ಪಾವಗಡದ ಗುಜ್ಜುನಡು ಪಂಚಾಯಿತಿಯ ಜನತಾ ಕಾಲೋನಿ ಜನರ ಗೋಳಿನ ಕೂಗು!
ತುಮಕೂರು, ಜು1: ಸ್ವಾಮಿ ನಮಗೆ ಚರಂಡಿಗಳಿಲ್ಲ, ವಿಪರೀತ ಸೊಳ್ಳೆಗಳ ಕಾಟ, ವಿದ್ಯುತ್ ಕಂಬಗಳಿಲ್ಲ ಹೀಗೆ ಸಾಲು ಸಾಲು ಕುಂದು ಕೊರತೆಗಳನ್ನು ನೊಂದ ಜನರು ಅಲವತ್ತುಕೊಂಡ ದೃಶ್ಯ ಕಂಡು ಬಂದಿದ್ದು ಪಾವಗಡ ತಾಲ್ಲೂಕಿನ ಗುಜ್ಜುನಡು ಪಂಚಾಯಿತಿ ವ್ಯಾಪ್ತಿಯ ಟಿಎನ್ ಬೆಟ್ಟದ ಜನತಾ ಕಾಲೋನಿಯ ಜನರು.
ಹೌದು, ಸುಮಾರು 180 ಮನೆಗಳಿರುವ ಇಲ್ಲಿ ಅರ್ಧದಷ್ಟು ಕಾಲೋನಿಯ ಭಾಗದಲ್ಲಿ ಚರಂಡಿಗಳಿಲ್ಲದೆ ಮನೆಯ ಬಚ್ಚಲು ಗುಂಡಿ ನೀರು ಸೀದ ಮನೆಗಳ ಮುಂದಿನ ರಸ್ತೆಗಳಿಗೆ ಬಂದು ಕೊಳಚೆಯಾಗಿ ಮಾರ್ಪಡುತ್ತಿದೆ. ಪರಿಣಾಮ ಇಲ್ಲಿನ ಜನರು ಪ್ರತಿದಿನವೂ ದುರ್ವಾಸನೆ, ವಿಪರೀತ ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಂತೂ ಸೊಳ್ಳೆಗಳ ಸಂಗೀತಕ್ಕೆ ಮನೆ ಬಿಟ್ಟು ಹೊರ ಬರಲು ಸಾಧ್ಯವಾಗದೆ ಇರುವ ದೃಶ್ಯ ಸಾಮಾನ್ಯವಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ತುಮಕೂರು-ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆ
ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಲೋನಿ ಜನರ ಆಗ್ರಹ
ಈ ಜನರು ಹೇಳಿ ಕೇಳಿ ಶ್ರೀಮಂತರಲ್ಲ, ದಿನ ಬೆಳಗಾದರೆ ಕೂಲಿ ನಾಲಿ ಮಾಡಲು ಓಡೋ ಜನರು ಒಂದಿಲ್ಲ ಒಂದು ರೀತಿಯ ಮೂಲಭೂತ ಸಮಸ್ಯೆಗಳಿಂದ ಇಲ್ಲಿ ಬಳಲುತ್ತಿದ್ದಾರೆ. ಅದಕ್ಕೆ ಮತ್ತೊಂದು ನಿದರ್ಶನವೆಂದರೆ ಸುಮಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸೊ ವಿದ್ಯುತ್ ಕಂಬಗಳೆ ಇಲ್ಲದೆ ಸುಮಾರು 200 ಮೀಟರ್ ದೂರದಿಂದ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದಾರೆ. ಮನೆಗಳ ಮುಂಭಾಗದಲ್ಲಿ ಹಾದು ಹೋದ ವಿದ್ಯುತ್ ವೈರ್ ಗಳು ಪೂರ್ಣ ಪ್ರಮಾಣದಲ್ಲಿ ನೆಲಕ್ಕೆ ಜಗ್ಗಿ ನಿಂತಿವೆ, ಯಾವಾಗ ವಿದ್ಯುತ್ ವೈರ್ ಕಟ್ ಆಗಿ ಕೆಳಗೆ ಬೀಳುತ್ತದೆಯೋ ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ. ಜೊತೆಗೆ ಹಲವು ಬಾರಿ ವೈರ್ ಕಟ್ ಆಗಿ ಬಿದ್ದಿವೆ ಎಂದು ಮಹಿಳೆಯರು ಗೋಳಿಡ್ತಾರೆ.
ಕಣ್ಮುಚ್ಚಿ ಕುಳಿತಿರುವ ಗುಜ್ಜುನಡು ಪಂಚಾಯಿತಿ ಅಧಿಕಾರಿಗಳು
ಚರಂಡಿ ಮಾಡಿಸಬೇಕು ಇಲ್ಲ ನೀರನ್ನು ಇಂಗಿಸಲು ಬಚ್ಚಲು ಗುಂಡಿ ತೆಗೆಸಿ ಅನುಕೂಲ ಮಾಡಬೇಕಾದ ಗುಜ್ಜುನಡು ಪಂಚಾಯಿತಿ ಅಧಿಕಾರಿಗಳು ಇದ್ದಾರೆಯೋ ಇಲ್ಲ ಕಣ್ಮುಚ್ಚಿ ಕುಳಿತಿದ್ದಾರೆನೋ ಅನ್ನಿಸುತ್ತಿದೆ. ಗುಡಿಸಲು ಮುಕ್ತ ಗ್ರಾಮ ಮಾಡುವ ಸರ್ಕಾರದ ನಿಲುವಿನ ನಡುವೆ ಈ ಕಾಲೋನಿಯ ಕೆಲವರಿಗೆ ನಿವೇಶನಗಳಲ್ಲಿದೆ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.
ಜನರ ನಡುವೆ ವೈಮನಸ್ಸಿನ ವಾತಾವರಣ
ಏನೇ ಇರಲಿ ಟಿ.ಎನ್ ಬೆಟ್ಟದ ಜನತಾ ಕಾಲೋನಿ ಜನರಿಗೆ ಸಮರ್ಪಕವಾಗಿ ನೀರು ಬರ್ತಿಲ್ಲ ಮತ್ತು ರಸ್ತೆಗೆ ಕೊಳಚೆ ನೀರು ಬರ್ತಿವೆ, ವಿದ್ಯುತ್ ಕಂಬಗಳಿಲ್ಲ ಎಂದು ಇಲ್ಲಿನ ಜನರ ನಡುವೆ ವೈಮನಸ್ಸಿನ ವಾತಾವರಣ ಶುರುವಾಗಿದೆ, ಬಚ್ಚಲು ನೀರಿನ ಸಮಸ್ಯೆ ಜನರ ನಡುವಿನ ಜಗಳ ಇನ್ನಷ್ಟು ತಾರಕಕ್ಕೇರುವ ಮುನ್ನ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಗುಜ್ಜುನಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚೆತ್ತು ಇಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಅನಿವಾರ್ಯತೆಯಿದೆ.
Recommended Video