ಇದಪ್ಪಾ ಸುದ್ದಿ: ಕರ್ನಾಟಕದಲ್ಲಿ ಡೀಸೆಲ್ ಕಳ್ಳತನಕ್ಕಾಗಿ KSRTC ಬಸ್ ಕದ್ದ ಖರೀಮರು!
ತುಮಕೂರು, ಅಕ್ಟೋಬರ್ 21: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿನಿತ್ಯ ಸಾರ್ವಜನಿಕರ ಕೈಗೆಟುಕದ ರೀತಿಯಲ್ಲಿ ಏರಿಕೆಯಾಗುತ್ತಿದೆ. ಡೀಸೆಲ್ ದರ ಏರಿಕೆಗೆ ಬೇಸತ್ತ ಕಳ್ಳರು ಮಾಡಿರುವ ಐನಾತಿ ಕೆಲಸ ಎಲ್ಲರೂ ಒಂದು ಕ್ಷಣ ಹುಬ್ಬೇರಿಸುವಂತೆ ಮಾಡಿದೆ.
ಡೀಸೆಲ್ ಕದಿಯುವುದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನೇ ಕದ್ದುಕೊಂಡು ಹೋಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮೊದಲು KSRTC ಬಸ್ ಕದ್ದುಕೊಂಡು ಹೋದ ಖರೀಮರು ತದನಂತರದಲ್ಲಿ ಡೀಸಲ್ ತೆಗೆದುಕೊಂಡು ಬಸ್ ಅನ್ನು 30 ಕಿಲೋ ಮೀಟರ್ ದೂರದಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಅ.21: ಮತ್ತೆ ಏರಿಕೆ ಕಂಡ ಇಂಧನ ದರ; ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 110 ರೂ.!
ಕಳೆದ ಭಾನುವಾರ ರಾತ್ರಿ 9.40 ರ ಸುಮಾರಿಗೆ ಬಸ್ ನಿಲ್ಲಿಸಿದ (ಕೆಎ -06 ಎಫ್ -0888) ಚಾಲಕ ಹನುಮಂತರಾಯ ಕೆಎಸ್ಆರ್ಟಿಸಿ ನಿಲಯದಲ್ಲಿ ವಿಶ್ರಾಂತಿಗೆ ತೆರಳಿದ್ದಾರೆ. ಮರುದಿನ ಅಂದರೆ ಸೋಮವಾರ ಮುಂಜಾನೆ ಗುಬ್ಬಿ ಬಸ್ ನಿಲ್ದಾಣದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ ಕಳ್ಳತನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಕಾರಿ ಬಸ್ ಕದ್ದುಕೊಂಡು ಹೋದ ಖದೀಮರು
ಭಾನುವಾರ ಪ್ರಯಾಣ ಮಾಡಿದ ಚಾಲಕ ಹನುಮಂತರಾಯ ಅಂದು ರಾತ್ರಿ ವಿಶ್ರಾಂತ ತೆಗೆದುಕೊಂಡು ಸೋಮವಾರ ಬೆಳಗ್ಗೆ 6 ಗಂಟೆಗೆ ಗುಬ್ಬಿ ಬಸ್ ನಿಲ್ದಾಣಕ್ಕೆ ಬಂದು ನೋಡಿದ್ದಾರೆ. ಆದರೆ ರಾತ್ರಿ ನಿಲ್ಲಿಸಿದ್ದ ಬಸ್ ಬೆಳಗಾಗುವಷ್ಟರಲ್ಲೇ ಕಳ್ಳತನವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
30 ಕಿ.ಮೀ ದೂರದಲ್ಲಿ ಬಸ್ ಪತ್ತೆ, ಡೀಸೆಲ್ ನಾಪತ್ತೆ!
ಸಾಮಾನ್ಯವಾಗಿ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಜನರಲ್ ಪ್ಯಾಕೆಟ್ ರೇಡಿಯೋ ಸರ್ವೀಸ್ (ಜಿಪಿಆರ್ಎಸ್) ವ್ಯವಸ್ಥೆ ಅಳವಡಿಸಲಾಗಿರುತ್ತದೆ. ಪೊಲೀಸರು ಟ್ರ್ಯಾಕಿಂಗ್ ವಿಧಾನವನ್ನು ಬಳಸಿಕೊಂಡ ಸಂದರ್ಭದಲ್ಲಿ ಗುಬ್ಬಿ ಬಸ್ ನಿಲ್ದಾಣದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಜನೇನಹಳ್ಳಿಯಲ್ಲಿ ಬಸ್ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಸ್ ಏನೋ ಪತ್ತೆಯಾಗಿದೆ, ಆದರೆ ಬಸ್ಸಿನಲ್ಲಿದ್ದ ಡೀಸೆಲ್ ಅನ್ನು ಖದೀಮರು ಎಗರಿಸಿಕೊಂಡು ಹೋಗಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಇಂಧನ ಕಳ್ಳತನ ಪ್ರಕರಣಗಳ ಸಂಖ್ಯೆ ಏರಿಕೆ
ತುಮಕೂರಿನಂತಹ ನಗರಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ವಸತಿ ಸಂಕೀರ್ಣಗಳಲ್ಲಿ ವಾಸವಿರುವ ಜನರು ತಮ್ಮ ಪಾರ್ಕಿಂಗ್ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಈ ಮೊದಲು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ದೊಡ್ಡ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದವು. ಆದರೆ ರಾಜ್ಯದಲ್ಲಿ ಡೀಸೆಲ್ ಬೆಲೆ 100 ರೂಪಾಯಿ ಮತ್ತು ಪೆಟ್ರೋಲ್ ಬೆಲೆ 110 ರೂಪಾಯಿ ಗಡಿ ದಾಟಿದ ಬೆನ್ನಲ್ಲೇ ಸಣ್ಣ ನಗರಗಳಲ್ಲೂ ಇದೀಗ ಇಂಧನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರದ ದರ ಏರಿಕೆಯ ಬಳಿಕ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗಿದೆ. ಲೀಟರ್ ಪೆಟ್ರೋಲ್ ದರ 110.25 ರೂಪಾಯಿಗೆ ಏರಿಕೆ ಆಗಿದ್ದರೆ, ಲೀಟರ್ ಡೀಸೆಲ್ ದರ 101.07 ರೂಪಾಯಿ ಆಗಿದೆ. ನಿರಂತರವಾಗಿ ಏರಿಕೆ ಕಾಣುತ್ತಿರುವ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಇಂಧನ ದರ ಕಂಡು ವಾಹನ ಸವಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೈಪ್ ಲೈನ್ ರಂಧ್ರ ಕೊರೆತು ಡೀಸೆಲ್ ಕಳ್ಳತನ
ಕಳೆದ ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಪೊಲೀಸರು ಖತರ್ನಾಕ್ ಐಡಿಯಾದ ಮೂಲಕ ಡೀಸೆಲ್ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ನಿಂದ ಡೀಸೆಲ್ ಕದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದರು. ಮುಖ್ಯ ಪೈಪ್ಲೈನ್ನಲ್ಲಿ ರಂಧ್ರವನ್ನು ಸರಿಸಿ ಡೀಸೆಲ್ ಕದಿಯುತ್ತಿರುವುದು ಕಂಡುಬಂದಿದ್ದು, ತಂಡದ ಆರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.