ಹಳೆ ವೈಷಮ್ಯ ಹಿನ್ನೆಲೆ, ಯೋಧನ ಮೇಲೆ ಹಲ್ಲೆ
ರಜಾದಿನಗಳನ್ನು ಕಳೆಯಲು ಬಂದ ಯೋಧನ ಮೇಲೆ ಆತನ ಸ್ವಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಅವರ ಸಂಬಂಧಿಗಳು ಹಲ್ಲೆ ನಡೆಸಿರುವ ವರದಿಯಾಗಿದೆ.
ತುಮಕೂರು, ಜನವರಿ 18: ರಜೆಯ ಮೇಲೆ ಮನೆಗೆ ಬಂದಿದ್ದ ಯೋಧ ಹಾಗೂ ಆತನ ತಾಯಿ ಮೇಲೆ ಅಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಯೋಧ ಪ್ರಕರಣ ದಾಖಲಿಸಿರುವ ಯೋಧ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯೋಧ ಗೋವಿಂದ ರಾಜು ಎಂಬುವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮಕ್ಕೆ ಇತ್ತೀಚೆಗೆ ಆಗಮಿಸಿದ್ದರು. ಕೆಲ ದಿನಗಳಿಂದ ಗ್ರಾಮದಲ್ಲೇ ಕುಟುಂಬದೊಂದಿಗಿದ್ದ ಯೋಧ (23) ಹಾಗೂ ಅವರ ತಾಯಿ ಹನುಮಕ್ಕ (55) ಮೇಲೆ ಅಲ್ಲಿನ ಗ್ರಾಮ ಪಂಚಾಯ್ತಿಯ ಸದಸ್ಯೆಯಾದ ಜಯಲಕ್ಷ್ಮಮ್ಮ, ಪತಿ ರಾಮಕೃಷ್ಣ ಹಾಗೂ ಅಳಿಯಂದಿರಾದ ಸಿದ್ದಗಂಗಯ್ಯ ,ಹರೀಶ್ ಎಂಬುವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಜನವರಿ 15ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಘಟನೆ ಹಿನ್ನೆಲೆ ತಿಳಿದುಬಂದಿಲ್ಲವಾದರೂ, ಎರಡೂ ಕುಟುಂಬಗಳ ನಡುವೆ ಇದ್ದಿರಬಹುದಾದ ಹಳೇ ವೈಷಮ್ಯವೇ ಈ ಹಲ್ಲೆಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಹಲ್ಲೆಗೊಳಗಾದ ಯೋಧ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.