ಸಿಎಂ ಜತೆ ಬಹಳ ಹೊತ್ತು ಮಾತಾಡಿದ ವೆಂಕಟರಮಣಪ್ಪ ಹಾಗೂ ಶಕ್ತಿ ಪ್ರದರ್ಶನ
ಪಾವಗಡದ ತಿರುಮಣಿಯಲ್ಲಿ ಗುರುವಾರ ಶಕ್ತಿ ಸ್ಥಳ ಎಂದು ಹೆಸರಿಟ್ಟಿದ್ದ ಕಡೆ ಸೋಲಾರ್ ಪಾರ್ಕ್ ನ ಮೊದಲ ಹಂತದ ಉದ್ಘಾಟನೆ ಆಗಿದ್ದು ಹೌದಾದರೂ ಅಲ್ಲಿ ನಡೆದದ್ದು ಮಾಜಿ ಸಚಿವ ವೆಂಕಟರಮಣಪ್ಪ ಅವರ ಶಕ್ತಿ ಪ್ರದರ್ಶನ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಸ್ಥಳಕ್ಕೆ ಬಂದಾಗಲೂ ಕೇಳಿಬರದಷ್ಟು ಚಪ್ಪಾಳೆ - ಶಿಳ್ಳೆ ವೆಂಕಟರಮಣಪ್ಪ ಅವರಿಗೆ ಸಿಕ್ಕಿತು.
ವೇದಿಕೆ ಮೇಲೆ ವೆಂಕಟರಮಣಪ್ಪ ಬರುತ್ತಿದ್ದಂತೆಯೇ ಹೋ ಎಂದು ಶಿಳ್ಳೆ, ಚಪ್ಪಾಳೆ ಕೇಳಿಬಂತು. ಅಂದಹಾಗೆ ವೆಂಕಟರಮಣಪ್ಪ ಈ ಬಾರಿ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಆ ಕಾರಣದಿಂದಲೇ ಏನೋ ತಮ್ಮ ಶಕ್ತಿ ಪ್ರದರ್ಶನಕ್ಕೆ ಈ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡರು. ಈ ಬಗ್ಗೆ ಒನ್ಇಂಡಿಯಾ ಕನ್ನಡದಿಂದ ವೆಂಕಟರಮಣಪ್ಪ ಅವರನ್ನು ಮಾತನಾಡಿಸಲಾಯಿತು.
ಸೋಲಾರ್ ಪಾರ್ಕ್ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಪಂಚ್ ಡೈಲಾಗ್
ಹೌದು, ಅವರೆಲ್ಲ ಅಭಿಮಾನಿಗಳು. ನನ್ನ ಮೇಲಿನ ಅಭಿಮಾನ ಅಂದರು. ಇದರ ಜತೆಗೆ ತುಂಬ ಆಸಕ್ತಿಕರ ಅನಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಕ ಕುಳಿತು ಬಹಳ ಕಾಲ ವೆಂಕಟರಮಣಪ್ಪ ಮಾತನಾಡಿದರು. ಆದರೆ ಸಿದ್ದರಾಮಯ್ಯ ಅವರು ಮಾತ್ರ ಪತ್ರಿಕೆಯೊಂದನ್ನು ಓದುತ್ತಿರುವಂತೆ ಅಡ್ಡ ಹಿಡಿದು, ಮಾತನಾಡಿದರು.
ಸಿದ್ದರಾಮಯ್ಯ ಪಕ್ಕದಲ್ಲಿ ಕೂತಿದ್ದ ವೆಂಕಟರಮಣಪ್ಪ
ಸೋಲಾರ್ ಪಾರ್ಕ್ ಮೊದಲ ಹಂತದ ಉದ್ಘಾಟನೆ ಕಾರ್ಯಕ್ರಮ ನಡೆದ ಸ್ಥಳಕ್ಕೆ ಶಕ್ತಿಸ್ಥಳ (ಇಂದಿರಾಗಾಂಧಿಯವರ ಸಮಾಧಿ ಸ್ಥಳದ ಹೆಸರೂ ಇದೇ) ಎಂದು ಹೆಸರಿಡಲಾಗಿತ್ತು. ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಭಾಷಣ ಮಾಡಲು ಆರಂಭಿಸಿದಾಗ ಸಿದ್ದರಾಮಯ್ಯ ಅವರ ಪಕ್ಕ ಬಂದು ಕುಳಿತ ಮಾಜಿ ಸಚಿವ ವೆಂಕಟರಮಣಪ್ಪ, ತುಂಬ ಸಮಯ ಮಾತನಾಡುತ್ತಲೇ ಇದ್ದರು.
ಪತ್ರಿಕೆ ಅಡ್ಡ ಹಿಡಿದಿದ್ದ ಸಿಎಂ
ಈ ರೀತಿಯ ಮಾತುಕತೆಗೆ ಬೇರೆ ಅರ್ಥ ಕಲ್ಪಿಸಬಾರದು ಎಂಬ ಕಾರಣಕ್ಕೋ ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕೆಯೊಂದನ್ನು ಓದುತ್ತಿರುವಂತೆ ಅಡ್ಡ ಹಿಡಿದಿದ್ದರು. ಆದರೂ ವೆಂಕಟರಮಣಪ್ಪ ಮಾತಿಗೆ ತಲೆ ಅಲ್ಲಾಡಿಸುತ್ತಿದ್ದದ್ದು, ಸ್ಪಂದನೆ ನೀಡುತ್ತಿದ್ದದ್ದು ಕಂಡು ಬರುತ್ತಿತ್ತು.
ಹೈಕಮಾಂಡ್ ನಿರ್ಧಾರ
ಈ ಬಾರಿ ಪಾವಗಡ ವಿಧಾನಸಭಾ ಕ್ಷೇತ್ರದಿಂದ ವೆಂಕಟರಮಣಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈ ನಿರ್ಧಾರ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು. ನೀವೇ ಹೈಕಮಾಂಡ್ ಅಲ್ಲವಾ? ನಿಮ್ಮ ಮಾತೇ ಅಂತಿಮ ಎಂದು ಮತ್ತೆ ಕೆಣಕಿದಾಗ, ನಾನಲ್ಲ, ಅಲ್ಲಿದ್ದಾರೆ ಎಂದು ಲಗುಬಗೆಯಿಂದ ಹೊರಟುಬಿಟ್ಟರು.
ನನಗೇ ಕಾಂಗ್ರೆಸ್ ಟಿಕೆಟ್
ಕಾಂಗ್ರೆಸ್ ಟಿಕೆಟ್ ಹಾಗೂ ಚುನಾವಣೆ ಸ್ಪರ್ಧೆ ಬಗ್ಗೆ ಸ್ವತಃ ವೆಂಕಟರಮಣಪ್ಪ ಅವರನ್ನು ಮಾತನಾಡಿಸಿದಾಗ, ಈ ಸಲ ಕಾಂಗ್ರೆಸ್ ನಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಹೈ ಕಮಾಂಡ್ ನಿಂದ ತಮಗೆ ಟಿಕೆಟ್ ಅಂತಿಮ ಆಗುವ ಬಗ್ಗೆ ಅವರು ಬಹಳ ನಂಬಿಕೆ ಇರುವಂತೆ ಕಂಡುಬಂದರು.