ತುಮಕೂರು: ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ?
ತುಮಕೂರು, ಮಾರ್ಚ್ 23: ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ತವರು ತುಮಕೂರಿನಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ಅದೂ ಸ್ವಪಕ್ಷೀಯರಿಂದಲೇ. ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ತ್ಯಾಗ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪರಮೇಶ್ವರ್ ಅವರ ಅಭಿಪ್ರಾಯಕ್ಕೆ ಮನ್ನಣೆ ದೊರೆತಿಲ್ಲ.
ತುಮಕೂರಿನಿಂದಲೇ ದೇವೇಗೌಡರು ಸ್ಪರ್ಧೆ, ಸೋಮವಾರ ನಾಮಪತ್ರ
ಇದರ ಬೆನ್ನಲ್ಲೇ ತುಮಕೂರು ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುವುದು ಖಚಿತವಾಗಿದೆ. ತಮ್ಮ ಹಿಡಿತದಲ್ಲಿರುವ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಅನಿವಾರ್ಯತೆಗೆ ಕಾಂಗ್ರೆಸ್ ಒಳಗಾಗಿದೆ.
ಹೈಕಮಾಂಡ್ ನಿರ್ಧಾರದಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಇದರಿಂದ ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟಲಿದ್ದು, ಕ್ಷೇತ್ರದಲ್ಲಿ ಇಕ್ಕಟ್ಟಿಗೆ ಸಿಲುಕಲಿದೆ.
ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ
ಒಂದು ವೇಳೆ ಅವರು ಬಂಡಾಯವೆದ್ದರೆ, ಅದನ್ನು ಶಮನ ಮಾಡಲು ಕಾಂಗ್ರೆಸ್ ಹರಸಾಹಸ ಪಡಬೇಕಾಗಲಿದೆ. ಇದರಿಂದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಕಾಂಗ್ರೆಸ್ಗೆ ಹಿನ್ನಡೆಯುಂಟಾಗಲಿದೆ. ಮೈತ್ರಿ ಸೂತ್ರದ ಪ್ರಕಾರ ಹಾಲಿ ಸಂಸದರ ಕ್ಷೇತ್ರವನ್ನು ಇನ್ನೊಂದು ಪಕ್ಷಕ್ಕೆ ಬಿಟ್ಟುಕೊಡುವಂತಿಲ್ಲ. ಆದರೆ ಅದು ತುಮಕೂರಿನಲ್ಲಿ ಜಾರಿಯಾಗಿಲ್ಲ. ಇದು ಪಕ್ಷದೊಳಗೆ ಅನೇಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮುದ್ದಹನುಮೇಗೌಡ ಸಭೆ
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆಯೇ ಮುಂದಿನ ನಡೆ ಬಗ್ಗೆ ಚರ್ಚಿಸಲು ಮುದ್ದಹನುಮೇಗೌಡ ನಿರ್ಧರಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದೋ ಅಥವಾ ಹೈಕಮಾಂಡ್ ಮತ್ತು ಉಳಿದ ನಾಯಕರ ತೀರ್ಮಾನದಂತೆ ಜೆಡಿಎಸ್ಗೆ ಬೆಂಬಲ ನೀಡುವುದೋ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಅವರು ತುಮಕೂರಿನ ಹೆಬ್ಬೂರು ಗ್ರಾಮದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಶನಿವಾರ ಬೆಂಬಲಿಗರೊಂದಿಗೆ ಸಭೆ ನಡೆಸಲಿದ್ದಾರೆ.
ಹತಾಶೆಯಲ್ಲಿ ಪರಮೇಶ್ವರ್
ತಮ್ಮ ಆಕ್ಷೇಪಕ್ಕೆ ಕಿಂಚಿತ್ತೂ ಮನ್ನಣೆ ದೊರಕದೆ ಇರುವುದು ಮತ್ತು ಕಾಂಗ್ರೆಸ್ನಿಂದಲೇ ಬೆಂಬಲ ಸಿಗದೆ ಇರುವುದು ಜಿ. ಪರಮೇಶ್ವರ್ ಅವರಿಗೆ ಇರಿಸುಮುರುಸು ಉಂಟುಮಾಡಿದೆ. ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವವನ್ನು ಉಳಿಸಿಕೊಳ್ಳಲು ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವಂತೆ ಮಾಡುವುದು ಅವರಿಗೆ ಅಗತ್ಯವಾಗಿತ್ತು. ಆದರೆ, ಅದರಲ್ಲಿ ವಿಫಲರಾಗಿರುವುದು ಅವರಲ್ಲಿ ಹತಾಶೆ ಮೂಡಿಸಿದೆ ಎನ್ನಲಾಗಿದೆ.
ವಿರೋಧಿಗಳನ್ನು ಪತರಗುಟ್ಟಿಸಿದ ದೇವೇಗೌಡರ ಚಾಣಾಕ್ಷ ನಡೆಗೆ ಉಘೇ ಉಘೇ
ಮನವಿ ಒಪ್ಪದಿದ್ದ ದೇವೇಗೌಡ
ತುಮಕೂರನ್ನು ಕಾಂಗ್ರೆಸ್ಗೆ ಮರಳಿ ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಿಗೆ ಪರಮೇಶ್ವರ್ ಮನವಿ ಮಾಡಿದ್ದರು. ಇದಕ್ಕೆ ದೇವೇಗೌಡ ಅವರು ಒಪ್ಪಿರಲಿಲ್ಲ. ಹೈಕಂಆಂಡ್ ಮೊರೆ ಹೋಗಿದ್ದರೂ ಅವರಿಗೆ ಫಲ ಸಿಕ್ಕಿರಲಿಲ್ಲ. ಇದರಿಂದ ಚುನಾವಣೆ ಮೈತ್ರಿ ಸಂಬಂಧ ನಡೆದ ಸಭೆಗೆ ಪರಮೇಶ್ವರ್ ಗೈರು ಹಾಜರಾಗಿದ್ದರು. ಪಕ್ಷದಲ್ಲಿನ ತಮ್ಮ ಆಪ್ತರೊಂದಿಗೆ ಪರಮೇಶ್ವರ್ ಅಸಮಾಧಾನ ತೋಡಿಕೊಂಡಿದ್ದರು. ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವಂತೆ ಮಾಡುವುದರಲ್ಲಿ ಸಿದ್ದರಾಮಯ್ಯ ಕೈವಾಡವಿದೆ ಎಂದು ಅವರು ಸಿಟ್ಟುಗೊಂಡಿದ್ದಾರೆ ಎನ್ನಲಾಗಿದೆ.
ದೇವೇಗೌಡರಿಂದ ಸೋಮವಾರ ನಾಮಪತ್ರ
ತಾವು ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ಎಚ್ ಡಿ ದೇವೇಗೌಡ ಅವರು ಶುಕ್ರವಾರ ನಿರ್ಧಾರ ಪ್ರಕಟಿಸಿದ್ದಾರೆ. ಅವರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳ ಅಯ್ಕೆ ದೇವೇಗೌಡ ಅವರ ಮುಂದಿದ್ದವು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಿವಿ ಸದಾನಂದ ಗೌಡ ಅಭ್ಯರ್ಥಿಯಾಗಿದ್ದು, ಅವರ ಎದುರು ಗೆಲುವು ಕಷ್ಟ ಎಂಬ ಕಾರಣಕ್ಕೆ ದೇವೇಗೌಡ ಅವರು ತುಮಕೂರು ಆಯ್ದುಕೊಂಡಿದ್ದಾರೆ ಎನ್ನಲಾಗಿದೆ.