ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಈಗ ಹೇಗಿದ್ದಾರೆ?
ತುಮಕೂರು, ಡಿಸೆಂಬರ್ 06: ಅನಾರೋಗ್ಯದಿಂದ ಬಳಲುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು ಭಕ್ತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಮಠದ ಕಿರಿಯ ಸ್ವಾಮೀಜಿ ಶ್ರೀ ಸಿದ್ದಲಿಂಗ ಶ್ರೀ ಹೇಳಿದ್ದಾರೆ.
ಭಕ್ತರು ಶ್ರೀಗಳ ದರ್ಶನಕ್ಕೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. 111 ವರ್ಷ ವಯಸ್ಸಿನ ಶ್ರೀಗಳ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಯ, ಆತಂಕ ಪಡುವ ಅಗತ್ಯವಿಲ್ಲ
ಡಾ. ರವೀಂದ್ರ ಅವರ ನೇತೃತ್ವದಲ್ಲಿ ತುಮಕೂರಿನ ಹಳೆಯ ಮಠದಲ್ಲಿ ಚಿಕಿತ್ಸೆನಡೆಯುತ್ತಿದೆ.
ಶ್ರೀಗಳ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ, ಶ್ರೀಗಳನ್ನು ಭೇಟಿಯಾಗಿದ್ದ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ನಿನ್ನೆ ಸಂಜೆ ಶ್ರೀಗಳ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಸ್ವಲ್ಪ ಜ್ವರವೂ ಕಂಡು ಬಂದಿತ್ತು. ಹಾಗಾಗಿ ಡಾ. ರವೀಂದ್ರ ಅವರ ವೈದ್ಯರ ತಂಡ ಚಿಕಿತ್ಸೆ ನೀಡಿ ಹೋಗಿದೆ. ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಸ್ವಾಮೀಜಿ ರಾತ್ರಿ ಪೂಜೆ ನೆರವೇರಿಸಿದ್ದಾರೆ." ಎಂದರು.
ಹಾಗೇ ಮುಂದುವರಿದು, "ಸ್ಟೆಂಟ್ ಅಳವಡಿಕೆ ವಿಚಾರದಲ್ಲಿ ನುರಿತ ವೈದ್ಯರ ಸಲಹೆಗಳನ್ನು ಪಡೆಯಬೇಕಿದೆ. ಹಾಗಾಗಿ ಮದರಾಸಿನ ಡಾ. ಮಹಮದ್ ರಿಲ್ಲಾ, ತಮಿಳುನಾಡು ಮೂಲದ ಪಳನಿ ವೇಲುರವರ ಸಲಹೆ ಪಡೆಯಬೇಕಿದೆ. ನಮ್ಮ ವೈದ್ಯರ ತಂಡವೇ ಮದರಾಸ್ ಹಾಗೂ ತಮಿಳುನಾಡಿಗೆ ತೆರಳಿ ಅವರ ಅಭಿಪ್ರಾಯ ಪಡೆಯುತ್ತೇವೆ. ಸದ್ಯ ಸ್ವಾಮೀಜಿ ಅವರನ್ನು ಶಿಫ್ಟ್ ಮಾಡಲ್ಲ. ಈಗಾಗ್ಲೇ 11 ಸ್ಟೆಂಟ್ ಅಳವಡಿಸಲಾಗಿದೆ. ಆ ಸ್ಟಂಟ್ ಗಳನ್ನು ತೆಗೆಯುವುದು ಬಹಳಷ್ಟು ಕಷ್ಟ. ಅದಕ್ಕೆ ನುರಿತ ವೈದ್ಯರ ಸಲಹೆ ಪಡೆಯುತ್ತೇವೆ" ಎಂದರು.
"ಸರ್ಜರಿ ಮುಖಾಂತರ ಸ್ಟಂಟ್ ತೆಗೆಯ ಬಹುದಾ ಅಥವಾ ಬೇರೆನಾದ್ರೂ ಮಾಡಬಹುದಾ ಎಂದು ಚರ್ಚೆ ಮಾಡುತ್ತೇವೆ. ಎಂಡೋಸ್ಕೋಪಿ ಮುಖಾಂತರ ಏನಾದ್ರೂ ಮಾಡಬಹುದಾ ಎಂದು ಅಭಿಪ್ರಾಯ ಪಡೆಯುತ್ತೇವೆ" ಎಂದು ಡಾ.ಪರಮೇಶ್ವರ್ ಹೇಳಿದರು.