ಶಿರಾ ಉಪಚುನಾವಣೆ ಸೋಲು: ಡಾ.ಪರಮೇಶ್ವರ್ ವಿರುದ್ದ ದೂರು? ಸ್ಪಷ್ಟನೆ
ತುಮಕೂರು, ನ 20: ಶಿರಾ ಅಸೆಂಬ್ಲಿ ಉಪಚುನಾವಣೆಯ ಸೋಲಿನ ಹಿನ್ನಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಡಾ.ಪರಮೇಶ್ವರ್ ವಿರುದ್ದ ಕೆಪಿಸಿಸಿ ಪ್ರಮುಖರಾಗಿ ದೂರಲಾಡಗಿದೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಮತ್ತೋರ್ವ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ತೆರೆ ಎಳಿದಿದ್ದಾರೆ.
ಈ ಬಗ್ಗೆ ಮಾತನಾಡುತ್ತಿದ್ದ ರಾಜಣ್ಣ, "ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶಿರಾ ಉಪಚುನಾವಣೆಯ ಸೋಲಿನ ನಂತರ ಭೇಟಿಯಾಗಿದ್ದು ನಿಜ. ಆದರೆ, ನಾನು ಪರಮೇಶ್ವರ್ ವಿರುದ್ದ ದೂರನ್ನು ನೀಡಿಲ್ಲ"ಎಂದು ಹೇಳಿದ್ದಾರೆ.
ಉಪಚುನಾವಣೆ ಸೋಲು: ವರಿಷ್ಠರಿಗೆ ಡಿಕೆಶಿ ನೀಡಿದ ವರದಿಯಲ್ಲಿ ಉಲ್ಲೇಖವಾದ ಕುತೂಹಲಕಾರಿ ಅಂಶಗಳು
"ನಾನು, ಪರಮೇಶ್ವರ್ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಟಿ.ಬಿ.ಜಯಚಂದ್ರ ಗೆಲುವಿಗೆ ಶ್ರಮಿಸಿದ್ದೇವೆ. ಆದರೆ, ಬಿಜೆಪಿಯವರ ಅತಿಯಾದ ಸುಳ್ಳು ಮತ್ತು ಭರವಸೆಯಿಂದಾಗಿ ಡಾ.ರಾಜೇಶ್ ಗೌಡ ವಿಜಯ ಸಾಧಿಸಿದರು"ಎಂದು ರಾಜಣ್ಣ ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಪಕ್ಷದ ಸೋಲಿಗೆ ಡಾ.ಪರಮೇಶ್ವರ್ ಆದಿಯಾಗಿ ಕೆಲವು ಮುಖಂಡರು ಆತ್ಮಸಾಕ್ಷಿಯಾಗಿ ಕೆಲಸ ಮಾಡಿಲ್ಲ, ಹಾಗಾಗಿ, ಅವರ ವಿರುದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿ.ಬಿ.ಜಯಚಂದ್ರ ಜೊತೆ ಕೆ.ಎನ್.ರಾಜಣ್ಣ ಕೂಡಾ ಟಿಕೆಟ್ ಬಯಸಿದ್ದರು. ಆದರೆ, ಡಿಕೆಶಿ, ಇಬ್ಬರೂ ನಾಯಕರನ್ನು ಕರೆಸಿ ಮಾತುಕತೆ ನಡೆಸಿ, ರಾಜಣ್ಣ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಡಾ.ಜಿ.ಪರಮೇಶ್ವರ್ ಅವರಿಗೆ ಶಿರಾ ಉಪಚುನಾವಣೆಯ ಉಸ್ತುವಾರಿಯನ್ನು ವಹಿಸಲಾಗಿತ್ತು.
ಪರಮೇಶ್ವರ್ ಅವರಿಗೆ ಶಿರಾ ಉಸ್ತುವಾರಿ ವಹಿಸಿದ್ದರೂ ಅವರು ಚುನಾವಣಾ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿಲ್ಲ. ಜೊತೆಗೆ, ಬಿಜೆಪಿಯವರಿಗಿದ್ದಷ್ಟು ಕಾರ್ಯಕರ್ತರ ಬಲ ಮತ್ತು ಸಂಪನ್ಮೂಲ ಕೂಡಾ ನಮ್ಮಲ್ಲಿ ಇರಲಿಲ್ಲ ಎಂದು ಕೆ.ಎನ್.ರಾಜಣ್ಣ ಅವರು, ಸಿದ್ದರಾಮಯ್ಯವರ ಬಳಿ ದೂರಿದ್ದರು ಎಂದು ಹೇಳಲಾಗುತ್ತಿತ್ತು.