Oneindia Exclusive: ಮಧುಗಿರಿ ಪ್ರತ್ಯೇಕ ಜಿಲ್ಲೆ ಆಗಬೇಕಾ?
ತುಮಕೂರು, ಅಕ್ಟೋಬರ್ 10: "ಮಧುಗಿರಿ ಪ್ರತ್ಯೇಕ ಜಿಲ್ಲೆ ಆಗಬೇಕು" ಎಂಬ ಕೂಗು ಮತ್ತೆ ಎದ್ದಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದ ಮೇಲೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರಿಗೆ ಈ ಬಗ್ಗೆ ಕಾಳಜಿ ಬಂದಿದೆ. ಕೊರಟಗೆರೆ, ಶಿರಾ, ಮಧುಗಿರಿ ಹಾಗೂ ಪಾವಗಡ ಈ ನಾಲ್ಕು ತಾಲೂಕು ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬುದು ಸದ್ಯದ ಬೇಡಿಕೆ. ಅದಕ್ಕೆ ಸರ್ಕಾರಕ್ಕೆ ಪರಂ ಪತ್ರ ಕೂಡ ಬರೆದಿದ್ದಾರೆ.
"ಮಧುಗಿರಿ ಜಿಲ್ಲೆ ಆಗಬೇಕು ಎಂಬುದು ತಾರ್ಕಿಕವಾಗಿ ಸರಿ. ಏಕೆಂದರೆ, ಪಾವಗಡ ತಾಲೂಕು ತುಮಕೂರು ಜಿಲ್ಲಾ ಕೇಂದ್ರದಿಂದ ಬರೋಬ್ಬರಿ ನೂರು ಕಿ.ಮೀ. ದೂರ ಇದೆ. ಇನ್ನು ತಿರುಮಣಿ ಅಂತೂ ಪಾವಗಡದಿಂದ ಮತ್ತೂ 30 ಕಿ.ಮೀ. ದೂರ. ಇದು ಬರೀ ಭೌಗೋಳಿಕ ದೂರ ಮಾತ್ರ ಅಲ್ಲ. ಮಾನಸಿಕವಾಗಿಯೂ ದೊಡ್ಡ ಅಂತರ ಬೆಳೆದುಹೋಗಿದೆ" ಎನ್ನುತ್ತಾರೆ ಪತ್ರಕರ್ತರಾದ ಕೆ. ಆರ್. ಜಯಸಿಂಹ.
ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡಿ; ಜಿ. ಪರಮೇಶ್ವರ ಪತ್ರ
ಮಧುಗಿರಿ ದಾಟಿದ ಮೇಲೆ ಮಡಕಶಿರಾ ಇದೆ. ಅದು ಆಂಧ್ರಪ್ರದೇಶ. ಅದನ್ನು ದಾಟಿದ ಮೇಲೆ ಸಿಗುವುದೇ ಪಾವಗಡ. ಈ ತಾಲೂಕಿಗೆ ಸುತ್ತಲೂ ಆಂಧ್ರಪ್ರದೇಶವೇ. ಜತೆಗೆ ಜಿಲ್ಲಾ ಕೇಂದ್ರವೂ ವಿಪರೀತ ದೂರ. ಪಾವಗಡ ತಾಲೂಕಿನಲ್ಲಿ ಲಿಂಗದಹಳ್ಳಿ ಜನರು ತಮಗೆ ಏನೇ ಬೇಕಾದರೂ ಚಿತ್ರದುರ್ಗ ಜಿಲ್ಲೆ ಕಡೆಗೆ ನೋಡುತ್ತಾರೆ. ಇನ್ನು ಪಾವಗಡ ತಾಲೂಕು ಕೇಂದ್ರದಲ್ಲಿ ಇರುವವರು ಅನಂತಪುರದ ಕಡೆಗೆ ನೋಡುತ್ತಾರೆ.
ಆ ಎರಡು ತಾಲೂಕಿನವರಿಗೆ ಜಿಲ್ಲಾ ಕೇಂದ್ರ ಆಗುವುದು ಬೇಡ
ತುಮಕೂರಿನಲ್ಲಿ ಎರಡು ಶೈಕ್ಷಣಿಕ ಜಿಲ್ಲೆ. ಒಂದು ತುಮಕೂರು, ಮತ್ತೊಂದು ಮಧುಗಿರಿ. ಹೀಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಕೊರಟಗೆರೆ, ಶಿರಾ, ಪಾವಗಡ ಹಾಗೂ ಮಧುಗಿರಿ ಸೇರುತ್ತದೆ. ಇವೇ ನಾಲ್ಕು ತಾಲೂಕು ಸೇರಿಸಿ, ಆಡಳಿತಾತ್ಮಕ ಜಿಲ್ಲೆ ಮಾಡಿ ಎಂಬುದು ಸದ್ಯಕ್ಕೆ ಒತ್ತಾಯ. ಆದರೆ ನಾಲ್ಕೂ ತಾಲೂಕಿನಲ್ಲಿ ಇದೇ ಅಭಿಪ್ರಾಯ ಇದೆಯಾ ಎಂದು ಗಮನಿಸಿದರೆ, ಉತ್ತರ 'ಇಲ್ಲ' ಅಂತಲೇ ಸಿಗುತ್ತದೆ. ಏಕೆಂದರೆ, ಶಿರಾದವರಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ತುಮಕೂರು ತಲುಪುವುದೇ ಸಲೀಸು. ಇನ್ನು ಕೊರಟಗೆರೆ ಕಥೆಯೂ ಅದೇ. ಮಧುಗಿರಿ ಹಾಗೂ ಪಾವಗಡದ ಜನರಿಗೆ ಮಾತ್ರ ಜಿಲ್ಲಾ ಕೇಂದ್ರ ಆಗಬೇಕು ಎಂಬ ಅಪೇಕ್ಷೆ. ಅದರಲ್ಲೂ ಪಾವಗಡದ ಜನರಿಗೆ ನಮ್ಮ ತಾಲೂಕೇ ಜಿಲ್ಲಾ ಕೇಂದ್ರ ಆಗಲಿ ಎಂಬ ಆಸೆ. ಪಾವಗಡಕ್ಕೂ ಮಧುಗಿರಿಗೂ ಹೋಲಿಸಿದರೆ ಹೆಚ್ಚಿನ ವ್ಯತ್ಯಾಸ ಇಲ್ಲ. ನಮ್ಮ ತಾಲೂಕನ್ನೇ ಜಿಲ್ಲಾ ಕೇಂದ್ರ ಮಾಡಬೇಕು ಎನ್ನುತ್ತಾರೆ.
ಸೋಲಾರ್ ಪಾರ್ಕ್ ಆಗದಿದ್ದರೆ ನೀನೇ ಎಂದು ಕೇಳುವವರಿರಲಿಲ್ಲ
ಈಗ ತುಮಕೂರು ಜಿಲ್ಲಾ ಕೇಂದ್ರ ಆಗಿರುವುದರಿಂದ ಮಧುಗಿರಿ, ಪಾವಗಡ ತಾಲೂಕುಗಳ ಜನರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಪಾವಗಡವಂತೂ ಶಾಪಗ್ರಸ್ತ ತಾಲೂಕು ಎನಿಸಿಕೊಂಡಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಲಿ ಸೋಲಾರ್ ಪಾರ್ಕ್ ಯೋಜನೆ ತಂದಿದ್ದರಿಂದ ಆರ್ಥಿಕತೆಗೆ ಒಂದಿಷ್ಟು ಜೀವ ಬಂತು. ಇಲ್ಲದಿದ್ದರೆ 'ನೀನೇ' ಎಂದು ಕೇಳುವವರಿರಲಿಲ್ಲ. ಅಷ್ಟೇ ಅಲ್ಲ, ಆಡಳಿತಾತ್ಮಕ ಕಾರಣಗಳಿಂದಲೂ ಭೌಗೋಳಿಕವಾಗಿ ಒಂದು ಜಿಲ್ಲೆ ಇರುವುದು ಅಭಿವೃದ್ಧಿಗೆ ಪೂರಕ ಅಲ್ಲ. ನೂರು- ನೂರಿಪ್ಪತ್ತು ಕಿ.ಮೀ. ದೂರದಿಂದ ಜಿಲ್ಲಾ ಕೇಂದ್ರಗಳಿಗೆ ಬರಬೇಕು ಅಂದರೆ ಅಲ್ಲಿನ ಜನರ ಪಾಡು ಹೇಳತೀರದು.
ಮಧುಗಿರಿ ಕ್ಷೇತ್ರದಲ್ಲಿ ಮಾನವ- ಪ್ರಾಣಿ ಸಂಘರ್ಷವೇ ಮುಖ್ಯ ಸವಾಲು
ಅರವತ್ತು ಕಿ.ಮೀ. ದೂರಕ್ಕೆ ಕೈಯಿಂದ ಕಾಸು ಕೊಡಬೇಕು
ಇನ್ನು ವಿದ್ಯಾರ್ಥಿಗಳು ಪ್ರತಿ ದಿನ ಪಾವಗಡದಿಂದ ತುಮಕೂರಿಗೆ ಬಂದು, ಹೋಗುವವರಿದ್ದಾರೆ. ಕೆಎಸ್ ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ನೀಡುವುದು ಅರವತ್ತು ಕಿ.ಮೀ. ದೂರಕ್ಕೆ ಮಾತ್ರ. ಉಳಿದಂತೆ ತಮ್ಮ ಕೈಯಿಂದ ಹಣ ಕೊಟ್ಟು ಓಡಾಡಬೇಕು. ಇನ್ನು ಕಾಲೇಜುಗಳು, ವೈದ್ಯಕೀಯ ಸೌಲಭ್ಯ, ಆಡಳಿತ ಕಚೇರಿಗಳು ಎಲ್ಲವೂ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ಇಂಥ ಎಲ್ಲವುಗಳಿಂದಲೂ ಜನರು ದೂರ ದೂರ ಉಳಿದಿರುತ್ತಾರೆ. ಈಗ ಮಧುಗಿರಿಯಲ್ಲಿ ಕಾಂಗ್ರೆಸ್ ನ ಪ್ರಭಾವಿ ನಾಯಕ ಕೆ. ಎನ್. ರಾಜಣ್ಣ ಹವಾ ಮೊದಲಿನಂತೆ ಇಲ್ಲ. ಏಕೆಂದರೆ, ರಾಜಕೀಯದಿಂದಲೇ ದೂರ ಆಗುವ ಮಾತನ್ನು ಅವರಾಡಿದ್ದಾರೆ. ಇನ್ನು ಪರಮೇಶ್ವರ್ ಸ್ಪರ್ಧಿಸುವುದು ಕೊರಟಗೆರೆ ಕ್ಷೇತ್ರದಿಂದ. ಶಿರಾದ ಟಿ. ಬಿ. ಜಯಚಂದ್ರ ಸುದ್ದಿಯಲ್ಲೇ ಇಲ್ಲ. ಇಂಥ ಸಂದರ್ಭದಲ್ಲಿ ಮಧುಗಿರಿ ಪ್ರತ್ಯೇಕ ಜಿಲ್ಲೆ ಮಾಡಿಸಿಬಿಟ್ಟರೆ ಅದರ ಶ್ರೇಯಸ್ಸು ತಮಗೆ ಸಿಗುತ್ತದೆ ಎಂಬ ದೂರಾಲೋಚನೆ ಪರಮೇಶ್ವರ್ ಅವರದು ಎನ್ನುತ್ತಾರೆ ರಾಜಕೀಯ ಪಂಡಿತರು.
ಕಾಂಗ್ರೆಸ್ ಸರ್ಕಾರವೇ ಇದ್ದಾಗ ಪರಂ ಏಕೆ ಸುಮ್ಮನಿದ್ದರು?
ಮೈತ್ರಿ ಸರ್ಕಾರದಲ್ಲಿ ಪರಮೇಶ್ವರ್ ಡಿಸಿಎಂ ಆಗಿದ್ದರು. ಅದಕ್ಕೂ ಮುಂಚೆ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಇಲ್ಲದ ಯೋಚನೆ, ಕಾಳಜಿ ಈಗ ಹೇಗೆ ಬಂತು? ಈಗ ಯಾಕೆ ಪರಮೇಶ್ವರ್ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ ಎಂದು ಕೆ. ಎನ್. ರಾಜಣ್ಣ ಪ್ರಶ್ನೆ ಮಾಡುತ್ತಾರೆ. ಬಿಡಿ, ಇವೆಲ್ಲ ರಾಜಕೀಯ ಆಯಿತು. ಪಾವಗಡ, ಶಿರಾ ತಾಲೂಕು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಶಿರಾಗಿಂತ ಪಾವಗಡ ತಾಲೂಕಿನ ಸ್ಥಿತಿ ಬಹಳ ಕಷ್ಟವಿದೆ. ಅಲ್ಲಿನ ಜನರಿಗೆ ಆಡಳಿತಾತ್ಮಕವಾಗಿ 'ಅನಾಥ ಪ್ರಜ್ಞೆ' ಕಾಡುತ್ತಿದೆ. ಅದನ್ನು ಹೋಗಲಾಡಿಸುವುದು ಹೇಗೆ ಎಂಬ ಪ್ರಶ್ನೆಯಲ್ಲಿ ಮಧುಗಿರಿ ಹೊಸ ಜಿಲ್ಲೆಯಾಗಬೇಕು ಎಂಬ ಒತ್ತಾಯ ಇದೆ. ಅದನ್ನು ಆಳುವ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.