಾರ ಎಂದುಕೊಂಡಿದ್ದಾರೆ. ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದ ಮಹಿಳೆಯೂ ಹೀಗೇ ಮಾಡಿದ್ದು. ಎಲ್ಲಾದರೂ 104 ಬಾರಿ ಅತ್ಯಾಚಾರ ನಡೆಯುತ್ತದೆಯೇ? ಅಂಥ ಉದಾಹರಣೆ ಇತಿಹಾಸದಲ್ಲಿಯೇ ಇಲ್ಲ ಎಂದರು.[ರಾಸಲೀಲೆ ಪ್ರಕರಣ: ಸಂತ್ರಸ್ತ ಮಹಿಳೆಯಿಂದ ದಿಢೀರ್ ದೂರು]
ಇದೇ ವೇಳೆ ಅತ್ಯಾಚಾರ ಸಂತ್ರಸ್ತೆಗೆ ಪರಿಹಾರದ ಭರವಸೆ ನೀಡಿದರು. ತಾವು ಯಾರ ಮರ್ಜಿಯಲ್ಲೂ ಕೆಲಸ ಮಾಡುವ ಅಗತ್ಯ ಇಲ್ಲ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.