ತುಮಕೂರಿನ ಬನ್ನಿಕುಪ್ಪೆ ಅರಣ್ಯದಲ್ಲಿ ಮಹಿಳೆಯನ್ನು ಕೊಂದು ತಿಂದಿರುವ ಚಿರತೆ
ತುಮಕೂರು, ಅಕ್ಟೋಬರ್ 17: ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿ ಮಾಡಿ, ಮಹಿಳೆಯೊಬ್ಬರನ್ನು ಕೊಂದು ಹಾಕಿದೆ. ಸುಮಾರು ಅರವತ್ತು ವರ್ಷದ ಲಕ್ಷ್ಮಮ್ಮ ಚಿರತೆ ದಾಳಿಗೆ ಬಲಿಯಾದವರು. ಹಸು ಕಟ್ಟಲು ತೆರಳಿದ್ದ ವೇಳೆ ಈ ದಾಳಿ ನಡೆದಿದೆ. ಬುಧವಾರ ಮನೆ ಬಿಟ್ಟು ಹೋದ ಲಕ್ಷ್ಮಮ್ಮ ವಾಪಸ್ ಬಾರದ ಕಾರಣಕ್ಕೆ ಆಕೆಯ ಕುಟುಂಬದವರು ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬನ್ನಿಕುಪ್ಪೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಲಕ್ಷ್ಮಮ್ಮ ಅವರ ಶವ ಪತ್ತೆಯಾಗಿದೆ. ಚಿರತೆಯು ತಲೆಯ ಭಾಗವನ್ನೇ ತಿಂದು ಹಾಕಿತ್ತು. ದೇಹದ ಇತರ ಭಾಗಗಳನ್ನು ಸಹ ತಿಂದು ಹಾಕಿದ್ದು, ಭೀಕರ ಸ್ಥಿತಿಯಲ್ಲಿ ಲಕ್ಷ್ಮಮ್ಮ ಅವರ ಶವ ಪತ್ತೆಯಾಗಿದೆ.
ತಮ್ಮನನ್ನು ಚಿರತೆಯಿಂದ ಕಾಪಾಡಿದ 11 ವರ್ಷದ ಬಾಲಕಿ
ತಜ್ಞರ ಪ್ರಕಾರ, ಚಿರತೆಯು ಲಕ್ಷ್ಮಮ್ಮ ಅವರನ್ನು ಬಲಿ ಪ್ರಾಣಿ ಎಂದು ಭಾವಿಸಿರಬಹುದು. ಆದರೆ ತಲೆಯ ಭಾಗದ ಮಾಂಸವೇ ಇಲ್ಲದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾಮಾನ್ಯವಾಗಿ ಕರಡಿಯು ಮನುಷ್ಯರ ತಲೆಯನ್ನು ಬಗೆಯುತ್ತದೆ. ಆದರೆ ಈ ಪ್ರಕರಣದಲ್ಲಿ ಚಿರತೆ ಬಲಿ ಪ್ರಾಣಿ ಎಂದು ಭಾವಿಸಿ ದಾಳಿ ನಡೆಸಿರುವುದು ಸ್ಪಷ್ಟವಾಗುತ್ತದೆ.
ಮನುಷ್ಯರ ಮಾಂಸದ ರುಚಿ ಕಂಡ ವನ್ಯ ಪ್ರಾಣಿಗಳು ಎಂದಿಗೂ ಅಪಾಯಕರ. ಅದನ್ನು ಬಂಧಿಸುವುದು ಅನಿವಾರ್ಯ ಎಂದು ಕೂಡ ಅಭಿಪ್ರಾಯ ವ್ಯಕ್ತವಾಗುತ್ತದೆ.