ದರ್ಶನ್ ಹೆಸರು ಹೇಳುತ್ತಲೇ ಮುಖ ತಿರುಗಿಸಿ ನಡೆದ ಸುದೀಪ್!
ತುಮಕೂರು, ಮಾರ್ಚ್ 06 : 'ಸಾರ್ ಸರ್ ದರ್ಶನ್...' ಎಂಬ ಮಾತು ಮಾಧ್ಯಮದವರ ನಡುವಿನಿಂದ ತೂರಿಬರುತ್ತಲೇ ನಗುಮೊಗದಿಂದ ಮಾತನಾಡುತ್ತಿದ್ದ ಸುದೀಪ್ ಮುಖ ಸಿಂಡರಿಸಿಕೊಂಡು, ಒಂದೇ ಒಂದು ಮಾತನ್ನೂ ಆಡದೆ ಹೊರಟುಹೋಗಿದ್ದಾರೆ.
ಇದು ನಡೆದಿರುವುದು, ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ, ಸೋಮವಾರ. ಕರ್ನಾಟಕದಾದ್ಯಂತ ಭರ್ಜರಿಯಾಗಿ ದೌಡಾಯಿಸುತ್ತಿರುವ 'ಹೆಬ್ಬುಲಿ' ಚಿತ್ರದ ಯಶಸ್ಸಿಗಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಕಿಚ್ಚ ಸುದೀಪ್ ಬಂದಿದ್ದರು.
ಸ್ವಮೇಕ್ ಚಿತ್ರ 'ಹೆಬ್ಬುಲಿ' ಸರ್ವದಾಖಲೆಗಳನ್ನು ಧೂಳಿಪಟ ಮಾಡುತ್ತಿರುವುದರಿಂದ ಇಡೀ ರಾಜ್ಯದಲ್ಲಿ ಹೆಬ್ಬುಲಿ ಪ್ರದರ್ಶಿತವಾಗುತ್ತಿರುವ ಎಲ್ಲ ಥಿಯೇಟರುಗಳನ್ನು ಭೇಟಿ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ. [ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಇದು ನನ್ನದೇ ಖಾತೆ : ದರ್ಶನ್]
ಅಭಿನಯ ಚಕ್ರವರ್ತಿ ಎಂಬ ಬಿರುದಾಂಕಿತ 'ಕಿಚ್ಚ' ಸುದೀಪ್ ಅವರು ತುಮಕೂರಿನಿಂದಲೇ ತಮ್ಮ ಧನ್ಯವಾದದ ಅಭಿಯಾನವನ್ನು ಶುರುಮಾಡಿದ್ದು. ಅಲ್ಲಿಂದ ಇಡೀ ರಾಜ್ಯವನ್ನು ಅವರು ಸುತ್ತಲಿದ್ದಾರೆ.
ಅವರು ಎಲ್ಲೇ ಹೋಗಲಿ, ಎಷ್ಟೇ ಮಾತನಾಡಲಿ, ಕಡೆಗೆ 'ದರ್ಶನ್' ಕುರಿತ ಮಾತು ಮಾಧ್ಯಮದವರಿಂದ ಬಂದೇ ಬರುತ್ತದೆ. ಅವರು ಎಷ್ಟೇ ನುಣುಚಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಹಳಸಿ ಚಿತ್ರಾನ್ನವಾಗಿ ಹೋಗಿರುವ ಅವರ ಸ್ನೇಹದ ಬಗ್ಗೆ ಮಾತು ಬಂದೇ ಬರುತ್ತದೆ. ಅದಕ್ಕೆ ಅವರು ಒಂದಿಲ್ಲೊಂದು ಹಂತದಲ್ಲಿ ಉತ್ತರ ನೀಡಲೇಬೇಕಾಗುತ್ತದೆ.
ಎಂದೋ ರೆಕಾರ್ಡ್ ಮಾಡಿದ್ದ ಸುದೀಪ್ ಅವರ ವಿಡಿಯೋ, ಅದರಲ್ಲಿ ದರ್ಶನ್ ಅವರ ಪ್ರಸ್ತಾಪ, ಅದಕ್ಕೆ ದರ್ಶನ್ ಅವರು ಟ್ವೀಟ್ ಮಾಡಿ, ಇನ್ನು ನನ್ನ ಸುದೀಪ್ ಅವರ ದೋಸ್ತಿ ಖತಂ ಅಂತ ಹೇಳಿದ್ದು, ಅದಕ್ಕೆ ಸುದೀಪ್ ಮೌನವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಭಾರೀ ಕೋಲಾಹಲ ಸಷ್ಟಿಸುತ್ತಿದೆ.
ಕೆಲವರು, ಇವರಿಬ್ಬರ ಕುಚ್ಚಿಕ್ಕು ಗೆಳೆತನವನ್ನು ಬೆಸೆಯಲು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಧ್ಯ ಪ್ರವೇಶಿಸಬೇಕೆಂದು ಆಶಿಸುತ್ತಿದ್ದಾರೆ. ಅಲ್ಲ, ಅಂಬಿ ಮತ್ತು ಶಿವಣ್ಣ ಯಾಕೆ ಪ್ರವೇಶಿಸಬೇಕು ಎಂಬುದು ಕೆಲ ಪ್ರಜ್ಞಾವಂತರ ಅನಿಸಿಕೆ.
ಅಂಬರೀಶ್ ಮತ್ತು ಶಿವಣ್ಣ ಮಧ್ಯ ಪ್ರವೇಶಿಸಲು ಇದು ಗಂಡ ಹೆಂಡತಿ ಜಗಳವಲ್ಲ. ಈ ಜಗಳವನ್ನು ಕಿಚ್ಚ ಮತ್ತು ಡಚ್ಚು ಅವರೇ ಬಗೆಹರಿಸಿಕೊಳ್ಳಬೇಕು, ಇಲ್ಲದಿದ್ದರೆ ಇಬ್ಬರೂ ತಮಗಿಷ್ಟ ಬಂದಹಾಗಿ ಜೀವಿಸಬೇಕು. ಗೆಳೆತನ ಮಾಡುವುದು ಬಿಡುವುದು ಅವರಿಷ್ಟ, ಅಲ್ಲವೆ?