6 ತಿಂಗಳ ನಂತರ ಯುವಕನ ಅಸ್ಥಿಪಂಜರ ಪತ್ತೆ: ಅದೊಂದು ದುರಂತ ಪ್ರೇಮ ಕಥೆ
ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿಲಾರದಷ್ಟು ಪ್ರೀತಿಸುತ್ತಿದ್ದರು. ಎರಡೂ ಕುಟುಂಬದ ವಿರೋಧದ ನಡುವೆಯೂ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಹುಡುಗ ತನ್ನ ನಿರ್ಧಾರವನ್ನು ಹುಡುಗಿಯ ಮನೆಯವರಿಗೂ ತಿಳಿಸಿದ್ದ. ಆದರೆ, ವಿಧಿಯ ಆಟ ಇನ್ನೊಂದಿತ್ತು.
ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ವ್ಯಾಪ್ತಿಯ ಅರಣ್ಯ ಪ್ರದೇಶವೊಂದರಲ್ಲಿ ಯುವಕನ ಅಸ್ಥಿಪಂಜರ ಪತ್ತೆಯಾಗಿದೆ. ಇದರ ಜಾಡು ಹಿಡಿದು ಹೋದ ಪೊಲೀಸರಿಗೆ ಆರು ತಿಂಗಳ ಹಿಂದಿನ ಕಾಣೆಯಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!
ಜಿಲ್ಲೆಯ ಕುಣಿಗಲ್ ತಾಲೂಕಿನ ಯುವ ಪ್ರೇಮಿಗಳ ಕಥೆ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ಇವರಿಬ್ಬರ ಜೊತೆಗೆ ಹುಡುಗಿಯ ತಾಯಿಯೂ ಮಗಳ ಸಾವಿನ ನೋವನ್ನು ಅರಗಿಸಿಕೊಳ್ಲಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದ್ದು ಜಯಿಸಬೇಕು ಎನ್ನುವುದನ್ನು ಅರಿಯದ ಈ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರು ತಿಂಗಳ ನಂತರ ಸಿಕ್ಕ ಅಸ್ಥಿಪಂಜರದ ಹಿಂದೆ ಹೀಗೊಂದು ದುರಂತ ಪ್ರೇಮಕಥೆಯಿದೆ ಎಂದು ಪೊಲೀಸ್ ಮೂಲಗಳಿಗೆ ತಿಳಿದು ಬಂದಿದೆ. ಮುಂದೆ ಓದಿ..
ಅಸ್ಥಿಪಂಜರ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ
ಆರು ತಿಂಗಳ ಹಿಂದೆ ಸಂತೋಷ್ ಎನ್ನುವ ಯುವಕ ನಾಪತ್ತೆಯಾಗಿದ್ದಾನೆ ಎಂದು ಆತನ ಮನೆಯವರು ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ರಾಜೇಂದ್ರಪುರ ಅರಣ್ಯ ವ್ಯಾಪ್ತಿಯಲ್ಲಿ ಬೈಕ್ ಒಂದು ಪತ್ತೆಯಾಗಿತ್ತು. ಇದು ಕಾಣೆಯಾದ ಯುವಕನದ್ದೇ ಎಂದು ಖಚಿತ ಪಡಿಸಿಕೊಂಡಿದ್ದ ಪೊಲೀಸರಿಗೆ ಯುವಕನ ಸುಳಿವು ಸಿಕ್ಕಿರಲಿಲ್ಲ. ಶುಕ್ರವಾರ (ಮೇ 20) ದನ ಮೇಯಿಸುವವರು ಅಸ್ಥಿಪಂಜರ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು. ಈಗ, ಆ ಅಸ್ಥಿಪಂಜರ ಕಾಣೆಯಾಗಿದ್ದ ಯುವಕ ಸಂತೋಷ್ ಎನ್ನುವವನದ್ದೇ ಎಂದು ಪೊಲೀಸರಿಗೆ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಕುಣಿಗಲ್ ತಾಲೂಕಿನ ಯುವಕ ವೃತ್ತಿಯಲ್ಲಿ ಕಾರ್ಪೆಂಟರ್
ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚಹಳ್ಳಿ ಗ್ರಾಮದ ನಿವಾಸಿ, ಬೆಂಗಳೂರು ಸುಂಕದಕಟ್ಟೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷ್ (28) ಮತ್ತು ಹುಲಿಯೂರುದುರ್ಗ ಹೋಬಳಿ ಕೆಬ್ಬಳಿ ಗ್ರಾಮದ ಶಾಲಿನಿ ನಡುವಿನ (21) ದುರಂತ ಪ್ರೇಮ ಕಥೆಯಿದು. ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು. ಆದರೆ, ಸಂತೋಷ್ ತನ್ನ ಹುಡುಗಿಯ ಕಡೆಯವರಿಗೆ ಮದುವೆಯಾಗುವುದಾಗಿ ಹೇಳಿದ್ದ. ಆದರೆ, ಹುಡುಗಿ ಕಡೆಯಯವರು ಅವನಿಗೆ ಬುದ್ದಿಮಾತನ್ನು ಹೇಳಿ ಕಳುಹಿಸಿದ್ದರು.
ಮನನೊಂದಿದ್ದ ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ
ಇದರಿಂದ ಮನನೊಂದಿದ್ದ ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇವರ ಮನೆಯವರು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಉಳಿದುಕೊಂಡಿದ್ದ. ಸಂತೋಷ್ ವಿಷ ಸೇವಿಸಿದ್ದಾನೆ ಎನ್ನುವುದನ್ನು ಅರಿತ ಶಾಲಿನಿ ಕೂಡಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಪ್ರೇಯಸಿ ಇನ್ನಿಲ್ಲ ಎನ್ನುವುದನ್ನು ಅರಿತ ಸಂತೋಷ್, ಆರು ತಿಂಗಳ ಹಿಂದೆ ರಾಜೇಂದ್ರಪುರ ಅರಣ್ಯ ಪ್ರದೇಶದಲ್ಲಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದ. ಪೊಲೀಸರಿಗೆ ದೂರು ದಾಖಲಾಗಿದ್ದರೂ, ಆತನ ಸುಳಿವು ಸಿಕ್ಕಿರಲಿಲ್ಲ.
6 ತಿಂಗಳ ನಂತರ ಯುವಕನ ಅಸ್ಥಿಪಂಜರ ಪತ್ತೆ
ಇತ್ತ, ಮಗಳ ಸಾವಿನಿಂದ ಖಿನ್ನತೆಗೆ ಒಳಗಾದ ಶಾಲಿನಿಯ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದ ಆರು ತಿಂಗಳ ನಂತರ ಸಂತೋಷ್ ಅವನದ್ದೇ ಎಂದು ಹೇಳಲಾಗುವ ಅಸ್ಥಿಪಂಜರ ಪತ್ತೆಯಾಗಿದೆ. ಇದು ಸಂತೋಷ್ ಅಸ್ಥಿಪಂಜರ ಎಂದು ಪೊಲೀಸರು ಕುಟುಂಬದವರಿಗೆ ಖಚಿತ ಪಡಿಸಿದ್ದಾರೆಂದು ಹೇಳಲಾಗಿದೆ. ಒಟ್ಟಿನಲ್ಲಿ, ವಿಧಿಯಾಟದ ಮುಂದೆ ಏನೂ ಇಲ್ಲ ಎನ್ನುವ ಹಾಗೇ, ಯುವ ಪ್ರೇಮಿಗಳು ಸಾವನ್ನಪ್ಪಿದ್ದರೆ, ಮಗಳ ಸಾವಿನ ನೋವಿನಿಂದ ಆಕೆಯ ತಾಯಿಯೂ ಇಹಲೋಕ ತ್ಯಜಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777