ನಳಿನ್ ಕಟೀಲ್ ಉಲ್ಲೇಖಿಸಿದ ಶಿರಾ ಪ್ರಚಾರದಲ್ಲಿರುವ ಬಿಜೆಪಿಯ ಪಂಚ ಪಾಂಡವರು
ತುಮಕೂರು, ಅ 29: ಶಿರಾ ಕ್ಷೇತ್ರದ ಉಪಚುನಾವಣೆಯ ಯುದ್ದವನ್ನು ಗೆಲ್ಲಲು ಬಿಜೆಪಿ ಪಂಚ ಪಾಂಡವರನ್ನು ಕಳುಹಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ.
ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟ ಕಟೀಲ್, "ಶಿರಾದಲ್ಲಿ ಹುಲಿಯಾ ಮುಂತಾದ ಕಾಡು ಪ್ರಾಣಿಯ ಕಾಟ ಆರಂಭವಾಗಿದೆ"ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ಈ ಚುನಾವಣೆಯನ್ನು ಗೆಲ್ಲುವುದು ನಿಶ್ಚಿತ ಎಂದಿದ್ದಾರೆ.
ಸಿದ್ದರಾಮಯ್ಯ, ನಳಿನ್ ಕಟೀಲ್ ಜುಗಲ್ ಬಂದಿ: ಜನರಿಗೆ ಪುಕ್ಸಟೆ ರಸಕವಳ
ಮಾದಿಗ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಟೀಲ್, ಶಿರಾ ಕ್ಷೇತ್ರದ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿದ್ದಾರೆ. "ನಾವು ಈ ಯುದ್ದದಲ್ಲಿ ಗೆಲ್ಲುತ್ತೇವೆ. ಧರ್ಮಕ್ಕೆ ಯಾವತ್ತೂ ಜಯ ಸಿಗುತ್ತದೆ"ಎನ್ನುವ ಭರವಸೆಯ ಮಾತನ್ನಾಡಿದ್ದಾರೆ.
"ಈ ಧರ್ಮಯುದ್ದವನ್ನು ನಾವು ಪಂಚ ಪಾಂಡವರಿಗೆ ವಹಿಸಿದ್ದೇವೆ. ಯುದಿಷ್ಠಿರನಾಗಿ ಸುರೇಶ್ ಗೌಡ್ರು, ವಿಜಯೇಂದ್ರ ಅವರು ಭೀಮನಾಗಿ, ಪ್ರತಾಪ್ ಸಿಂಹ ಅವರು ಅರ್ಜುನನಾಗಿ, ರವಿಕುಮಾರ್ ಅವರು ನಕುಲನಾಗಿ ಮತ್ತು ನಾರಾಯಣಸ್ವಾಮಿಯವರು ಸಹದೇವರಂತೆ" ಎಂದು ಕಟೀಲ್ ಹೇಳಿದ್ದಾರೆ.
ನಾಡ ಕಾಡುವ ಹುಲಿಯನ್ನು ಕಾಡಿಗಟ್ಟದೆ ಬಿಡುವುದಿಲ್ಲ: ಶ್ರೀನಿವಾಸ ಪೂಜಾರಿ
"ಮಹಾಭಾರತದಲ್ಲಿ ಕೊನೆಗೆ ಜಯ ಸಿಕ್ಕಿದ್ದು ಧರ್ಮಕ್ಕೆ ಮತ್ತು ಪಾಂಡವರಿಗೆ. ಇವರನ್ನೆಲ್ಲಾ ರಕ್ಷಿಸಲು ಶ್ರೀಕೃಷ್ಣ ಪರಮಾತ್ಮನಂತೆ ಗೋವಿಂದ ಕಾರಜೋಳ ಅವರಿದ್ದಾರೆ"ಎಂದು ನಳಿನ್ ಕಟೀಲ್ ಹೇಳಿದ್ದಾರೆ.
"ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಮೊದಲು ಅವರು ಮಾತನಾಡುವುದನ್ನು ಕಲಿಯಲಿ. ನನ್ನ ಧಮ್ ಬಗ್ಗೆ ಪ್ರಶ್ನಿಸಿರುವ ಅವರು, ಚಿದಂಬರಂ ಮುಂದೆ ನಿಂತು ಮಾತನಾಡುವ ಧಮ್ ಅನ್ನು ತೋರಿಸುತ್ತಾರಾ"ಎಂದು ಕಟೀಲ್, ಸಿದ್ದರಾಮಯ್ಯಗೆ ಕುಟುಕಿದ್ದರು.