ಬಿಎಸ್ವೈ ಹೊಗಳಿ, ಕಟೀಲ್ ತೆಗಳಿದ ಬಿಜೆಪಿ ಮುಖಂಡ: ಪಕ್ಷದಿಂದ ಸಸ್ಪೆಂಡ್
ತುಮಕೂರು, ಅ 2: ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹೊಗಳಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ತೆಗಳಿದ ಬಿಜೆಪಿ ಮುಖಂಡರೊಬ್ಬರನ್ನು ಪಕ್ಷದಿಂದ ಸ್ಪಸ್ಪೆಂಡ್ ಮಾಡಲಾಗಿದೆ.
ತುಮಕೂರು ಜಿಲ್ಲೆ, ಕೊರಟಗೆರೆ ವಿಭಾಗದ ಕಾರ್ಯದರ್ಶಿ ಕೆ.ಶಿವರುದ್ರಯ್ಯ ಎನ್ನುವವರು, ಯಡಿಯೂರಪ್ಪನವರನ್ನು ಹೊಗಳಿ, ಕಟೀಲ್ ಅವರನ್ನು ತೆಗಳಿ, ಅದನ್ನು ವಿಡಿಯೋ ಮಾಡಿ, ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟಿದ್ದರು.
25 ಇದ್ದದ್ದು 2, 105 ಇದ್ದದ್ದು 10 ಆಗುವ ಮುನ್ನ ಮೋದಿ ಎಚ್ಚೆತ್ತುಕೊಳ್ಳಲಿ
" ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಸಣ್ಣ ಗ್ರಾಮಕ್ಕೆ ಭೇಟಿ ನೀಡಿದರೂ ಸಾವಿರಾರು ಜನ ಸೇರುತ್ತಾರೆ. ಇಂತಹ ಲೀಡರ್ ಕರ್ನಾಟಕದಲ್ಲಿ ಯಾರೂ ಇಲ್ಲ" ಎಂದು ವಿಡಿಯೋದಲ್ಲಿ ಬಿಎಸ್ವೈ ಅವರನ್ನು ಹೊಗಳಿದ್ದರು.
" ನಳಿನ್ ಕಟೀಲ್ ಬಂದರೆ ಐದು ಸಾವಿರ ಜನ ಸೇರುವುದಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಅಭ್ಯರ್ಥಿಯನ್ನು ಗೆಲ್ಲಿಸಲು ಯೋಗ್ಯವಲ್ಲದ ವ್ಯಕ್ತಿ, ಬಿಎಸ್ವೈ ಅವರಿಗೆ ಕಿರುಕುಳ ನೀಡುತ್ತಿದ್ದಾರೆ" ಎಂದು ಶಿವರುದ್ರಯ್ಯ ವಿಡಿಯೋದಲ್ಲಿ ಹೇಳಿದ್ದರು.
" ಯಡಿಯೂರಪ್ಪನವರಿಗೆ ನೆಮ್ಮದಿಯಿಂದ ಅಧಿಕಾರ ನಡೆಸಲು ಬಿಡುತ್ತಿಲ್ಲ. ಈಗಲಾದರೂ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಎಚ್ಚೆತ್ತುಕೊಳ್ಳಲಿ" ಎಂದು ಶಿವರುದ್ರಯ್ಯ, ವಿಡಿಯೋದಲ್ಲಿ ಸಲಹೆ ನೀಡಿದ್ದರು.
ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರನ್ನು ಬಹಿರಂಗವಾಗಿ ಟೀಕಿಸಿದ್ದಕ್ಕೆ ಈಗ ತಕ್ಕ ದಂಡವನ್ನು ಶಿವರುದ್ರಯ್ಯ ತೆರಬೇಕಾಗಿದೆ. ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್, ಅವರನ್ನು ಪಕ್ಷದ ಸದಸ್ಯತ್ವದಿಂದ ಬಿಡುಗಡೆಗೊಳಿಸಿದ್ದಾರೆ.