ಶಿರಾ ಉಪ ಚುನಾವಣೆ; ಪಕ್ಷದ ಗೆಲುವಿಗೆ ವ್ಯೂಹ ರಚಿಸಿದ ದೇವೇಗೌಡರು!
ತುಮಕೂರು, ಅಕ್ಟೋಬರ್ 21: ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. 2018ರಲ್ಲಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ತಂತ್ರ ಹಣೆದಿದ್ದಾರೆ.
ನವೆಂಬರ್ 3ರಂದು ಶಿರಾ ಕ್ಷೇತ್ರ ಉಪ ಚುನಾವಣೆ ನಡೆಯಲಿದೆ. ಜೆಡಿಎಸ್ನಿಂದ ಅಮ್ಮಾಜಮ್ಮ, ಬಿಜೆಪಿಯಿಂದ ಡಾ. ರಾಜೇಶ್ ಗೌಡ ಮತ್ತು ಕಾಂಗ್ರೆಸ್ನಿಂದ ಟಿ. ಬಿ. ಜಯಚಂದ್ರ ಅಭ್ಯರ್ಥಿಗಳು. ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಪ್ರಚಾರವನ್ನು ಅಬ್ಬರದಿಂದ ನಡೆಸುತ್ತಿವೆ.
ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ!
ಎಚ್. ಡಿ. ದೇವೇಗೌಡರು ಕ್ಷೇತ್ರವನ್ನು ಉಳಿಸಿಕೊಳ್ಳಲು ವ್ಯೂಹ ರಚನೆ ಮಾಡಿದ್ದಾರೆ. ಸ್ವತಃ ತಾವೇ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದ 2 ಚುನಾವಣೆಯಲ್ಲಿ ಉತ್ತಮ ಮತಗಳನ್ನು ಪಡೆದ, 2018ರಲ್ಲಿ ಗೆದ್ದ ಕ್ಷೇತ್ರ ಕೈ ತಪ್ಪಿ ಹೋಗಬಾರದು ಎಂಬುದು ದೇವೇಗೌಡರ ಕಾಳಜಿಯಾಗಿದೆ.
ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ!
2018ರಲ್ಲಿ ಜೆಡಿಎಸ್ನ ಬಿ. ಸತ್ಯನಾರಾಯಣ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ನ ಟಿ. ಬಿ. ಜಯಚಂದ್ರರನ್ನು 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಬಾರಿ ಬಿಜೆಪಿ ಅಬ್ಬರ ಜೋರಾಗಿದೆ.
ಶಿರಾ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಘೋಷಣೆ
ಉಸ್ತುವಾರಿಗಳ ನೇಮಕ
ಶಿರಾ ಕ್ಷೇತ್ರದಲ್ಲಿ ಗೆಲುವಿಗಾಗಿ ಎಚ್. ಡಿ. ದೇವೇಗೌಡರು ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರನ್ನು ನಿಯೋಜನೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರದಲ್ಲಿಯೂ ಇಬ್ಬರೂ ಸಕ್ರಿಯರಾಗಿದ್ದಾರೆ. ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂದು ಪಕ್ಷ ಗೆಲುವಿನ ಸೂತ್ರಗಳನ್ನು ರಚಿಸುತ್ತಿದೆ.
ಪ್ರಚಾರದಲ್ಲಿಯೂ ಚುರುಕು
ಶಿರಾದಲ್ಲಿ ಪ್ರಚಾರ ಕಾರ್ಯಕ್ಕಾಗಿ ತುಮಕೂರು ಗ್ರಾಮಾಂತರ ಶಾಸಕ ಡಿ. ಸಿ. ಗೌರಿಶಂಕರ್, ಪಕ್ಕದ ಚಿತ್ರದುರ್ಗ ಜಿಲ್ಲೆಯ ಪಕ್ಷದ ನಾಯಕ ವೀರೇಂದ್ರ ಪಪ್ಪಿ ಅವರನ್ನು ನಿಯೋಜನೆ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಅವರು ಸಹ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಕೇಳುತ್ತಿದ್ದಾರೆ.
ಹಿಂದಿನ ಚುನಾವಣೆ ಚಿತ್ರಣಗಳು
ಶಿರಾ ಕ್ಷೇತ್ರದಲ್ಲಿ 2008, 2013 ಮತ್ತು 2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ದಿ. ಬಿ. ಸತ್ಯನಾರಾಯಣ ಅಭ್ಯರ್ಥಿಯಾಗಿದ್ದರು. 2008ರಲ್ಲಿ 34,297, 2013ರಲ್ಲಿ 59,408 ಮತ ಪಡೆದು ಸೋತಿದ್ದರು. 2018ರಲ್ಲಿ74,338 ಮತ ಪಡೆದು ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಬಿ. ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ (60) ಅಭ್ಯರ್ಥಿಯಾಗಿದ್ದಾರೆ.
ಮೂರು ಪಕ್ಷಗಳ ಪ್ರತಿಷ್ಠೆ
ಶಿರಾದಲ್ಲಿ ಗೆಲ್ಲಲು ಮೂರು ಪಕ್ಷಗಳ ಪ್ರಯತ್ನ ಜೋರಾಗಿದೆ. ಕಳೆದ 3 ಚುನಾವಣೆಯಲ್ಲಿಯೂ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಆದ್ದರಿಂದ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಶಿರಾದಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರ ಮಾಡುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುತ್ತಿದ್ದಾರೆ.
ಕಾಂಗ್ರೆಸ್ ಪ್ರಚಾರ ಜೋರು
ಕ್ಷೇತ್ರದಲ್ಲಿ ಮತ್ತೆ ಗೆಲ್ಲಲು ಮಾಜಿ ಶಾಸಕ ಟಿ. ಬಿ. ಜಯಚಂದ್ರ ಪ್ರಯತ್ನ ನಡೆಸಿದ್ದಾರೆ. ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ. ಎನ್. ರಾಜಣ್ಣ, ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ ಸಹ ಜಯಚಂದ್ರ ಬೆಂಬಲಕ್ಕೆ ನಿಂತಿದ್ದಾರೆ. ಡಿ. ಕೆ. ಶಿವಕುಮಾರ್ ಕ್ಷೇತ್ರವನ್ನು 'ಕೈ'ವಶ ಮಾಡಿಕೊಳ್ಳಬೇಕು ಎಂದು ಪ್ರಚಾರ ಕಣಕ್ಕೆ ಧುಮುಕಿದ್ದಾರೆ.