ತುಮಕೂರಲ್ಲಿ ರಾಜಣ್ಣ ಗುರ್ ಅಂದರೆ ಪರಮೇಶ್ವರ್ ಗೆ ಏಕೆ ಢವ ಢವ?
Recommended Video
ತುಮಕೂರು ಜಿಲ್ಲೆಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗಿಂತ ಹೆಚ್ಚು ಸುದ್ದಿಯಲ್ಲಿ ಇರುವವರು ಮಧುಗಿರಿಯ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿದ್ದ ಕೆ. ಎನ್.ರಾಜಣ್ಣ. ಅವರು ಡಿಸಿಎಂಗಿಂತ ಪ್ರಭಾವಿಯೇ? ಹೀಗೊಂದು ಪ್ರಶ್ನೆ ಜಿಲ್ಲೆಯ ರಾಜಕಾರಣವನ್ನು ಗಮನಿಸುವ ಎಲ್ಲರಲ್ಲೂ ಒಂದಲ್ಲಾ ಒಮ್ಮೆ ಮೂಡಿ ಮರೆಯಾಗುತ್ತದೆ.
ಶನಿವಾರ ರಾತ್ರೋ ರಾತ್ರಿ ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆಗಿದ್ದು, ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ನಡೆಯನ್ನು ದೇವೇಗೌಡರು, ಕುಮಾರಸ್ವಾಮಿಯ ದ್ವೇಷ ರಾಜಕಾರಣ ಎಂದು ರಾಜಣ್ಣ ಕರೆದಿದ್ದಾರೆ.
ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಕೆ. ಎನ್. ರಾಜಣ್ಣ
"ಕೆ. ಎನ್. ರಾಜಣ್ಣ ಅವರಂಥ ರಾಜ್ಯ ಮಟ್ಟದ ಪ್ರಭಾವಿ ಸಹಕಾರಿ ನಾಯಕ ನಿಮಗೆ ಇನ್ನೊಬ್ಬರು ಸಿಗುವುದು ಕಷ್ಟ. ಈ ಹಿಂದೆ ಜನತಾ ದಳದಲ್ಲೇ ಇದ್ದರು. ಆ ನಂತರ ಕಾಂಗ್ರೆಸ್ಗೆ ಬಂದರು. ಸಿದ್ದರಾಮಯ್ಯ ಅವರಿಗೆ ರಾಜಣ್ಣ ಆಪ್ತರು. ಆ ಕಾರಣಕ್ಕೆ ಹೀಗೆ ಪರಮೇಶ್ವರ್ ಮೇಲೆ ಸಿಟ್ಟು ಹೊರ ಹಾಕುತ್ತಾರೆ," ಎಂಬುದು ಕೇಳಿಬರುತ್ತಿರುವ ಮಾತು. ಹಾಗಂತ ಇದು ಸಂಪೂರ್ಣ ಸತ್ಯವೇನಲ್ಲ.
ಏಕೆಂದರೆ, "ರಾಜಣ್ಣ ಅವರು ಸಿದ್ದರಾಮಯ್ಯ ಅಂತಲ್ಲ, ಯಾರ ಮಾತನ್ನೂ ಕೇಳುವ ವ್ಯಕ್ತಿ ಅಲ್ಲ. ಹೇಗೆ ಸಿದ್ದರಾಮಯ್ಯ ಅವರಿಗೆ ಆಳದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಮೇಲೆ ಒಂದು ಅಪನಂಬಿಕೆ, ಸಿಟ್ಟು ಇದೆಯೋ ಅದೇ ರೀತಿ ರಾಜಣ್ಣ ಅವರಿಗೂ ಗೌಡರ ಕುಟುಂಬದ ಬಗೆಗೆ ಇದೆ. ತಮ್ಮ ರಾಜಕೀಯ ಲೆಕ್ಕಾಚಾರಗಳನ್ನೂ ಮೀರಿಸಿದಂಥ ಸಿಟ್ಟು ಅದು," ಎನ್ನುತ್ತಾರೆ ಮಧುಗಿರಿ ಕ್ಷೇತ್ರದ ರಾಜಣ್ಣ ಆಪ್ತರೊಬ್ಬರು.
ರಾಜಣ್ಣ ಅವರಿಗೆ ಮತ ಸೆಳೆಯುವ ತಾಕತ್ತಿದೆ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಬಿಜೆಪಿಗೆ ಬಂದ ಮತಗಳೆಷ್ಟು ಎಂಬುದನ್ನು ಗಮನಿಸಿದರೂ ಈ ಕುರಿತು ಇನ್ನಷ್ಟು ಆಯಾಮಗಳು ಲಭ್ಯವಾಗುತ್ತವೆ. ಅಷ್ಟೇ ಅಲ್ಲ, ಇಡೀ ಜಿಲ್ಲೆಯಲ್ಲಿ ದೇವೇಗೌಡರ ಸೋಲಿಗೆ ರಾಜಣ್ಣ ಅವರ ಶ್ರಮ- ರಾಜಕೀಯ ತಂತ್ರಗಾರಿಕೆ ಎರಡೂ ಕೆಲಸ ಮಾಡಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಾಜಣ್ಣ ಅವರ ಬಗ್ಗೆ ಇಡೀ ತುಮಕೂರು ಜಿಲ್ಲೆಯ ಗ್ರಾಮೀಣ ಭಾಗದ ಜನರಲ್ಲಿ ಒಂದು ಪ್ರೀತಿ ಇದೆ. ಈ ಹಿಂದೆ ತುಮಕೂರಿನಲ್ಲಿ ಬರ ಪರಿಸ್ಥಿತಿಯ ವೇಳೆ ಸರಕಾರದಿಂದ ಮೇವು ಕೇಂದ್ರ ತೆರೆದಾಗ ಡಿಸಿಸಿ ಬ್ಯಾಂಕ್ ನಿಂದಲೇ ರೈತರಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು ರಾಜಣ್ಣ. ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರ ಇರಬಹುದು, ಜಯಚಂದ್ರ ಪ್ರತಿನಿಧಿಸುವ ಶಿರಾ, ಅವರ ಮಗ ಪ್ರತಿನಿಧಿಸಿದ್ದ ಚಿಕ್ಕನಾಯಕನಹಳ್ಳಿ, ಅದೇ ರೀತಿ ಪಾವಗಡ, ತುಮಕೂರು ಗ್ರಾಮಾಂತರದಲ್ಲಿ ಹೀಗೆ ವಿವಿಧೆಡೆ ರಾಜಣ್ಣ ಅವರಿಗೆ ಮತ ಸೆಳೆಯುವ ತಾಕತ್ತಿದೆ ಎಂಬುದು ಸ್ಥಳೀಯವಾಗಿಯೇ ಕೇಳಿಬರುವ ಮಾತು.
ಪತ್ನಿ- ಮಗ ಕಾಂಗ್ರೆಸ್ ನಲ್ಲೇ ಇದ್ದಾರೆ
ರಾಜಣ್ಣ ಅವರ ಪತ್ನಿ ಶಾಂತಲಾ ಹಾಗೂ ಮಗ ರಾಜೇಂದ್ರ ಇಬ್ಬರೂ ಕಾಂಗ್ರೆಸ್ನಲ್ಲೇ ಇದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ರಾಜಣ್ಣ ಸಚಿವರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆದು ಸಾಧ್ಯವಾಗಲಿಲ್ಲ. ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಎಚ್. ವಿ.ವೀರಭದ್ರಯ್ಯ ಗೆದ್ದುಬಿಟ್ಟರು.
ಕೆ.ಎನ್.ರಾಜಣ್ಣಗೆ ಶಾಕ್, ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಹಿಸಲಾರದ ಸಂಕಟ
ದೇವೇಗೌಡರನ್ನು ವಿರೋಧಿಸಿಕೊಂಡೇ ರಾಜಕಾರಣ ಮಾಡಿಕೊಂಡು ಬಂದಿರುವ ರಾಜಣ್ಣ ಅವರಿಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಹಿಸಲಾರದ ಸಂಕಟ. ಆ ಕಾರಣಕ್ಕೆ ಆರಂಭದಿಂದಲೂ ತಮ್ಮ ವಿರೋಧ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ. ಯಾವಾಗ ದೇವೇಗೌಡರನ್ನು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಪರಮೇಶ್ವರ್ ಕರೆದುಕೊಂಡು ಬಂದರೋ ಆಗ ರಾಜಣ್ಣ ಜ್ವಾಲಾಮುಖಿ ಆಗಿಹೋದರು.
ಪರಮೇಶ್ವರ್ ರನ್ನು ಹಣಿಯುವುದು ಕಷ್ಟ ಆಗಲ್ಲ
ಮಧುಗಿರಿಯಲ್ಲಿ ರಾಜಣ್ಣ ತುಂಬ ಒಳ್ಳೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದರ ಜತೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಡಿದ ಕೆಲಸವೂ ಬೆನ್ನಿಗಿದೆ. ಇನ್ನು ಸಹಕಾರಿ ಕ್ಷೇತ್ರದ ಹಿನ್ನೆಲೆಯ ಕಾರಣಕ್ಕೆ ಪಕ್ಷಾತೀತವಾಗಿ ಪ್ರಭಾವಿಗಳ ಸಂಪರ್ಕವೂ ಇದೆ. ಸದ್ಯದ ಸ್ಥಿತಿ ಗಮನಿಸಿದರೆ ರಾಜಣ್ಣ ರಾಜಕೀಯ ನಿವೃತ್ತಿ ಘೋಷಿಸಿರುವುದು ಹೆಚ್ಚು ಆತಂಕಕ್ಕೆ ಕಾರಣ ಆಗಬಹುದಾದದ್ದು ಪರಮೇಶ್ವರ್ ಅವರಿಗೆ. ಏಕೆಂದರೆ, "ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಮುಖ್ಯ ಕಾರಣರಾದ ರಾಜಣ್ಣ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವೈರಿ ಪರಮೇಶ್ವರ್ ರನ್ನು ಹಣಿಯುವುದು ಕಷ್ಟ ಆಗಲ್ಲ" ಅನ್ನೋದು ರಾಜಣ್ಣ ಆವರನ್ನು ತುಂಬ ಹತ್ತಿರದಿಂದ ಬಲ್ಲವರ ಮಾತು.