ಅಡಿಕೆ, ತೆಂಗು ಬೆಂಬಲ ಬೆಲೆಗೆ ತುಮಕೂರು ಸಂಸದರ ಒತ್ತಾಯ
ನವದೆಹಲಿ, ಆಗಸ್ಟ್, 03: ಕರ್ನಾಟಕದ ತೆಂಗು ಮತ್ತು ಅಡಿಕೆ ಬೆಳೆಗಾರರ ಪರವಾಗಿ ತುಮಕೂರು ಸಂಸದ ಎಸ್ ಪಿ ಮುದ್ದಹನುಮೇಗೌಡ ಸಂಸತ್ ನಲ್ಲಿ ಧ್ವನಿ ಎತ್ತಿದ್ದಾರೆ. ತೆಂಗು ಮತ್ತು ಅಡಿಕೆ ದರ ಪಾತಾಳಕ್ಕೆ ತಲುಪಿದ್ದು ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಗೌಡ ಅವರು, ಕ್ವಿಂಟಲ್ ಕೊಬ್ಬರಿಯ ಬೆಲೆ 18,000 ರು. ನಿಂದ 7,000ರು ಗೆ ಅತ್ತ ಕ್ವಿಂಟಾಲ್ ಗೆ 80,000ರು. ಇದ್ದ ಅಡಿಕೆ 18 ಸಾ ವಿರ ರು. ಗೆ ಕುಸಿದಿದೆ. ಬೆಳೆಗಾರರು ಆತಂಕಕ್ಕೆ ಸಿಲುಕಿದ್ದಾರೆ ಎಂದು ಕರ್ನಾಟಕದ ರೈತರ ಅಳಲನ್ನು ಬಿಚ್ಚಿಟ್ಟರು.[ತೆಂಗು ಬೆಳೆಗಾರರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳು]
ಕೃಷಿ ಕೆಲಸಗಳಿಗೆ ಮಾಡುತ್ತಿರುವ ವೆಚ್ಚವೂ ಬೆಳೆಗಾರರಿಗೆ ಲಭ್ಯವಾಗುತ್ತಿಲ್ಲ. ಕೊಬ್ಬರಿ, ಅಡಿಕೆ ದರ ಕುಸಿತದಿಂದ ಕಂಗಾಲಾಗಿರುವ ರೈತರೂ ಆತ್ಮಹತ್ಯೆ ಹಾದಿ ತುಳಿದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಬಲ ಬೆಲೆ ನೀಡಿ
ಪ್ರತಿ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 15,000 ರು. ಅಡಿಕೆಗೆ 30,000ರು. ಬೆಂಬಲ ಬೆಲೆ ನಿಗದಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು ಎಂದು ಮುದ್ದಹನುಮೇಗೌಡ ಒತ್ತಾಯಿಸಿದರು. [ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?]
ಕರ್ನಾಟಕದ ಸಂಸದರ ಬೆಂಬಲ
ಮುದ್ದಹನುಮೇಗೌಡ ರ ಮಾತಿಗೆ ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ ಬೆಂಬಲ ವ್ಯಕ್ತಪಡಿಸಿದರು.[ಅಡಿಕೆ ಧಾರಣೆ ಕುಸಿತಕ್ಕೆ ಸಾರ್ಕ್ ಒಕ್ಕೂಟ ಕಾರಣ ಅಂದ್ರೆ ನಂಬ್ತೀರಾ?]
ಬಿಜೆಪಿ ಮನವಿ
ಅಡಿಕೆ ಮತ್ತು ತೆಂಗು ಧಾರಣೆ ಕುಸಿತ ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯದ ಬಿಜೆಪಿ ಸಂಸದರು ನಾಯಕರು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದರು. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ, ಸಂಸದರಾದ ಶ್ರೀರಾಮುಲು ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಬಿ ವೈ ರಾಘವೇಂದ್ರ ನಿಯೋಗ ನಿರ್ಮಲಾ ಅವರನ್ನು ಭೇಟಿ ಮಾಡಿತ್ತು.
ಬಂದ್ ಮಾಡಲಾಗಿತ್ತು
ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿ ಖಂಡಿಸಿ ರೈತ ಸಂಘಟನೆಗಳು ಜೂನ್ 27 ರಂದು ವಿವಿಧ ಜಿಲ್ಲೆಗಳ ಬಂದ್ ಮಾಡಿದ್ದವು ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗಿತ್ತು.