ತುಮಕೂರಿನಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ
ತುಮಕೂರು, ನವೆಂಬರ್ 05: ದನ ಮೇಯಿಸಲು ಹೋಗಿದ್ದಾಗ ಚಿರತೆ ದಾಳಿ ನಡೆಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದ ಭಾಗ್ಯಮ್ಮ (35) ಗುರುವಾರ ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದರು. ಮಧ್ಯಾಹ್ನ ದಾಳಿ ಮಾಡಿರುವ ಚಿರತೆ, ಭಾಗ್ಯಮ್ಮ ಅವರ ದೇಹವನ್ನು ಬೇಲಿಗೆ ಎಳೆದೊಯ್ದು ಬಿಟ್ಟು ಹೋಗಿದೆ. ಈ ಗ್ರಾಮದಲ್ಲೇ ಕೆಲ ತಿಂಗಳ ಹಿಂದೆ 5 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದ್ದ ಘಟನೆ ನಡೆದಿತ್ತು.
ಕೆ.ಆರ್.ಪೇಟೆಯಲ್ಲಿ ಚಿರತೆ ಹಾವಳಿಗೆ ತತ್ತರಿಸುತ್ತಿರುವ ರೈತರು
ಇದಲ್ಲದೇ ಈ ಭಾಗದಲ್ಲಿ ಹಲವು ಬಾರಿ ಚಿರತೆ ದಾಳಿ ನಡೆಸಿರುವ ಪ್ರಕರಣಗಳು ನಡೆದಿವೆ. ಹೀಗಿದ್ದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಸಿ ಎಸ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ ತಾಲೂಕಿನ ಚಿರತೆ ಬಾಧಿತ ಪ್ರದೇಶಗಳಲ್ಲಿ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ನಾಗರಹೊಳೆ, ದುಬಾರೆ ಆನೆ ಶಿಬಿರದಿಂದ ಕೃಷ್ಣ, ಗಣೇಶ, ಧನಂಜಯ, ಪ್ರಶಾಂತ 4 ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಆದರೆ ಈ ಪ್ರಯತ್ನಗಳು ಫಲಕೊಡಲಿಲ್ಲ. ಬಳಿಕ ಡ್ರೋನ್ ಬಳಸಿ ಚಿರತೆ ಪತ್ತೆ ಹಚ್ಚಲು ಅರಣ್ಯ ಇಲಾಖೆ ಒಮ್ಮೆ ಪ್ರಯೋಗಾರ್ಥ ಕಾರ್ಯಾಚರಣೆ ನಡೆಸಿತ್ತು. ಇದೂ ಯಶಸ್ವಿಯಾಗಿಲ್ಲ. ಚಿರತೆ ದಾಳಿ ನಡೆಸುತ್ತಿರುವ ಘಟನೆಗಳು ಈ ಭಾಗದಲ್ಲಿ ಇನ್ನೂ ನಿಂತಿಲ್ಲ.