ಶಿರಾದಲ್ಲಿ ಜೆಡಿಎಸ್ಗೆ ಗೆಲುವು ತಂದುಕೊಡಲಿಲ್ಲ ಅನುಕಂಪ!
ತುಮಕೂರು, ನವೆಂಬರ್ 10 : ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2018ರಲ್ಲಿ ಗೆದ್ದಿದ್ದ ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಟ್ಟಿದೆ.
ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಡಾ. ರಾಜೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಕ್ಷಕ್ಕೆ ಸಹ ಶಿರಾದಲ್ಲಿ ಇದು ಮೊದಲ ಗೆಲುವು. ಆದ್ದರಿಂದ, ಪಕ್ಷ ಇತಿಹಾಸ ನಿರ್ಮಾಣ ಮಾಡಿದಂತಾಗಿದೆ.
ಶಿರಾ ಉಪ ಚುನಾವಣೆ; ಗೆದ್ದು ಇತಿಹಾಸ ಬರೆದ ಬಿಜೆಪಿ
ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿತ್ತು. ಜೆಡಿಎಸ್ ಪಕ್ಷ ಬಿ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಅನುಕಂಪದ ಅಲೆ ಮತವನ್ನು ತಂದುಕೊಡಲಿಲ್ಲ.
ಶಿರಾ ಉಪ ಚುನಾವಣೆ ಫಲಿತಾಂಶ; ಕಾಂಗ್ರೆಸ್, ಬಿಜೆಪಿ ನೇರ ಪೈಪೋಟಿ
ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ನ ಟಿ. ಬಿ. ಜಯಚಂದ್ರ ಮತ್ತು ಬಿಜೆಪಿಯ ರಾಜೇಶ್ ಗೌಡ ನಡುವೆ ನೇರ ಪೈಪೋಟಿ ನಡೆಯಿತು. ಅಂತಿಮವಾಗಿ ರಾಜೇಶ್ ಗೌಡ ಗೆಲುವು ಸಾಧಿಸಿದ್ದಾರೆ.
RR Nagar, Sira By Election Results 2020 Live Updates; ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ
ಜೆಡಿಎಸ್ ಭರ್ಜರಿ ಪ್ರಚಾರ
ಶಿರಾ ಉಪ ಚುನಾವಣೆಗೆ ಅಮ್ಮಾಜಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿದ ದಿನದಿಂದ ಜೆಡಿಎಸ್ ನಾಯಕರು ಅಬ್ಬರದ ಪ್ರಚಾರ ಕೈಗೊಂಡಿದ್ದರು. ಮಾಜಿ ಸಚಿವ ಎಚ್. ಡಿ. ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿ ಶಂಕರ್ ಕ್ಷೇತ್ರದಲ್ಲಿ ಚೆನ್ನಾಗಿಯೇ ಪ್ರಚಾರ ಮಾಡಿದ್ದರು.
ಅನುಕಂಪ ಮತವಾಗಲಿಲ್ಲ
ಬಿ. ಸತ್ಯನಾರಾಯಣ ಅಕಾಲಿಕ ನಿಧನದಿಂದ ಉಪ ಚುನಾವಣೆ ಎದುರಾಯಿತು. ಆದರೆ, ಸಾವಿನ ಅನುಕಂಪ ಮತವಾಗಿ ಪರಿವರ್ತನೆ ಆಗಲಿಲ್ಲ. ಸತ್ಯನಾರಾಯಣ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೂ ಜೆಡಿಎಸ್ ಪಕ್ಷಕ್ಕೆ ಗೆಲುವು ಸಿಗಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪ್ರಭಾವಿಗಳಾಗಿದ್ದು, ಇದಕ್ಕೆ ಕಾರಣವಾಯಿತು.
ಚಿತ್ರಣ ಬದಲಿಸಿದ ವಿಜಯೇಂದ್ರ
ಶಿರಾದಲ್ಲಿ ಒಮ್ಮೆಯೂ ಗೆಲ್ಲದ ಬಿಜೆಪಿ ಉಪ ಚುನಾವಣೆ ಗೆಲ್ಲಬೇಕು ಎಂದು ಶಪಥ ಮಾಡಿತು. ಆದ ಕಾರಣ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರರನ್ನು ಉಸ್ತುವಾರಿಯಾಗಿ ನೇಮಕ ಮಾಡಿತು. ಶಿರಾದಲ್ಲಿಯೇ ವಾಸ್ತವ್ಯ ಹೂಡಿದ ಅವರು ಕ್ಷೇತ್ರದ ಚುನಾವಣಾ ಚಿತ್ರಣವನ್ನೇ ಬದಲಾವಣೆ ಮಾಡಿದರು.
ಕಾಂಗ್ರೆಸ್, ಬಿಜೆಪಿ ಪೈಪೋಟಿ
2 ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್ನ ಟಿ. ಬಿ. ಜಯಚಂದ್ರ ಅವರು ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ವಿರುದ್ಧ ಸೋಲು ಅನುಭವಿಸಿದ್ದಾರೆ. ಆದರೆ, ಚುನಾವಣೆಯಲ್ಲಿಅವರು ಪ್ರಬಲ ಪೈಪೋಟಿ ನೀಡಿದರು. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸೋತಿದ್ದ ಜಯಚಂದ್ರ ಉಪ ಚುನಾವಣೆಯಲ್ಲಿ ಮತ್ತೆ ಸೋಲು ಕಂಡಿದ್ದಾರೆ. ಜೆಡಿಎಸ್ನ ಅಮ್ಮಾಜಮ್ಮ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.