ಕೆ.ಎನ್.ರಾಜಣ್ಣಗೆ ಶಾಕ್, ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್
ತುಮಕೂರು, ಜುಲೈ 21 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದ ಕೆ. ಎನ್. ರಾಜಣ್ಣಗೆ ಶಾಕ್ ನೀಡಲಾಗಿದೆ. ತುರ್ತು ಆದೇಶದ ಅನ್ವಯ ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲಾಗಿದೆ.
ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ. ಎನ್. ರಾಜಣ್ಣ ಅಧ್ಯಕ್ಷರಾಗಿದ್ದ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಸೂಪರ್ ಸೀಡ್ ಮಾಡಲಾಗಿದೆ. ಶನಿವಾರ ರಾತ್ರಿ 8.30ಕ್ಕೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ದೇವೇಗೌಡರು ಆಕಾಶದಿಂದ ಇಳಿದು ಬಂದವರಾ?: ಮಾಜಿ ಶಾಸಕ ಪ್ರಶ್ನೆ
ಸೂಪರ್ ಸೀಡ್ ಆದೇಶ ಹೊರಬೀಳುತ್ತಿದ್ದಂತೆ ಡಿಸಿಸಿ ಬ್ಯಾಂಕ್ಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಡಿಸಿಸಿ ಬ್ಯಾಂಕ್ ಪ್ರಭಾರ ಎಂಡಿ ಕುಬೇರ ನಾಯ್ಕ್ ಜಿಲ್ಲಾಧಿಕಾರಿಗಳಿಗೆ ಅಧಿಕಾರವಹಿಸಿಕೊಟ್ಟರು.
ರೇವಣ್ಣ ಅಲ್ಲ 'ರಾವಣ' ಅಂತ ಹೆಸರಿಡಬೇಕಿತ್ತು: ರಾಜಣ್ಣ
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೆ. ಎನ್. ರಾಜಣ್ಣ ವಿರುದ್ಧ ರಾಜಕೀಯ ಸೇಡು ತೀರಿಸಿಕೊಂಡರೇ? ಎಂಬ ಚರ್ಚೆಗಳು ಆರಂಭವಾಗಿದೆ. ಮೈತ್ರಿ ಸರ್ಕಾರ ಮತ್ತು ದೇವೇಗೌಡರ ಕುಟುಂಬದ ವಿರುದ್ಧ ಹಲವು ಬಾರಿ ರಾಜಣ್ಣ ಅಸಮಾಧಾನ ಹೊರಹಾಕಿದ್ದರು.
ಮೈತ್ರಿ ಸರಕಾರ ಬೀಳುತ್ತದೆ ಎಂದ ಸಿದ್ದು ಆಪ್ತ, ಮಧುಗಿರಿ ಮಾಜಿ ಶಾಸಕ ರಾಜಣ್ಣ
ದೇವೇಗೌಡರ ಸೋಲು
2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಮುದ್ದ ಹುನುಮೇಗೌಡರಿಗೆ ಟಿಕೆಟ್ ನಿರಾಕರಿಸಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಕೆ. ಎನ್. ರಾಜಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಎಚ್. ಡಿ. ದೇವೇಗೌಡರು ಚುನಾವಣಾ ಕಣಕ್ಕಿಳಿದ ಬಳಿಕ ಅವರ ಅಸಮಾಧಾನ ಇನ್ನೂ ಹೆಚ್ಚಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ದೇವೇಗೌಡರ ವಿರುದ್ಧ ಕಣಕ್ಕಿಳಿದ ರಾಜಣ್ಣ ಕಾಂಗ್ರೆಸ್ ವರಿಷ್ಠರ ಸಂಧಾನದ ಬಳಿಕ ನಾಮಪತ್ರ ವಾಪಸ್ ಪಡೆದಿದ್ದರು. ಚುನಾವಣೆಯಲ್ಲಿ ದೇವೇಗೌಡರು ಬಿಜೆಪಿಯ ಜಿ. ಎಸ್. ಬಸವರಾಜು ವಿರುದ್ಧ ಸೋತಿದ್ದರು.
ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ
ಕೆ. ಎನ್. ರಾಜಣ್ಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ವಿರೋಧಿಸಿದ್ದರು. ದೇವೇಗೌಡರ ಕುಟುಂಬ ಸದಸ್ಯರ ವಿರುದ್ಧ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಜುಲೈ 14ರಂದು, 'ಅವರಪ್ಪ ರೇವಣ್ಣ ಅವರಿಗೆ ರೇವಣ್ಣ ಅಂತ ಏಕೆ ಹೆಸರಿಟ್ಟರೋ?, ರಾವಣ ಅಂತ ಇಡಬೇಕಿತ್ತು" ಎಂದು ಲೋಕೋಪಯೋಗಿ ಸಚಿವ ರೇವಣ್ಣ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಆಕಾಶದಿಂದ ಇಳಿದು ಬಂದರಾ?
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಚ್. ಡಿ. ದೇವೇಗೌಡ ಸೋತ ಬಳಿಕ ಕೆ. ಎನ್. ರಾಜಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. "ದೇವೇಗೌಡರು ಏನು ಆಕಾಶದಿಂದ ಇಳಿದು ಬಂದವರಾ?. ಅವರೇನು ಈ ಹಿಂದೆ ಸೋತೇ ಇಲ್ಲವಾ?. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತಿದ್ದರಲ್ಲ. ಆಗೇನು ಅವರು ರಾಜಕೀಯದಿಂದ ದೂವಿದ್ದು ಮನೆಯಲ್ಲಿ ಸುಮ್ಮನೆ ಕುಳಿತಿದ್ದರೆ?" ಎಂದು ಪ್ರಶ್ನಿಸಿದ್ದರು.
ಝಿರೋ ಟ್ರಾಫಿಕ್ ಎಂದು ವ್ಯಂಗ್ಯವಾಡಿದ್ದರು
"ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಲಿಗೆ ಝಿರೋ ಟ್ರಾಫಿಕ್ ಕಾರಣ. ಇನ್ನೊಂದು ವಾರದಲ್ಲಿ ಝಿರೋ ಟ್ರಾಫಿಕ್ ಕೆಳಕ್ಕೆ ಇಳಿಯಲಿದೆ" ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ರಾಜಣ್ಣ ವ್ಯಂಗ್ಯವಾಡಿದ್ದರು.