ಶಿವಕುಮಾರ ಸ್ವಾಮೀಜಿ ವೈದ್ಯಲೋಕದ ಅಚ್ಚರಿಯೆಂದು ಡಾಕ್ಟರ್ ಬೆರಗಾದರೇಕೆ?
Recommended Video
'ಅವರು ನಿಜವಾಗಲೂ ಅಚ್ಚರಿ. ವೈದ್ಯರು ಅಂಥವರ ಬಗ್ಗೆ ಅಧ್ಯಯನ ಮಾಡಬೇಕು' ಅಂತಲೇ ಮಾತಿಗೆ ಆರಂಭಿಸಿದರು ವೈದ್ಯರಾದ ಸಂಜಯ್ ರಾಜ್. ಅವರು ಸದ್ಯಕ್ಕೆ ಇರುವುದು ತುಮಕೂರಿನಲ್ಲೇ. ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿ ಆರೋಗ್ಯ ಹಾಗೂ ಸ್ಟೆಂಟ್ ಅಳವಡಿಕೆ ಅಂದರೇನು ಇತ್ಯಾದಿ ವಿಚಾರಗಳ ಬಗ್ಗೆ ವೈದ್ಯರ ಅಭಿಪ್ರಾಯವೊಂದನ್ನು ಪಡೆಯಬೇಕು ಎಂಬುದು ಒನ್ ಇಂಡಿಯಾ ಕನ್ನಡದ ಉದ್ದೇಶವಾಗಿತ್ತು.
ಆ ಕಾರಣಕ್ಕೆ ಸಂಜಯ್ ರಾಜ್ ಅವರನ್ನು ಮಾತನಾಡಿಸಲಾಯಿತು. "ಸ್ವಾಮೀಜಿ ವೈದ್ಯರ ಚಿಕಿತ್ಸೆಗೆ ಉತ್ತಮವಾಗಿಯೇ ಸ್ಪಂದಿಸುತ್ತಿದ್ದಾರೆ. ಅವರಿಗೆ ಅನಸ್ತೇಷಿಯಾ ಬಳಸಿ ಶಸ್ತ್ರಚಿಕಿತ್ಸೆ ಮಾಡುವುದೆಲ್ಲ ಸವಾಲಿನ ವಿಷಯ. ಅದಕ್ಕೆ ಕಾರಣ ಅವರ ವಯಸ್ಸು. ಉಳಿದಂತೆ ಅವರು ಇಷ್ಟು ವರ್ಷ ಪಾಲಿಸಿಕೊಂಡು ಬಂದ ಶಿಸ್ತು, ಆಹಾರ ಕ್ರಮ, ಜೀವನಶೈಲಿ ಎಲ್ಲವೂ ಅವರ ದೇಹವನ್ನು ಅಷ್ಟು ಬಲಶಾಲಿಯನ್ನಾಗಿ ಇರಿಸಿದೆ" ಎಂದು ಅಭಿಪ್ರಾಯಪಟ್ಟರು.
ಶಿವಕುಮಾರ ಸ್ವಾಮೀಜಿ ವೈದ್ಯಲೋಕದ ಅಚ್ಚರಿಯೆಂದು ಡಾಕ್ಟರ್ ಬೆರಗಾದರೇಕೆ?
ಸ್ಟೆಂಟ್ ಅನ್ನು ಹೃದಯದಲ್ಲಿ ಅಳವಡಿಸಬಹುದು, ಆಹಾರ ಜೀರ್ಣ ಆಗಲು ಅನುಕೂಲ ಆಗಲಿ ಎಂದು ಅಳವಡಿಸಬಹುದು. ಆದರೆ ಇಂಥ ಎಲ್ಲ ಸ್ಟೆಂಟ್ ಗಳು ಇಷ್ಟು ಕಾಲ ಅಂತಷ್ಟೇ ಬಾಳಿಕೆ ಬರುತ್ತವೆ. ಆ ನಂತರ ಅದು ಉಪಯೋಗ ಆಗುವುದಿಲ್ಲ. ಹೊಸದಾಗಿ ಅಳವಡಿಸಬೇಕಾಗುತ್ತದೆ ಎಂದರು.
ವೈದ್ಯ ಲೋಕಕ್ಕೆ ಅಚ್ಚರಿ ಸ್ವಾಮೀಜಿ
ಅದೇ ರೀತಿಯಲ್ಲಿ ಶಿವಕುಮಾರ ಸ್ವಾಮೀಜಿಗೆ ಕೂಡ ಆಹಾರ ಜೀರ್ಣಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಸ್ಟೆಂಟ್ ಅಳವಡಿಸಿದ್ದಾರೆ ಎಂದು ತಿಳಿದು ಗೊತ್ತು. ಅದೆಂಥ ಸ್ಟೆಂಟ್ ಎಂಬ ಬಗ್ಗೆ ಮಾಹಿತಿ ನನಗೆ ಇಲ್ಲ. ಆ ಬಗ್ಗೆ ವಿವರವನ್ನು ಸ್ವಾಮೀಜಿ ಆರೋಗ್ಯದ ಕಾಳಜಿ ತೆಗೆದುಕೊಂಡಿರುವ ವೈದ್ಯರಿಂದ ತಿಳಿಯುವುದೇ ಉತ್ತಮ. ಆದರೆ ಸ್ವಾಮೀಜಿ ಸ್ಪಂದನೆ ಮಾತ್ರ ವೈದ್ಯಲೋಕದ ಅಚ್ಚರಿ ಎಂಬುದರಲ್ಲಿ ಅನುಮಾನವಿಲ್ಲ ಎಂದರು.
ಜಾಂಡೀಸ್, ಸುಸ್ತು ಮತ್ತಿತರ ಆರೋಗ್ಯ ಸಮಸ್ಯೆಗಳಾಗುತ್ತವೆ
ಸ್ಟೆಂಟ್ ಅಳವಡಿಸಿ, ಅದರ ಬಳಕೆ ಆಗುತ್ತಾ ಆಗುತ್ತಾ ಕ್ರಮೇಣ ತನ್ನ ಕೆಲಸ ನಿಲ್ಲಿಸುತ್ತದೆ. ಆಗ ಹೊಸದನ್ನು ಹಾಕಬೇಕಾಗುತ್ತದೆ. ಇನ್ನೂ ವಯಸ್ಸು ಕಡಿಮೆ ಇದ್ದರೆ ಹಾಗೂ ಆ ವ್ಯಕ್ತಿ ಆರೋಗ್ಯಪೂರ್ಣರಾಗಿ ಶಸ್ತ್ರಚಿಕಿತ್ಸೆ ತಡೆದುಕೊಳ್ಳುವ ಬಲ ಹೊಂದಿದ್ದರೆ ಶ್ರಮ ಆಗಲ್ಲ. ಜ್ವರ ಬರುವುದು, ಜಾಂಡೀಸ್ ಆಗುವುದು, ಸುಸ್ತು ಮತ್ತಿತರ ಲಕ್ಷಣಗಳೆಲ್ಲ ಆ ಸ್ಟೆಂಟ್ ನ ಕಾರ್ಯ ಚಟುವಟಿಕೆ ನಿಂತಿದೆ ಎಂಬುದನ್ನೇ ಸೂಚಿಸುತ್ತವೆ ಎಂದು ವಿವರಿಸಿದರು.
ಸ್ವಾಮೀಜಿ ದೇಹ ಚಟುವಟಿಕೆ ಆಗಿಯೇ ಇದೆ
ಈಗ ಕೂಡ ಗಮನಿಸಿದರೆ ಶಿವಕುಮಾರ ಸ್ವಾಮೀಜಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇಷ್ಟು ಪ್ರಮಾಣದಲ್ಲಿ ಸ್ಟೆಂಟ್ ಅಳವಡಿಸಿದ ನಂತರ ಕೂಡ ಅವರ ದೇಹ ಚಟುವಟಿಕೆ ಆಗಿದೆ. ಆಹಾರದಲ್ಲಿ ತರಕಾರಿ, ಹಣ್ಣು ಸೇವನೆ, ಶಿಸ್ತು ಪಾಲನೆ, ಉತ್ತಮ ಜೀವನ ಶೈಲಿ ಅಳವಡಿಸಿಕೊಂಡವರಲ್ಲಿ ಮಾತ್ರ ಇಂಥದ್ದೊಂದು ಅದ್ಭುತ ಶಕ್ತಿ ನೋಡಲು ಸಾಧ್ಯ ಎಂದು ತಿಳಿಸಿದರು.
ಚೆನ್ನೈನಿಂದ ವೈದ್ಯರು ಮಠಕ್ಕೆ ಬಂದಿದ್ದಾರೆ
ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಬುಧವಾರ ಜ್ವರ ಕಾಣಿಸಿಕೊಂಡಿತ್ತು. ಅವರ ಆರೋಗ್ಯ ಸ್ಥಿತಿ ಬಗ್ಗೆ ಆತಂಕ ಎದುರಾಯಿತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ತೆರಳಿದ ವೈದ್ಯರು ಸ್ವಾಮೀಜಿ ವೈದ್ಯಕೀಯ ವರದಿ ತೆಗೆದುಕೊಂಡು ಗುರುವಾರ ಚೆನ್ನೈಗೆ ತೆರಳಿ, ಅಲ್ಲಿಂದ ವೈದ್ಯರ ತಂಡವನ್ನು ಕರೆಸಿ ಪರೀಕ್ಷೆ ಮಾಡಿಸುವುದು ಹಾಗೂ ಅಲ್ಲಿಗೆ ಸ್ವಾಮೀಜಿಯನ್ನು ಕರೆದೊಯ್ಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.