ಇಂದು ಶ್ರೀ ಸಿದ್ಧಲಿಂಗಸ್ವಾಮಿಗಳ ಜನ್ಮದಿನ-ಗುರುವಂದನೆ
ತುಮಕೂರು, ಜುಲೈ 22: ಹಲವು ದಶಕಗಳ ಹಿಂದೆ, ಅದೊಂದು ದಿನ ಶ್ರೀ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಇವತ್ತು "ಬುದ್ದೇರು (ಶ್ರೀ ಶ್ರೀ ಶ್ರೀ ಶಿವಕುಮಾರ ಮಾಹಾಸ್ವಾಮಿಗಳು) ಹುಟ್ಟಿದ ದಿನವಂತೆ, ಹೋಗಿ ನಮಸ್ಕಾರ ಮಾಡಿ ಬರೋಣ" ಎಂದು ಮಾತನಾಡಿಕೊಂಡದ್ದು, ಅಲ್ಲಿಯೇ ಮಠದಲ್ಲಿದ್ದ ಕೆಲವು ಹಿರಿಯರ ಕಿವಿಗೆ ಬಿದ್ದು ಅರೆ, ಮಕ್ಕಳಿಗೆ ಶ್ರೀಗಳ ಜನ್ಮದಿನವನ್ನು ಆಚರಣೆ ಮಾಡುವ ಆಸೆಯಿದೆ ಎಂದು ಅರಿತು ಗುರುಗಳ ಕಚೇರಿಯ ಮುಂದೆ ಜಮಾಯಿಸಿದ್ದ ಹುಡುಗರನ್ನು ಶ್ರೀಗಳ ಆಶೀರ್ವಾದ ಪಡೆದು ಹೋಗಿ ಎಂದು ಒಳಗೆ ಕಳುಹಿಸಿ ಎಲ್ಲರಿಗೂ ಕಡ್ಲೆ ಸಕ್ಕರೆ ಹಂಚಿದ್ದರು.
ಹಾಗೆ ಮಕ್ಕಳ ಮನದಲ್ಲಿ ಮೊಳೆತ ಗುರುಗಳ ಜನ್ಮದಿನದ ಸಂಭ್ರಮ ಮುಂದೆ 'ಗುರುವಂದನೆ' ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಪ್ರಕೃತಿಯಲ್ಲಿ ಗಿಡ, ಮರ, ಬಳ್ಳಿ ಬೆಳೆದಂತೆ ಗುರುವಂದನೆಯ ಕಲ್ಪನೆಯೂ ಜನರ ನಡುವೆಯೇ ಬೆಳೆದು ಹೆಮ್ಮರವಾಗಿ ಶ್ರೀ ಮಠದ ಪರಂಪರೆಯಲ್ಲಿ ದೊಡ್ಡ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದ್ದು ಇತಿಹಾಸ. ಪರಮಪೂಜ್ಯರು ಹೀಗೆ ಮಕ್ಕಳ ಹಾಗೂ ಸಮೂಹ ಪ್ರೀತಿಯನ್ನು ಅಭಿಮಾನದಿಂದ ಸ್ವೀಕರಿಸುತ್ತಿದ್ದರು.
ಇಂದು ಶ್ರೀ ಸಿದ್ಧಲಿಂಗ ಸ್ವಾಮಿಗಳ ಜನ್ಮದಿನ. ಕೊರೊನಾ ವೈರಸ್ ಸಾಂಕ್ರಾಮಿಕ ಸಂಕಷ್ಟದ ಈ ದಿನಗಳಲ್ಲಿ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ. ಹಾಗಾಗಿ ಶ್ರೀ ಮಠದ ಭಕ್ತರು, ಗುರುಪರಂಪರೆಗಳ ಬಗ್ಗೆ ಅಭಿಮಾನ ಗೌರವ ಉಳ್ಳವರು ತಮ್ಮ ಮನೆಗಳಿಂದಲೇ ಶ್ರೀ ಸಿದ್ಧಗಂಗಾ ಸ್ವಾಮಿಗಳಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತಾರೆ.
ಯಾವುದೇ ಜಾತಿ ಮತ ಪಂಥಗಳ ಬೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುತ್ತಾ ನಿಜ ಬಸವ ತತ್ವವನ್ನು ಜಾರಿಯಲ್ಲಿಟ್ಟುರುವ ಶ್ರೀ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳಿಗೆ ಅವರ ಜನ್ಮದಿನವಾದ ಇಂದು ಮತ್ತೊಮ್ಮೆ ಭಕ್ತಿ ಪೂರ್ವಕ ಪ್ರಣಾಮಗಳು.