ತುಮಕೂರು ಮಾಜಿ ಮೇಯರ್ ಗಡ್ಡರವಿ ಹಂತಕರು ಪೊಲೀಸರಿಗೆ ಶರಣು
ತುಮಕೂರು, ಅಕ್ಟೋಬರ್ 2: ರೌಡಿ ಶೀಟರ್ ಹಾಗೂ ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ಪೊಲೀಸರಿಗೆ ಶರಣಾಗಿದ್ದಾನೆ. ಆತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆತನ ಜತೆಗೆ ಸಹಚರ ರಘು ಕೂಡ ಪೊಲೀಸರಿಗೆ ಶರಣಾಗಿದ್ದಾನೆ. ಗಡ್ಡರವಿ ಹತ್ಯೆ ಪ್ರಕರಣದಲ್ಲಿ ಸುಜಯ್ ಭಾರ್ಗವ್ ಹೆಸರು ಮುಂಚೂಣಿಯಲ್ಲಿತ್ತು. ಸುಜಯ್ ಹಾಗೂ ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸುಜಯ್ ಭಾರ್ಗವ್ ನನ್ನು ಪೊಲೀಸರು ಎನ್ ಕೌಂಟರ್ ಮಾಡುತ್ತಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು.
ತುಮಕೂರು : ರೌಡಿ ಶೀಟರ್, ಮಾಜಿ ಮೇಯರ್ ಬೆಳ್ಳಂಬೆಳಗ್ಗೆ ಹತ್ಯೆ
ಮುಖ್ಯವಾಗಿ ಈ ಹತ್ಯೆ ಪ್ರಕರಣದಲ್ಲಿ ರಾಜಕಾರಣಿಗಳ ಒತ್ತಡವಿದ್ದು, ಆ ಕಾರಣಕ್ಕಾಗಿಯೇ ಹಂತಕರನ್ನು ಎನ್ ಕೌಂಟರ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಇದೇ ಕಾರಣಕ್ಕೆ ಸುಜಯ್ ಹಾಗೂ ಆತನ ಸಹಚರರು ಪ್ರಾಣಭೀತಿಯಿಂದ ತಲೆ ಮರೆಸಿಕೊಂಡಿದ್ದರು.
ರವಿ ಹತ್ಯೆ ಪ್ರಕರಣದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವಿಶೇಷ ತನಿಖಾ ತಂಡವು ಹಂತಕರಿಗಾಗಿ ಶೋಧ ಕಾರ್ಯ ನಡೆಸುತ್ತಿತ್ತು. ಸೋಮವಾರದಂದು ಜಿಲ್ಲಾ ಕೋರ್ಟ್ ಗೆ ಹಂತಕರು ಶರಣಾಗುತ್ತಾರೆ ಎಂದು ಪೊಲೀಸರು ಕಾದಿದ್ದರು. ಮಂಗಳವಾರದಂದು ಸಹಚರ ರಘು ಜೊತೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಜಯ್ ಶರಣಾಗಿದ್ದಾನೆ ಎಂಬ ಮಾಹಿತಿ ಇದೆ.
ತುಮಕೂರು ಮಾಜಿ ಮೇಯರ್ ರವಿ ಕುಮಾರ್ ಹತ್ಯೆ ನಡೆದಿದ್ದು ಹೇಗೆ?
ತುಮಕೂರು ನಗರದ ಬಟವಾಡಿ ಸೇತುವೆ ಬಳಿ ಸೆಪ್ಟೆಂಬರ್ 30ರಂದು ಭಾನುವಾರ ಬೆಳಗ್ಗೆ ಮಾಜಿ ಮೇಯರ್ ಗಡ್ಡರವಿ ಹತ್ಯೆಯಾಗಿತ್ತು.
ಮಾಜಿ ಮೇಯರ್ -ಜೆಡಿಎಸ್ ಮುಖಂಡ ರವಿಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಯ್ ಭಾರ್ಗವ್, ರಘು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಅಲ್ಲಿಗೆ ನಮ್ಮ ಸಿಬ್ಬಂದಿ ತೆರಳಿದ್ದಾರೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.