ಆರೆಸ್ಸೆಸ್, ಪತ್ರಿಕೆಗಳಿಗೆ ಬಿಎಸ್ ವೈ ಹಣ, ಸುರೇಶ್ ಗೌಡ ವಿಡಿಯೋ ವೈರಲ್
Recommended Video
ತುಮಕೂರು, ಏಪ್ರಿಲ್ 13: ತುಮಕೂರು ಗ್ರಾಮಾಂತರ ಶಾಸಕ ಹಾಗೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಿ.ಸುರೇಶ್ ಗೌಡ ಅವರು ಬಿಜೆಪಿ, ಯಡಿಯೂರಪ್ಪ, ಆರೆಸ್ಸೆಸ್ ಹಾಗೂ ರಾಜ್ಯ ಮಟ್ಟದ ಎರಡು ಪತ್ರಿಕೆಗಳ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡುವುದು ಬೇಡ ಎಂದಿದ್ದೆ ಅಂತ ಹೇಳಿದ್ದಾರೆ
ಈ ವಿಡಿಯೋ ಎಡಿಟ್ ಮಾಡಲಾಗಿದ್ದು, 6.21 ನಿಮಿಷದ ವಿಡಿಯೋ ಇದೆ. ಪಕ್ಷದೊಳಗೆ ಭಿನ್ನಮತಕ್ಕೆ ಯಾರು ಕಾರಣ, ಯಾಕೆ ವೈಮನಸ್ಯ ಏರ್ಪಟ್ಟಿದೆ? ಇತ್ಯಾದಿ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದ್ದು, ಯಡಿಯೂರಪ್ಪ ಅವರ ಪಟ್ಟ ಶಿಷ್ಯ ನಾನು. ನನಗೆ ಎಲ್ಲ ಗೊತ್ತು ಎಂದು ಮಾತನಾಡಿದ್ದಾರೆ ಬಿ.ಸುರೇಶ್ ಗೌಡರು.
ತುಮಕೂರು ಜಿಲ್ಲೆಯಲ್ಲಿ ಶಾಸಕರ ನಿಧಿ ಬಳಕೆ: ಸುರೇಶ್ ಗೌಡ ನಂಬರ್ ಒನ್
ಯಡಿಯೂರಪ್ಪ ಅವರು ನನ್ನ ಕ್ಷೇತ್ರದಲ್ಲಿ ಒಂದು ರುಪಾಯಿ ಕಾಸು ಕೊಟ್ಟಿಲ್ಲ. ನನ್ನ ಸೈಟು ಮಾರಿ ಎಲೆಕ್ಷನ್ ಗೆ ಖರ್ಚು ಮಾಡಿದ್ದೆ. ಮನೆ ಅಡವಿಟ್ಟು ಮೂರು ಪರ್ಸೆಂಟ್ ನಂತೆ ಸಾಲ ಪಡೆದಿದ್ದೆ. ಗೆದ್ದ ಮೇಲೆ ಯಡಿಯೂರಪ್ಪರನ್ನು ಕರೆಸಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿಸಿದ್ದೇನೆ ಎಂದಿದ್ದಾರೆ. ಇನ್ನು ಯಡಿಯೂರಪ್ಪ ಅವರಿಗೆ ನೂರಲ್ಲ, ಐನೂರು ಕೋಟಿ ರುಪಾಯಿ ಖರ್ಚು ಮಾಡಿದರೂ ಬಿಜೆಪಿ ಗೆಲ್ಲಲ್ಲ ಎಂದಿದ್ದರು ಅಂತ ಹೇಳಿದ್ದಾರೆ.
ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಮಧ್ಯೆ ವೈಮನಸ್ಯ ಏಕೆ?
ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಮಧ್ಯೆ ಏಕೆ ವೈಮನಸ್ಯ ಎಂದು ವಿವರಿಸಿರುವ ಅವರು, ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದವರೇ ಅವರು. ಈಶ್ವರಪ್ಪನಿಗೆ ನೀನೇ ಮುಖ್ಯಮಂತ್ರಿ ಅಂದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಅಂದರು. ಅಶೋಕನಿಗೆ ನೀನೇ ಮುಖ್ಯಮಂತ್ರಿ ಅಂತ ಹೇಳಿದರು. ಎಲ್ಲರೂ ಸೇರಿ ಚಾಡಿ ಹೇಳಿ, ಯಡಿಯೂರಪ್ಪ ಅವರ ಕಾಲೆಳೆದರು ಎಂದಿದ್ದಾರೆ.
ಜೆಡಿಎಸ್ ನ ಕುಮಾರಸ್ವಾಮಿ ಕಿಂಗ್ ಮೇಕರ್ ಆಗುವುದು ಬೇಡವಾಗಿತ್ತು
ಈಶ್ವರ ಬಿಟ್ಟರೆ ಯಡಿಯೂರಪ್ಪ ಅಂತಲೇ ನಂಬಿಕೊಂಡಿದ್ದವರು ನಾವು. ಆದರೆ ನಮಗೆ ಕೈ ಕೊಟ್ಟರೆ ಹೇಗೆ? ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ಅವರಿಗೆ ಗೊತ್ತಿತ್ತು. ಅತಂತ್ರ ವಿಧಾನಸಭೆ ಬಂದರೆ ಯಡಿಯೂರಪ್ಪ ಅವರಿಗೆ ಜೆಡಿಎಸ್ ನ ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುವುದು ಬೇಡವಾಗಿತ್ತು. ಇನ್ನು ಪಕ್ಷವನ್ನು ಮೀರಿ ಬಲಿಷ್ಠ ಆಗ್ತಿದ್ದರೆ ಹೈ ಕಮಾಂಡ್ ನವರೇ ಹೊಡೆಯುತ್ತಾರೆ. ಅಂತಹ ಅಡ್ವಾಣಿಯನ್ನೇ ಪಕ್ಕಕ್ಕೆ ಸರಿಸಿಬಿಟ್ಟರು ಎಂದಿದ್ದಾರೆ.
ಆರೆಸ್ಸೆಸ್ ಅವರಂಥ ಭ್ರಷ್ಟರು ಯಾರೂ ಇಲ್ಲ
ಕುಣಿಗಲ್, ಕೊರಟಗೆರೆ, ಗುಬ್ಬಿ, ಮಧುಗಿರಿಯಲ್ಲಿ ನಾನು ಹೇಳಿದವರಿಗೆ ಟಿಕೆಟ್ ಕೊಡ್ತಾರೆ. ಆರೆಸ್ಸೆಸ್ ಬಗ್ಗೆ ಮಾತನಾಡುವುದು ಬೇಡ. ಅವರಂಥ ಭ್ರಷ್ಟರು ಯಾರೂ ಇಲ್ಲ. ಸುಮ್ಮನೆ ದೇಶ ಪ್ರೇಮ ಅಂತಾರೆ. ಕರ್ನಾಟಕದಲ್ಲಿ ಯಾವ ನಾಯಕರಿಗೆ ಎಷ್ಟು ದುಡ್ಡು ಕೊಟ್ಟರು ಅಂತ ತೆಗೆಯಲಿ. ಎಲ್ಲ ಯಡಿಯೂರಪ್ಪ ಕೊಟ್ಟಿದ್ದು. ಯಾರಿಗೆ ಜಮೀನು ಎಷ್ಟು ಬರೆದುಕೊಟ್ಟೆ ಎಂದು ಯಡಿಯೂರಪ್ಪ ಹೇಳುತ್ತಾರೆ ಎಂದಿದ್ದಾರೆ ಸುರೇಶ್ ಗೌಡ.
ಯಾವ ಪತ್ರಿಕೆಗೆ ಎಷ್ಟು ಕೊಟ್ಟೆ ಅಂತ ಯಡಿಯೂರಪ್ಪ ಹೇಳ್ತಾರೆ
ಇನ್ನು ಯಾವ ಪತ್ರಿಕೆಗೆ ಎಷ್ಟು ಕೊಟ್ಟೆ ಅಂತ ಯಡಿಯೂರಪ್ಪ ಹೇಳ್ತಾರೆ. ಒಂದು ಪತ್ರಿಕೆಗೆ ಐದು ಕೋಟಿ ರುಪಾಯಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಇನ್ನೊಂದು ಪತ್ರಿಕೆಯ ಮಾಲೀಕರಿಗೆ ಏರ್ ಪೋರ್ಟ್ ರಸ್ತೆಯಲ್ಲಿ ಭೂಮಿಗೆ ಸಂಬಂಧಿಸಿದ ಹಾಗೆ ಅನುಕೂಲ ಮಾಡಿಕೊಟ್ಟಾಗ ಮುಖಪುಟದಲ್ಲಿ ಯಡಿಯೂರಪ್ಪ ಸಂದರ್ಶನ ಹಾಕಿದ್ದರು. ಆ ಪತ್ರಿಕೆ ಆಗ ಯಡ್ದಿಯೂರಪ್ಪ ಪರ ಇತ್ತು ಎಂದು ಹೇಳಿದ್ದಾರೆ.
ಸುರೇಶ್ ಗೌಡ ಪ್ರತಿಕ್ರಿಯೆ
ಹೀಗೆ ವಿಡಿಯೋ ವೈರಲ್ ಆದ ಮೇಲೆ, ಈ ಬಗ್ಗೆ ಒನ್ಇಂಡಿಯಾ ಕನ್ನಡ ಬಿ.ಸುರೇಶ್ ಗೌಡ ಅವರನ್ನು ಸಂಪರ್ಕಿಸಿ ಅಭಿಪ್ರಾಯ ಕೇಳಿದಾಗ, ಆ ವಿಡಿಯೋ ಹಳೆಯದು. ಬಿಜೆಪಿ ಹಾಗೂ ಕೆಜೆಪಿ ಎಂದು ಬೇರೆ ಆದ ಸಮಯದ್ದು. ಇದು ಖಾಸಗಿಯಾಗಿ ಮಾತನಾಡಿದ್ದೇ ವಿನಾ ಸಾರ್ವಜನಿಕವಾಗಿ ಮಾತನಾಡಿದ್ದಲ್ಲ. ಹಳೇ ವಿಡಿಯೋವೊಂದನ್ನು ಈಗ ಬೇಕೆಂತಲೇ ಹಬ್ಬಿಸುತ್ತಿದ್ದಾರೆ ಎಂದರು.