ತುಮಕೂರು ಮಶೀನ್ ಟೂಲ್ ಪಾರ್ಕ್ಗೆ ಫೆ.10ರಂದು ಶಂಕುಸ್ಥಾಪನೆ
ಬೆಂಗಳೂರು, ಫೆಬ್ರವರಿ 08 : ತುಮಕೂರಿನ ಬಳಿ ಇರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆಯೆತ್ತಲಿರುವ ತುಮಕೂರು ಮಶೀನ್ ಟೂಲ್ ಪಾರ್ಕ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಅವರು ನಾಳೆ (ಫೆ.10, ಶನಿವಾರ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ತುಮಕೂರಿನಿಂದ 19 ಕಿ.ಮೀ.ದೂರದಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರ ಸರಕಾರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಅನಂತ್ ಗೀತೆ ಕೂಡ ಪಾಲ್ಗೊಳ್ಳಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಅದ್ಯತೆ ಅತ್ಯಗತ್ಯ: ಸಚಿವ ಆರ್ ವಿ ದೇಶಪಾಂಡೆ
ಮಶೀನ್ ಟೂಲ್ ಉತ್ಪಾದನೆಯಲ್ಲಿ ಇಡೀ ರಾಷ್ಟ್ರದಲ್ಲೇ ಅಗ್ರಸ್ಥಾನದಲ್ಲಿರುವ ಕರ್ನಾಟಕ ರಾಜ್ಯದಲ್ಲಿ, ಈ ವಲಯದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಈ ಮಶೀನ್ ಟೂಲ್ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದು ದೇಶಪಾಂಡೆ ಅವರು ತಿಳಿಸಿದರು.
ಈ ಉದ್ದೇಶಕ್ಕಾಗಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 529.50 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇನ್ನು 30 ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಪಾರ್ಕ್ ಮಶೀನ್ ಟೂಲ್ ತಯಾರಿಕೆಗೆ ಬೇಕಾದ, ಜಾಗತಿಕ ಮಟ್ಟದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ನಲ್ಲಿ ಈ ಪಾರ್ಕ್ ಅನ್ನು ವಿಶ್ವ ದರ್ಜೆಯ ಕೈಗಾರಿಕಾ ನೆಲೆಯನ್ನಾಗಿ ಅಭಿವೃದ್ಧಿ ಪಡಿಸುವುದು ಇದರ ಗುರಿಯಾಗಿದೆ ಎಂದು ಅವರು ವಿವರಿಸಿದರು.
ಒಟ್ಟು 508 ಕೋಟಿ ರುಪಾಯಿ ಯೋಜನಾ ವೆಚ್ಚದ ಈ ಪಾರ್ಕ್ ನ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು 125 ಕೋಟಿ ರುಪಾಯಿಗಳನ್ನು ನೀಡಲು ಒಪ್ಪಿದ್ದು, ರಾಜ್ಯ ಸರಕಾರ ಉಳಿದ 383 ಕೋಟಿ ರುಪಾಯಿಗಳನ್ನು ಇದಕ್ಕಾಗಿ ವಿನಿಯೋಗಿಸಲಿದೆ. ಯೋಜನೆಯ ಜಾರಿಗಾಗಿ ಈಗಾಗಲೆ 2013ರ ಕಂಪನಿ ಕಾಯ್ದೆಯ ಪ್ರಕಾರ ವಿಶೇಷ ಯೋಜನಾ ವಾಹಕವನ್ನು ಸ್ಥಾಪಿಸಲಾಗಿದೆ ಎಂದು ದೇಶಪಾಂಡೆ ಅವರು ತಿಳಿಸಿದರು.