ತುಮಕೂರಿನಲ್ಲಿ ಇನ್ನೂ ಆರಿಲ್ಲ ದೇವೇಗೌಡರ ಮೇಲಿನ ಅಸಮಾಧಾನ?
ತುಮಕೂರು, ಏಪ್ರಿಲ್ 08: ತುಮಕೂರಿನಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಎಲ್ಲವೂ ಸರಿಹೋಯಿತು ಎಂದುಕೊಳ್ಳುವಾಗಲೆ ಇಂದು ಮತ್ತೆ ಬಂಡಾಯದ ದನಿ ಕೇಳಿಬಂದಿದೆ.
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ದೇವೇಗೌಡ ಅವರ ವಿರುದ್ಧ ಮಾತನಾಡಿದ್ದು, ದೇವೇಗೌಡ ಅವರು ರಾಜಕೀಯವಾಗಿ ಮುದ್ದಹನುಮೇಗೌಡ ಅವರನ್ನು ಸಾಯಿಸಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂದು ನಗರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ತುಮಕೂರಿಗೆ ಏಕೆ ಬಂದರು, ಹಾಸನ ಇರಲಿಲ್ಲವಾ? ತುಮಕೂರಿಗೆ ಬಂದು ಇಲ್ಲಿನ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?
'ಮುದ್ದಹನುಮೇಗೌಡ ಅವರಿಗೆ ಮೋಸ ಆಗಿದೆ, ಎಲ್ಲಾರಿಗೂ ಟಿಕೆಟ್ ದೊರಕುತ್ತದೆ ಆದರೆ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವುದಿಲ್ಲ ಏನಾದರೂ ಕೇಳಿದರೆ ಮೈತ್ರಿ ಧರ್ಮ ಎನ್ನುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಹೇಮಾವತಿ ನದಿ ನೀರಿಗೆ ದೇವೇಗೌಡ ಅಡ್ಡಿ'
ಹೇಮಾವತಿ ನದಿ ನೀರಿನ ವಿಷಯವನ್ನೂ ಪ್ರಸ್ತಾಪಿಸಿದ ಕೆ.ಎನ್.ರಾಜಣ್ಣ ಅವರು, ದೇಶವನ್ನು ಉದ್ಧಾರ ಮಾಡಿದ್ದೀನಿ ಎಂದು ಭಾಷಣ ಮಾಡುವ ದೇವೇಗೌಡ ಅವರು, ತುಮಕೂರಿಗೆ ಹೇಮಾವತಿ ನದಿ ನೀರು ಬಿಡಲಿಲ್ಲ ಎಂದು ಕಿಡಿಕಾರಿದರು.
ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ, ದೇವೇಗೌಡರ ಹಾದಿ ಸುಗಮ
ಪರಮೇಶ್ವರ್ ವಿರುದ್ಧವೂ ಪರೋಕ್ಷ ವಾಗ್ದಾಳಿ
ಡಿಸಿಎಂ ಪರಮೇಶ್ವರ್ ಅವರ ವಿರುದ್ಧವೂ ಪರೋಕ್ಷವಾಗಿ ಮಾತನಾಡಿದ ರಾಜಣ್ಣ, ವೈಯಕ್ತಿಕ ಸಮಸ್ಯೆಗಳಿಂದ ಕುಗ್ಗಿದ್ದ ಪರಮೇಶ್ವರ್ ಅವರ ಬೆಂಬಲಕ್ಕೆ ನಾನು ನಿಂತಿದ್ದೆ, ನಾನೂ ಸೋತರು ಪರವಾಗಿಲ್ಲವೆಂದು ಅವರ ಪರಕೆಲಸ ಮಾಡಿ ಅವರನ್ನು ಗೆಲ್ಲಿಸಿಕೊಂಡು ಬಂದೆ, ಅವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ ಎಂದು ನಾನು ನಂಬಿಕೊಂಡಿದ್ದೆ ಎಂದು ರಾಜಣ್ಣ ಹೇಳಿದ್ದಾರೆ.
ಕೊನೆಗೆ ದೇವೇಗೌಡರಿಗೆ ಮತ ಹಾಕಿ ಎಂದರು ರಾಜಣ್ಣ
ಇಷ್ಟೆಲ್ಲಾ ಮಾತನಾಡಿದರೂ ಸಹ ಕೆ.ಎನ್.ರಾಜಣ್ಣ ಅವರು ಭಾಷಣದ ಕೊನೆಯಲ್ಲಿ ದೇವೇಗೌಡ ಅವರಿಗೆ ಮತ ಹಾಕಿ ಎಂದೇ ಕೇಳಿಕೊಂಡಿದ್ದಾರೆ. 'ನಾನು ಹೈಕಮಾಂಡ್ ಅಲ್ಲ, ನೀವೇ ನನ್ನ ಹೈಕಮಾಂಡ್, ಹಿರಿಯರ ಆದೇಶದಂತೆ ಮೈತ್ರಿ ಅಭ್ಯರ್ಥಿಗೆ ಮತಹಾಕಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯವೂ ಹೌದು ಎಂದು ರಾಜಣ್ಣ ಹೇಳಿದ್ದಾರೆ.
ಕೆ.ಎನ್.ರಾಜಣ್ಣ ನಾಮಪತ್ರ ಸಲ್ಲಿಸಿ ವಾಪಸ್ ಪಡೆದರು
ತುಮಕೂರಿನ ಹಾಲಿ ಸಂಸದ ಕಾಂಗ್ರೆಸ್ನ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನಿರಾಕರಿಸಿದಾಗ ರಾಜಣ್ಣ ಅವರ ಬೆಂಬಲಕ್ಕೆ ನಿಂತಿದ್ದರು, ಅಲ್ಲದೆ ಅವರೂ ಸಹ ನಾಮಪತ್ರ ಸಲ್ಲಿಸಿದ್ದರು, ಸಂಧಾನದ ಬಳಿಕ ಅವರು ನಾಮಪತ್ರ ವಾಪಸ್ ಪಡೆದರು.
ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು
ತುಮಕೂರಿನಲ್ಲಿ ದೇವೇಗೌಡ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಟಿಕೆಟ್ ವಂಚಿತ ಮುದ್ದಹನುಮೇಗೌಡ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು, ಆದರೆ ಸಂಧಾನದ ಬಳಿಕ ನಾಮಪತ್ರ ವಾಪಸ್ ಪಡೆದರು. ತುಮಕೂರಿನಲ್ಲಿ ಎಲ್ಲವೂ ಸರಿ ಹೋಯಿತು ಎಂದುಕೊಳ್ಳಲಾಗಿತ್ತು, ಆದರೆ ರಾಜಣ್ಣ ಅವರ ಇಂದು ಮತ್ತೆ ಅಸಮಾಧಾನವನ್ನು ಹೊರಹಾಕಿದ್ದಾರೆ.