ಮಂದಾರಗಿರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ವನ
ತುಮಕೂರು ಮತ್ತು ಬೆಂಗಳೂರು ರಸ್ತೆಯಲ್ಲಿ ತುಮಕೂರಿನಿಂದ ಸುಮಾರು ಹತ್ತು ಕಿಲೋಮೀಟರ್ ಕ್ರಮಿಸಿದ ನಂತರ ರಸ್ತೆಯ ಎಡಕ್ಕೆ ಅನತಿ ದೂರದಲ್ಲಿ ಕಡೆದು ಕೊರೆದು ನುಣುಪಾಗಿಸಿ ಪ್ರತಿಷ್ಠಾಪಿಸಿದಂತೆ ಕಾಣುವ ಗುಡ್ಡವೊಂದನ್ನು ಎಲ್ಲರೂ ನೋಡಿಯೇ ಇರುತ್ತೀರಿ.
ಬೆಟ್ಟದ ಮೇಲೆ ಸರಳ ರೇಖೆಯಂತ ಮೆಟ್ಟಿಲುಗಳ ಸಾಲು ಗಮನ ಸೆಳೆಯುತ್ತವೆ. ಈ ಬೆಟ್ಟದ ಹೆಸರು ಮಂದಾರಗಿರಿ. ನಾನು ಚಿಕ್ಕಂದಿನಿಂದ ಈ ಬೆಟ್ಟವನ್ನು ಗಮನಿಸುತ್ತಿದ್ದೇನಾದರೂ ಇಲ್ಲಿಗೆ ಬಂದದ್ದು ತೀರಾ ವಿರಳ. ನಿನ್ನೆ ಪೂರ್ವನಿಯೋಜಿತ ಕೆಲಸದ ಮೇಲೆ ಇಲ್ಲಿಗೆ ಬರಬೇಕಾಯಿತು.
ಮಂದಾರಗಿರಿ ಈಗ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ನೂರಾರು ಕಾರು, ಬೈಕ್ ಗಳಲ್ಲಿ ಪ್ರವಾಸಿಗರು ದಿನದ ಔಟಿಂಗ್ ಗಾಗಿ ಬಂದು ಜಮಾಯಿಸಿದ್ದರು. ನಮ್ಮ ಸುತ್ತಲೇ ಇರುವ ಬೆಟ್ಟ ಗುಡ್ಡಗಳು "ಬೆಳೆವ ಪರಿ" ಕಂಡ ಸೋಜಿಗ ನನ್ನದು.
ಮಂದಾರಗಿರಿ ಬುಡದಲ್ಲಿ ಕುರಚಲು ಗುಡ್ಡ-ಕಲ್ಲುಗಳಿಂದ ಕೂಡಿದ ಎಂಟೂವರೆ ಎಕರೆ ಪ್ರದೇಶ ಶ್ರೀ ಸಿದ್ದಗಂಗಾ ಮಠಕ್ಕೆ ಸೇರಿದ ಜಮೀನಿದೆ. ಪ್ರಕೃತಿ ಸಹಜವಾಗಿ ಹೊಂಗೆ, ಮುತ್ತುಗದ ಮರಗಳು ಹೇರಳವಾಗಿ ಬೆಳೆದು ನಿಂತಿವೆ. ಈ ಜಾಗವನ್ನೀಗ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿನಲ್ಲಿ ಜೀವವೈವಿಧ್ಯ ವನವನ್ನು ನಿರ್ಮಿಸುವ ಕೆಲಸ ಆರಂಭವಾಗಿದೆ.
ಇದರ ರೂವಾರಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ರುದ್ರಮೂರ್ತಿ. ಅವರ ಜೊತೆ ಜೊತೆಗೆ ನನ್ನ ಎರಡೂವರೆ ದಶಕದ ಗೆಳೆಯ ದೇವರಾಜ್. ಇವರಿಬ್ಬರ ಒತ್ತಾಯವೋ, ಪ್ರೀತಿಯ ಆಮಂತ್ರಣವೋ ನಾನಿಲ್ಲಿಗೆ ಬರಬೇಕಾಯಿತು. ಇಲ್ಲೊಂದು ಜೀವ ವೈವಿಧ್ಯ ವನ ನಿರ್ಮಿಸುವ ಕೆಲಸಕ್ಕೆ ಆರಂಭದಿಂದಲೇ ತೊಡಗಿಸಿಕೊಳ್ಳುವ ಅವಕಾಶ ಇವರೀರ್ವರೂ ನನಗೆ ಕಲ್ಪಿಸಿದ್ದಾರೆ.
ವನ ನಿರ್ಮಿಸುವ ಕೆಲಸವೇ ಮಹತ್ವದ್ದು, ಅದೂ ಶ್ರೀ ಮಠದ ಗುರುಗಳ ಹೆಸರಿನ ವನವೆಂದರೆ ಮಹತ್ವದ ಕೆಲಸಕ್ಕೆ ಭಾಗ್ಯ ಒದಗಿಬಂದಂತೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬೇಕೆಂಬುದರ ಬಗ್ಗೆ ನಮ್ಮೆಲ್ಲರ ಒಳನೋಟಗಳು ಮಾತಾಗಿ ಹಂಚಿಹೋದವು. ಇನ್ನು ಉಳಿದಿರುವುದು ಕ್ರಿಯೆ. ಕಾಯಕವೇ ಕೈಲಾಸ ಎಂಬ ಶರಣ ತತ್ವದ ಮೇಲೆ ನಡೆವುದಷ್ಟೇ ಬಾಕಿ.
ಅಂದಹಾಗೆ ಶ್ರೀ ಮಠದ ಜಮೀನಿನ ಸುತ್ತಲ ಸರ್ಕಾರಿ ಭೂಮಿಯಲ್ಲಿ ಕೈಗಾರಿಕೆ ತ್ಯಾಜ್ಯ ಸುರಿದಿರುವುದನ್ನು ಕಂಡು ಕೊಂಚ ಆತಂಕಗೊಂಡೆನು. ತುಮಕೂರು ಜಿಲ್ಲಾಡಳಿತ ಆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.
ಸುತ್ತಲ ಅಷ್ಟೂ ಭೂಮಿಯಲ್ಲಿ ಹಸಿರುಕ್ಕಿಸುವ ಕಾಯಕ ಜೀವ ವೈವಿಧ್ಯ ವನ ನಿರ್ಮಾಣದಲ್ಲಿ ತೊಡಗಿರುವ ನಾವೇ ಮಾಡುತ್ತೇವೆ. ಸುಮಾರು ಮುನ್ನೂರೋ ನಾನೂರೋ ಎಕರೆಯಷ್ಟು ವಿಶಾಲವಾಗಿ ಹರವಿಕೊಂಡಿರುವ ಕುರುಚಲು ಗುಡ್ಡಗಳಲ್ಲಿ ಲಕ್ಷ ಲಕ್ಷ ಸಸಿಗಳನ್ನು ನೆಡುವ ಕೆಲಸ ನಮಗೇ ಇರಲಿ. ಅಲ್ಲಿಂದ ಕೈಗಾರಿಕೆ ತ್ಯಾಜ್ಯ ತೆಗೆಸಿ ಪರಿಸರವನ್ನು ಕಾಪಾಡುವ ಜವಾಬ್ದಾರಿ ಜಿಲ್ಲಾಡಳಿತ ವಹಿಸಿಕೊಳ್ಳಲಿ.