ಹೊನ್ನಾದೇವಿ ಸನ್ನಿಧಾನದಲ್ಲಿ 1 ದಿನದ ಮುನ್ನವೇ ಗೊತ್ತಾದ ಶಿರಾ ಫಲಿತಾಂಶ
ತುಮಕೂರು, ನ 9: ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶ, ಮಂಗಳವಾರದಂದು (ನ 10) ಹೊರಬೀಳಲಿದೆ.
ವಿವಿಧ ವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿವೆ. "ನಾನು ಏನಾದರೂ ಹೇಳಿದರೆ, ಅದನ್ನು ಸುಮ್ಮನೆ ಹೇಳುವುದಿಲ್ಲ. ಕ್ಷೇತ್ರದ ಚಿತ್ರಣವನ್ನು ಅರ್ಥ ಮಾಡಿಕೊಂಡೇ ಹೇಳುವುದು. ಎರಡು ಕ್ಷೇತ್ರದಲ್ಲಿ ಗೆಲುವು ನಮ್ಮದೇ"ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು.
ಶಿರಾ, ಆರ್.ಆರ್.ನಗರ ಉಪಚುನಾವಣೆ ಸಮೀಕ್ಷೆ: ಆಂತರಿಕ ವರದಿ
ಆದರೆ, ಜಿಲ್ಲೆಯ ಐತಿಹಾಸಿಕ ದೇವಾಲಯವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹೂಪ್ರಸಾದ ಸೇವೆಯಲ್ಲಿ ಅವರಿಗೆ ಖುಷಿಯ ವಿಚಾರ ಹೊರಬಿದ್ದಿದೆ. ತುಮಕೂರಿನ ಹೆಬ್ಬೂರು, ಹೊನ್ನಾದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಾರ್ಥಿಸಿಕೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದಾದರೆ ಬಲಗಡೆಯಿಂದ ಹೂಪ್ರಸಾದ ಕೊಡು ಎಂದು ಕಾಂಗ್ರೆಸ್ ಕಾರ್ಯಕರ್ತರು ತಾಯಿಯಲ್ಲಿ ಪ್ರಾರ್ಥಿಸಿಕೊಂಡಿದ್ದರು. ಆಗ ಕೆಲವೇ ಕ್ಷಣದಲ್ಲಿ ಬಲಗಡೆಯಿಂದ ಹೂವು ಬಿದ್ದಿದೆ. ಇದರಿಂದ, ಕಾಂಗ್ರೆಸ್ಸಿಗೇ ಜಯ ಎಂದು ಕಾರ್ಯಕರ್ತರು ನಂಬಿದ್ದಾರೆ.
ಈ ಹಿಂದೆ, ಜಿದ್ದಾಜಿದ್ದಿನ ಆಖಾಡವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ನಡೆದಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೂ ಬಲಗಡೆಯಿಂದ ಹೊನ್ನಾದೇವಿ ಹೂಪ್ರಸಾದ ನೀಡಿದ್ದಳು.
ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಡಾ.ರಾಜೇಶ್ ಗೌಡ, ಜೆಡಿಎಸ್ ನಿಂದ ಅಮ್ಮಾಜಮ್ಮ ಮತ್ತು ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ ಕಣದಲ್ಲಿದ್ದಾರೆ.