ಶತ್ರು ಪಾಳಯದಿಂದ ವಾಪಸ್ ಬಂದ ಸೈನಿಕರಿಗೆ ಸಿಗುವ ಸ್ವಾಗತ ಎಂಥದ್ದು?
ಸೈನಿಕ ಚಂದು ಬಾಬುಲಾಲ್ ಚೌಹಾಣ್ ಅವರನ್ನು ಪಾಕ್, ಭಾರತಕ್ಕೆ ಹಸ್ತಾಂತರಿಸಿದೆ. ಶತ್ರುದೇಶದವರ ಕೈಲಿ ಬಂದಿಯಾಗಿ, ಆ ನಂತರ ಬಿಡುಗಡೆಯಾಗಿ ಬರುವ ಇಂಥ ಸೈನಿಕರ ಸ್ಥಿತಿ ಬಗ್ಗೆ ವಿಶ್ಲೇಷಿಸಿದ್ದಾರೆ ಕಿಶೋರ್ ನಾರಾಯಣ್.
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯನ್ನು ಎಚ್ಚರ ತಪ್ಪಿ ದಾಟಿದ್ದ ಭಾರತೀಯ ಸೈನಿಕನೊಬ್ಬನನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಿದೆ. ಹೀಗೆ ಮರಳಿ ಬಂದ ಸೈನಿಕರನ್ನು ಸೈನ್ಯದಲ್ಲಿ ಹೇಗೆ ನೋಡಲಾಗುತ್ತದೆ, ಸಿಗುವ ಸ್ವಾಗತ ಎಂಥದ್ದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ವಿವರ ಇಲ್ಲಿದೆ.
ಕಳೆದ ಸೆಪ್ಟೆಂಬರ್ 29ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಲೆಯೆತ್ತಿ ನಿಂತಿದ್ದ ಉಗ್ರರ ನೆಲೆಗಳ ಮೇಲೆ ಭಾರತ ಹಠಾತ್ತನೆ 'ನಿಖರ ದಾಳಿ' ಮಾಡಿ ಉಗ್ರರನ್ನು ಕೊಲ್ಲುವುದರಲ್ಲಿ ಯಶಸ್ವಿಯಾಗಿತ್ತು. ಇತ್ತ ನವದೆಹಲಿಯಲ್ಲಿ ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ದೇಶದೆಲ್ಲೆಡೆ ವಿಜಯೋತ್ಸವವನ್ನು ಆಚರಿಸಲಾಗುತ್ತಿತ್ತು.[ಸೆರೆಸಿಕ್ಕಿದ್ದ ಭಾರತೀಯ ಯೋಧನನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ]
ಪಾಕಿಸ್ತಾನದಿಂದ ಅದೇ ವೇಳೆಗೆ ಸುದ್ದಿಯೊಂದು ಹೊರಬಿತ್ತು. ಭಾರತದ ಸೈನಿಕನೊಬ್ಬ ನಿಯಂತ್ರಣ ರೇಖೆ ದಾಟಿದಾಗ ಪಾಕ್ ಸೈನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಬಂಧಿಸಲಾಗಿದೆ. ಆ ಕ್ಷಣಕ್ಕೆ ದೇಶದಲ್ಲಿ ಮುಂದೆ ಹೇಗೆ ಏನೋ ಎಂಬ ಆತಂಕ ಸೃಷ್ಟಿಯಾಗಿತ್ತು.
ಸೆಪ್ಟೆಂಬರ್ 29ರಂದು ಸೆರೆ ಸಿಕ್ಕ ನಮ್ಮ ದೇಶದ ಯೋಧನನ್ನು ಪಾಕಿಸ್ತಾನ ಇದೀಗ ಹಸ್ತಾಂತರ ಮಾಡಿದೆ. ಹೌದು, ಆ ಸೈನಿಕನನ್ನು ಈಗ ಅಂದರೆ ಮೂರು-ಮೂರೂವರೆ ತಿಂಗಳ ನಂತರ ಹೇಗೆ ಬರಮಾಡಿಕೊಳ್ಳುತ್ತಾರೆ? ಅದನ್ನೇ ಈ ಲೇಖನದಲ್ಲಿ ವಿವರಿಸಲಾಗಿದೆ.
ಚಂದು ಬಾಬುಲಾಲ್ ಚೌಹಾಣ್
ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲಿಯೇ ಅದೇ ನಿಯಂತ್ರಣ ರೇಖೆ ಪ್ರದೇಶದಲ್ಲಿಯೇ ಅಚಾತುರ್ಯ ನಡೆದಿತ್ತು. ಗಡಿ ಕಾಯಲು ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ವಿಭಾಗದ ಸೈನಿಕ ಚಂದು ಬಾಬುಲಾಲ್ ಚೌಹಾಣ್ ಎಚ್ಚರ ತಪ್ಪಿ ರೇಖೆಯನ್ನು ದಾಟಿಬಿಟ್ಟಿದ್ದರು.
ಕರೆತರುವ ಪ್ರಯತ್ನ
ಭಾರತ ಸರಕಾರ ಇದರ ಬಗ್ಗೆ ಮಾಹಿತಿ ನೀಡಿ, ಆ ಸೈನಿಕನನ್ನು ವಾಪಸ್ ಕರೆತರಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಘೋಷಿಸಿತ್ತು. ಹಿಂದೆಯೂ ಈ ರೀತಿ ಘಟನೆಗಳು ನಡೆದಾಗ ಸೈನಿಕರನ್ನು ಕರೆತರುವಲ್ಲಿ ಯಶಸ್ವಿಯಾಗಿತ್ತು. ಆದರೆ ಆಗಿನ ಪರಿಸ್ಥಿತಿ ಬೇರೆ. ಆಗ ಸರ್ಜಿಕಲ್ ಸ್ಟ್ರೈಕ್ ಥರದ ಯುದ್ಧದ ಛಾಯೆ ಮೂಡಿರಲಿಲ್ಲ.
ಕ್ಯಾಪ್ಟನ್ ಸೌರಭ್ ಕಾಲಿಯಾ
ಯುದ್ಧದ ಕಾಲದಲ್ಲಿ ಸಿಕ್ಕಿ ಬಿದ್ದ ಭಾರತೀಯ ಸೈನಿಕರನ್ನು ಪಾಕಿಸ್ತಾನದವರು ಗೌರವಯುತವಾಗಿ ನೋಡಿಕೊಂಡಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರನ್ನು ಬಂಧಿಸಿ, ಚಿತ್ರ ಹಿಂಸೆ ನೀಡಿ ಕೊಂದು ಅವರ ಪಾರ್ಥಿವ ಶರೀರವನ್ನು ಹಿಂತಿರುಗಿಸಿದ್ದ ಘಟನೆ ಮಾಯದ ಗಾಯದಂಥದ್ದು.
ನಿಖರ ದಾಳಿ
ಉಗ್ರರ ನೆಲೆಗಳ ಮೇಲೆ ಭಾರತ ಸೇನೆ ನಡೆಸಿದ ನಿಖರ ದಾಳಿ ಒಂದು ತೀವ್ರ ಸಂಕಷ್ಟದ ಪರಿಸ್ಥಿತಿಯೇ ಸರಿ. ಇಂತಹ ವಿಪರೀತ ಪರಿಸ್ಥಿತಿಗಳಲ್ಲಿ ಸೈನಿಕನನ್ನು ಯಶಸ್ವಿಯಾಗಿ ಕರೆತಂದದ್ದು ಒಂದು ಸಾಧನೆಯೇ. ಇದಕ್ಕೆ ಭಾರತ ಸರಕಾರವನ್ನು ಅಭಿನಂದಿಸಲೇ ಬೇಕು.
ಮರಳಿ ಬಂದ ಸೈನಿಕರ ಜೊತೆ ಹೇಗೆ ವರ್ತಿಸಲಾಗುತ್ತದೆ?
ಭಾರತ- ಚೀನಾ ಯುದ್ಧದ ಸಮಯದಲ್ಲಿ ಶತ್ರು ದೇಶದವರು ನಮ್ಮ ಸನಿಕರನ್ನು ಬಂಧಿಸಿದ್ದರು. ಯುದ್ಧ ನಿಂತ ಸುಮಾರು 6 ತಿಂಗಳ ಬಳಿಕ ಇವರನ್ನು ವಾಪಸ್ ಕಳಿಸಿತ್ತು ಚೀನಾ. ಕಲ್ಕತ್ತಾದ ಡಮ್ ಡಮ್ ವಿಮಾನ ನಿಲ್ದಾಣಕ್ಕೆ ಬಂದ ಈ ಸೈನಿಕರನ್ನು ಚೆನ್ನಾಗಿ ಬರಮಾಡಿಕೊಂಡರೂ ಅಲ್ಲಿ ಆವರಿಸಿದ್ದ ಮೌನ ಬಾಧಿಸತೊಡಗಿತ್ತು. ಅವರೆಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಶತ್ರುವಿನ ಸಿದ್ಧಾಂತಗಳಿಂದ ಪ್ರಭಾವಿತರಾಗಿಲ್ಲ ಎಂದು ಅವರೆಲ್ಲ ಸಾಬೀತು ಪಡಿಸಬೇಕಿತ್ತು. ಭಾರತದ ವಿರುದ್ಧ ತಿರುಗಿಬಿದ್ದು, ತಮ್ಮ ತಾಯ್ನೆಲದ ಮೇಲೆ ಗೂಢಚಾರಿಕೆ ಮಾಡಲು ಬಂದಿಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕಾಯಿತು. ಅಂಥ ಸ್ಥಿತಿಯನ್ನು ಅನುಭವಿಸಿದ ಬ್ರಿಗೇಡಿಯರ್ ಜಾನ್ ಪಿ. ದಳವಿ ಅವರು ತಮ್ಮ ನೋವನ್ನೆಲ್ಲ ಒಳಗೊಂಡಂಥ ವಿವರಗಳನ್ನು 'ಹಿಮಾಲಯನ್ ಬ್ಲಂಡರ್' ಎಂಬ ಪುಸ್ತಕದಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ.
ಬಲವಾದ ಕಾರಣವಿದೆ
ಆದರೆ, ಸರಕಾರದ ಹಾಗೂ ಸೇನೆಯ ಇಂತಹ ವರ್ತನೆಗೆ ಒಂದು ಬಲವಾದ ಕಾರಣವಿದೆ. ನೂರರಲ್ಲಿ ಒಬ್ಬ ಸೈನಿಕ ಹೀಗೆ ಮಾಡಿದರೂ ದೇಶದ ರಹಸ್ಯಗಳು ಸೇರಿದಂತೆ ಎಲ್ಲ ಮಾಹಿತಿ ಬಯಲಾಗುವ ಸಾಧ್ಯತೆಗಳಿರುತ್ತವೆ. ಅಷ್ಟು ಕಾಲ ಅವರನ್ನು ಎಲ್ಲಿ ಬಂಧಿಸಲಾಗಿತ್ತು, ಕಾರಾಗೃಹದಲ್ಲಿರುವಾಗ ಯಾರ್ಯಾರು ನೋಡಲು ಬರುತ್ತಿದ್ದರು ಮುಂತಾದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆಲ್ಲದೆ, ಇಂತಹ ಸೈನಿಕರಿಂದ ದೊರೆಯುವ ಮಾಹಿತಿಯಿಂದ ಮುಂದೆ ಗಡಿಯಲ್ಲಿ ನಿಲ್ಲುವ ಸೈನಿಕರಿಗೆ ಸರಿಯಾದ ತರಬೇತಿಯನ್ನೂ ನೀಡಬಹುದು. ಇದರಿಂದ ಆ ನಂತರ ಸೈನಿಕರ ಜೀವವನ್ನೇ ಉಳಿಸಬಹುದು.
ಇಸ್ರೇಲ್-ಅಮೆರಿಕ ಉತ್ತಮ ಉದಾಹರಣೆ
ಈ ರೀತಿ ಭಾರತವಷ್ಟೇ ಅಲ್ಲ. ಪ್ರಪಂಚದ ಅದೆಷ್ಟೋ ರಾಷ್ಟ್ರಗಳು ಹೀಗೆ ಸೈನಿಕರ ವಿಚಾರಣೆ ಮಾಡುತ್ತವೆ. ಇದಕ್ಕೆ ಇಸ್ರೇಲ್ ಹಾಗೂ ಅಮೆರಿಕ ಉತ್ತಮ ಉದಾಹರಣೆಗಳು. ತಮ್ಮ ಸೈನಿಕರ ಹಾಗೂ ದೇಶದ ಸುರಕ್ಷತೆ ದೃಷ್ಟಿಯಿಂದ ಹೀಗೆ ಮಾಡುವುದು ಅನಿವಾರ್ಯವಾಗುತ್ತದೆ.