ಪೋಷಕರು, ಅಜ್ಜಿಯ ಸಾವಿನ ಖಿನ್ನತೆ? ಮೂವರು ಸಹೋದರಿಯರು ಸಾವಿಗೆ ಶರಣು
ತುಮಕೂರು, ಜನವರಿ 19: ಪೋಷಕರ ಸಾವಿನಿಂದ ಖಿನ್ನತೆಗೊಳಗಾಗಿದ್ದ ಮೂವರು ಸಹೋದರಿಯರು ಸಾವಿಗೆ ಶರಣಾಗಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ.
ರಂಜಿತಾ(24), ಬಿಂದು(21) ಹಾಗೂ ಚಂದನಾ(18) ಆತ್ಮಹತ್ಯೆ ಮಾಡಿಕೊಂಡ ಸೋದರಿಯರು ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಮೃತದೇಹ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ 9 ದಿನಗಳ ಹಿಂದೆಯೇ ಘಟನೆ ನಡೆದಿದ್ದು, ಕೊಳೆತ ವಾಸನೆ ಬಂದ ಬಳಿಕ ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ.
ಮೋದಿ ಭಾರತದಲ್ಲಿ ಪ್ರತಿದಿನ 115 ದಿನಗೂಲಿಗಳ ಆತ್ಮಹತ್ಯೆ: ಅಂಕಿಅಂಶ ನೀಡಿದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಮೃತ ಮೂವರು ಸಹೋದರಿಯರು ಹಲವು ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ತಂದೆ ತಾಯಿಯನ್ನು ಕಳೆದುಕೊಂಡ ಮೂವರು ಮಕ್ಕಳ ಪಾಲಿಗೆ ಅಜ್ಜಿಯೇ ಆಸರೆಯಾಗಿದ್ದರು. ಪೋಷಕರ ಅಗಲಿಕೆಯ ಬಳಿಕ ಅಜ್ಜಿಯ ಆಶ್ರಯದಲ್ಲೇ ಮೂವರು ಬೆಳೆದಿದ್ದರು. ಆದರೆ ದುರಾದೃಷ್ಟವಶಾತ್ ಜೊತೆಯಾಗಿದ್ದ ಅಜ್ಜಿಯೂ ಇತ್ತೀಚಿಗೆ ಮರಣ ಹೊಂದಿದ್ದರು. ಆಸರೆಯಾಗಿದ್ದ ಅಜ್ಜಿಯನ್ನೂ ಕಳೆದುಕೊಂಡು ಅನಾಥರಾದ ಮೂವರು ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಮಾನಸಿಕ ಖಿನ್ನತೆಯಿಂದಲೇ ಮೂವರು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಸಹೋದರಿಯರ ಪೈಕಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಘಟನಾ ಸ್ಥಳಕ್ಕೆ ಎಎಸ್ಪಿ ಸಿದ್ದಾರ್ಥ್ ಗೋಯೆಲ್, ಸಿಪಿಐ ನಿರ್ಮಲಾ, ಪಿಎಸ್ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.