ಜೆಡಿಎಸ್ ಸೇರ್ಪಡೆಯಾದ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ
ಬೆಂಗಳೂರು, ಅ. 24: ಸಾಮಾಜಿಕ ಹೋರಾಟಗಾರ್ತಿ, ದಲಿತಪರ ಧ್ವನಿಯ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಜೆಡಿಎಸ್ ಸೇರಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಸಮ್ಮುಖದಲ್ಲಿ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಅವರು ಜಾತ್ಯತೀತ ಜನತಾ ದಳ ಪಕ್ಷವನ್ನು ಅವರು ಸೇರಿದರು. ನಜ್ಮಾ ನಜೀರ್ ಅವರು ಕಳೆದ ನಾಲ್ಕೈದು ವರ್ಷಗಳಿಂದ ದಮನಿತರ ಧ್ವನಿಯಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ಜೆಡಿಎಸ್ ಸೇರಿದ ಬಳಿಕ ಮಾತನಾಡಿರುವ ಅವರು, ಅಧಿಕೃತವಾಗಿ ನನ್ನ ರಾಜಕೀಯ ಪಯಣವನ್ನು ಜಾತ್ಯತೀತ ಜನತಾ ದಳವನ್ನು ಸೇರುವ ಮೂಲಕ ಆರಂಭಿಸಿದ್ದೇನೆ. ಕರ್ನಾಟಕದ ಹೆಮ್ಮೆ, ಮಣ್ಣಿನ ಮಗ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಅವರ ಸಮ್ಮುಖದಲ್ಲಿ ಜನತಾದಳ (ಜಾತ್ಯಾತೀತ) ಪಕ್ಷವನ್ನು ಸೇರುವ ಮೂಲಕ ಆರಂಭಿಸಿದ್ದೇನೆ.
ಶಿರಾ ಉಪ ಚುನಾವಣೆ; ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ ನಾಯಕರು
ರಾಷ್ಟ್ರೀಯ ಪಕ್ಷಗಳು ದೇಶದ ಬಹುತ್ವ ಸಂಸ್ಕೃತಿಗೆ ಧಕ್ಕೆ ತರುತ್ತಿವೆ. ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ ಅವರ ಪರಿಕಲ್ಪನೆಯ ಒಕ್ಕೂಟ ವ್ಯವಸ್ಥೆ ಗಟ್ಟಿಯಾಗುವುದಕ್ಕೆ ಪ್ರಾದೇಶಿಕ ಪಕ್ಷಗಳು ಬಲಹಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದು ಋಣಾತ್ಮಕ ಅಂಶಗಳನ್ನು ಬದಿಗಿಟ್ಟು ವಿವೇಚಿಸಿದಾಗ ಕಾಂಗ್ರೆಸ್ ಹಾಗೂ ಬಿಜೆಪಿಗಳಿಗಿಂತ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳವು ಕನ್ನಡದ ಅಸ್ಮಿತೆ, ಸ್ವಾಭಿಮಾನ ಮತ್ತು ಜನಪರ ಸಹಿಷ್ಣುತೆಯನ್ನು ಕಾಪಾಡಬಲ್ಲದೆಂಬ ಭರವಸೆ ಇದೆ. ಹೀಗಾಗಿ ನಾನು ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದೇನೆ ಎಂದು ನಜ್ಮಾ ನಜೀರ್ ಚಿಕ್ಕನೇರಳೆ ಅವರು ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎನ್ಸಿಆರ್, ಸಿಐಎ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಜ್ಮಾ ನಜೀರ್ ಅವರು ಮೂಲತಃ ಪಿರಿಯಾಪಟ್ಟಣದವರು.