ತುಮಕೂರಿನ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಉದ್ಘಾಟನೆ
ತುಮಕೂರು, ಜುಲೈ 26: ಕೊರೊನಾ ಮೂರನೇ ಅಲೆ ಆತಂಕದ ನಡುವೆ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕ ಕೊರತೆ ತೀವ್ರವಾಗಿ ಎದುರಾಗಿದ್ದರಿಂದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣದ ಕಾರ್ಯಗಳು ನಡೆಯುತ್ತಿವೆ. ತುಮಕೂರು ಜಿಲ್ಲೆ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿಯೂ ಆಕ್ಸ್ಫಾಮ್ (OXFAM) ಇಂಡಿಯಾ ಕಡೆಯಿಂದ ಆಮ್ಲಜನಕ ಘಟಕ ನಿರ್ಮಾಣ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡರು, ಸ್ಥಳೀಯ ಶಾಸಕರೂ ಆದ ಡಾ.ಜಿ.ಪರಮೇಶ್ವರ್ ಜುಲೈ 26ರಂದು ಈ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಟಾಟಿಸಲಿದ್ದಾರೆ. ಆಕ್ಸ್ಫಾಮ್ ಇಂಡಿಯಾ ತನ್ನ "ಮಿಷನ್ ಸಂಜೀವಿನಿ" ಯೋಜನೆಯಡಿ ಸ್ಥಾಪಿಸಿರುವ 300 LPM ಘಟಕವು ಸುತ್ತಲಿನ 46 ಹಳ್ಳಿಗಳ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ಬಿಬಿಎಂಪಿಯಿಂದ ಮಕ್ಕಳಿಗೆ ವಿಶೇಷ ಕೋವಿಡ್ ಕೇಂದ್ರ ಸ್ಥಾಪನೆ
"ಕೊರೊನಾ ಎರಡನೆಯ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಆಕ್ಸ್ಫಾಮ್ ಇಂಡಿಯಾ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಭದ್ರಗೊಳಿಸುವತ್ತ ಕೆಲಸ ಮಾಡುತ್ತಿದ್ದು, ಮುಂದಿನ ಸಂಭಾವ್ಯ ಕೊರೊನಾ ಅಲೆಗೆ ತಯಾರಿ ನಡೆಸುತ್ತಿದೆ. ಸಂಸ್ಥೆ ಯೋಜಿಸಿರುವ ಏಳು ಆಮ್ಲಜನಕ ಘಟಕಗಳಲ್ಲಿ ತುಮಕೂರಿನ ಕೊರಟಗೆರೆ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದು ಮೊದಲನೆಯದಾಗಿದೆ ಎಂದು" ಕಂಪನಿ ನಿರ್ದೇಶಕ ಆಕ್ಸ್ಫಾಮ್ ಇಂಡಿಯಾದ ನಿರ್ದೇಶಕ ಪಂಕಜ್ ಆನಂದ್ ತಿಳಿಸಿದರು.
"ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ 9 ಆಸ್ಪತೆಗಳಿಗೆ ಮತ್ತು 40 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಉಪಕರಣಗಳನ್ನು ನೀಡಲಿದ್ದೇವೆ. 850 ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ಒದಗಿಸಿರುವ ಜೊತೆಗೆ ನಮ್ಮ ಸಂಸ್ಥೆ ರಾಜ್ಯಾದ್ಯಂತ 7000 ಆಶಾ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡುತ್ತಾ ಆರೋಗ್ಯ ಕಿಟ್ ಗಳನ್ನು ಒದಗಿಸುತ್ತಿದೆ. ಆರೋಗ್ಯ ಸಲಕರಣೆಗಳಾದ ಆಮ್ಲಜನಕ ಸಿಲಿಂಡರ್, BiPAP ಮೆಷಿನ್ ಗಳು ಮತ್ತು ಆಮ್ಲಜನಕ ಸಾಂದ್ರಕಗಳು, ಬೆಡ್ ಗಳು ಹಾಗೂ PPE ಕಿಟ್ ಗಳನ್ನು ಮೂರು ಸರ್ಕಾರಿ ಆಸ್ಪ್ರತ್ರೆಗಳು, ಒಂದು ಸೇವಾ ಆಸ್ಪತ್ರೆ ಹಾಗೂ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸಿದ್ದೇವೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಸೆಣಸಲು ಬೇಕಾದ ನಡವಳಿಕೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸೇರಿದಂತೆ ಜನರಲ್ಲಿ ಲಸಿಕೆ ಬಗ್ಗೆ ಇರುವ ತಿರಸ್ಕಾರವನ್ನು ಹೊಡೆದೋಡಿಸುವ ಪ್ರಯತ್ನ ನಡೆಯುತ್ತಿದೆ" ಎಂದು ತಿಳಿಸಿದರು.
ಮಾರ್ಚ್ 2020ರಿಂದ ದೇಶದ 16 ರಾಜ್ಯಗಳಲ್ಲಿ ಆಕ್ಸ್ಫಾಮ್ ಇಂಡಿಯಾ ಕೊರೊನಾ ಸಾಂಕ್ರಾಮಿಕದ ವಿರುದ್ಧ ಕೆಲಸ ಮಾಡುತ್ತಿದೆ. "ಕೋವಿಡ್ ರೆಸ್ಪಾನ್ಸ್" ಅಡಿಯಲ್ಲಿ 9481 ಕುಟುಂಬಗಳಿಗೆ 2.96 ಕೋಟಿ ರೂಗಳನ್ನು ನೇರವಾಗಿ ಜಮಾ ಮಾಡಿದ್ದೇವೆ. ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಈ ವರ್ಷ ಏಪ್ರಿಲ್ ನಿಂದ ಈಚೆಗೆ 4,58506 ಮಂದಿಗೆ ತಲುಪಿಸಿದ್ದೇವೆ. ಜೊತೆಗೆ ಜೀವ ಉಳಿಸುವ ಸಾಧನಗಳಾದ 400 ಆಮ್ಲಜನಕ ಸಿಲಿಂಡರ್ ಗಳು, 100 ಆಮ್ಲಜನಕ ಸಾಂದ್ರಕಗಳು, 1700 ಡಿಜಿಟಲ್ ಥರ್ಮಾಮೀಟರ್ ಗಳು, 900 ಆಕ್ಸಿಮೀಟರ್ ಗಳು, 18,000 ಕೋವಿಡ್ ಟೆಸ್ಟಿಂಗ್ ಕಿಟ್ ಗಳು, 25,500 ಸಮುದಾಯ ಸುರಕ್ಷಾ ಕಿಟ್ಗಳು ಮತ್ತು 15,000 PPE ಕಿಟ್ಗಳನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಫ್ರಂಟ್ ಲೈನ್ ವಾರಿಯರ್ಸ್ ಆದ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿದ್ದೇವೆ ಎಂದು ಕಂಪನಿ ಸಿಇಒ ಅಮಿತಾಬ್ ಬೆಹರ್ ಮಾಹಿತಿ ನೀಡಿದರು.
ಇಂದು ತುಮಕೂರಿನಲ್ಲಿ ಆಮ್ಲಜನಕ ಘಟಕ ಉದ್ಘಾಟನೆಯಾಗಲಿದ್ದು, ಡಾ.ಜಿ.ಪರಮೇಶ್ವರ್ ಉದ್ಘಾಟನೆ ಮಾಡಲಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಪಾಟೀಲ್ ಯಲಗೌಡ ಶಿವನಗೌಡ ಅಮತ್ತು ಆಕ್ಸ್ಫಾಮ್ ಇಂಡಿಯಾದ ನಿರ್ದೇಶಕ ಪಂಕಜ್ ಆನಂದ್ ಉಪಸ್ಥಿತರಿರುವರು.