ಮುಂದಿನ ದಿನದಲ್ಲಿ ಯಾರು ಕಂಸ ತಿಳಿಯಲಿದೆ: ಬಿಎಸ್ ವೈ
ತುಮಕೂರು, ಡಿಸೆಂಬರ್ 28; ಕರ್ನಾಟಕದಲ್ಲಿ ಭೀಕರ ಬರ ಆವರಿಸಿರುವುದರಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬುಧವಾರ ತುಮಕೂರಿನಿಂದ ಬರ ಅಧ್ಯಯನ ಪ್ರವಾಸವನ್ನು ಆರಂಭಿಸಿದ್ದು, ಈ ವೇಳೆ ಈ ಶ್ವರಪ್ಪ ಮಾತಿಗೆ ಪ್ರತ್ಯುತ್ತರವಾಗಿ ಮುಂದಿನ ದಿನಗಳಲ್ಲಿ ಯಾರು ಕಂಸ ಯಾರು ಅರ್ಜುನ ತಿಳಿಯಲಿದೆ ಎಂದರು.
ಬುಧವಾರ ಬೆಳಗ್ಗೆ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ರಾಜ್ಯದಲ್ಲಿ ರೈತರಿಗೆ ಆಗಿರುವ ತೊಂದರೆ, ಮತ್ತು ಬೆಳೆ ನಷ್ಟ ಕುರಿತಂತೆ ಅಧ್ಯಯನ ನಡೆಸಲು ಪ್ರವಾಸ ಪ್ರಾರಂಭಿಸಿದರು. ಈ ವೇಳೆ ಮಾತನಾಡಿದ ಬಿಎಸ್ ವೈ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ . ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಕುಡಿವ ನೀರು ಮತ್ತು ಪಶುಗಳಿಗೆ ಉಚಿತ ಮೇವು ಸರಬರಾಜು ಮಾಡಬೇಕು. ಎಲ್ಲೆಡೆ ಗೋಶಾಲೆ, ಮೇವು ಬ್ಯಾಂಕ್ ಸ್ಥಾಪಿಸಬೇಕು. ಕೆರೆಗಳ ಹೂಳೆತ್ತುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.[ಈಶ್ವರಪ್ಪ ವಿರುದ್ದ 'ದಲಿತ ಬ್ರಹ್ಮಾಸ್ತ್ರ' ಪ್ರಯೋಗಿಸಲು ಬಿಎಸ್ವೈ ಸಜ್ಜು?]
ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ಸ್ಥಾಪನೆಯಲ್ಲಿ ನಿರತರಾಗಿದ್ದಾರೆ. ನಮಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಅವರು ನಮ್ಮ ಬಗ್ಗೆ ಕಂಸ ಎಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಕಂಸ, ಯಾರು ಅರ್ಜುನ ಎಂಬುದು ತಿಳಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನು ರಾಯಣ್ಣ ಬ್ರಿಗೇಡ್ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದಲ್ಲಿ ಮೇಟಿ ಹೊರತು ಪಡಿಸಿ ಇನ್ನೂ ಮೂವರು ಸಚಿವರು ರಾಜೀನಾಮೆ ನೀಡುತ್ತಾರೆ ಎಂದು ಹೇಳಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪನವರು ಈ ಬಗ್ಗೆ ಗೃಹ ಸಚಿವರಾದ ಪರಮೇಶ್ವರ್ ಅವರಿಗೇ ತಿಳಿದಿದೆ. ಗುಪ್ತದಳದ ವರದಿ ತರಿಸಿಕೊಂಡು ಪರಿಶೀಲಿಸಲಿ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ-ಸುಲಿಗೆಗಳು ಹೆಚ್ಚಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಪರಿಹಾರ ಕಾರ್ಯಗಳಿಗೆ ಹೆಚ್ಚಿನ ನೆರವನ್ನು ಕೋರಲು ಜನವರಿ 4ರ೦ದು ನಿಯೋಗದೊ೦ದಿಗೆ ಪ್ರಧಾನಿಗಳು ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಿ ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಕಷ್ಟ ವಿವರಿಸಿ ನೆರವು ಕೇಳುವುದಾಗಿ ತಿಳಿಸಿದರು.
ಬರ ಅಧ್ಯಯನ ಪ್ರವಾಸಕ್ಕೆ ಈಶ್ವರಪ್ಪ ಅವರನ್ನು ಕೈಬಿಟ್ಟಿರುವ ಕಾರಣ ಈಶ್ವರಪ್ಪ, ಯಡಿಯೂರಪ್ಪ ಅವರನ್ನು ಕಂಸ ಎಂದು ಸಂಭೋದಿಸಿದ್ದಾರೆ, ಈ ಕಾರಣದಿಂದ ಬಿಜೆಪಿ ರಾಜಕೀಯದಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಮತ್ತಷ್ಟು ಬಿರುಕಿಗೆ ಕಾರಣವಾಗಿದೆ.